ವಿಜಯಪುರ: ದೇಶದಲ್ಲಿ ಮತದಾರರ ಸಮಗ್ರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ನಡೆಯುತ್ತಿದ್ದು, ಇದರ ಬಗ್ಗೆ ಪಕ್ಷದ ಕಾರ್ಯಕರ್ತರು ಸಾರ್ವಜನಿಕರಿಗೆ ಸೂಕ್ತ ಮಾಹಿತಿ ಒದಗಿಸಬೇಕು ಹಾಗೂ ಕೇಂದ್ರ ಸರ್ಕಾರದ ಸಾಧನೆಗಳನ್ನು ಪ್ರತಿಯೊಬ್ಬರಿಗೂ ಮನವರಿಕೆ ಮಾಡಿಕೊಡಬೇಕು ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಎನ್.ಎಲ್. ಅಂಬರೀಶ್‌ಗೌಡ ತಿಳಿಸಿದರು.

ಪಟ್ಟಣದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಬಿಎಲ್‌ಎ-೨ ಮತ್ತು ಬೂತ್ ಅಧ್ಯಕ್ಷರ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು,

ಈಗಾಗಲೇ ಎಸ್‌ಐಆರ್ ಪ್ರಕ್ರಿಯೆ ಪರಿಣಾಮವಾಗಿ ಪಶ್ಚಿಮ ಬಂಗಾಳ ರಾಜ್ಯದಲ್ಲಿ ೯೨ ಲಕ್ಷ ಹಾಗೂ ಬಿಹಾರದಲ್ಲಿ ೬೦ ಲಕ್ಷಕ್ಕೂ ಹೆಚ್ಚು ಅಕ್ರಮ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ನಮ್ಮ ರಾಜ್ಯದಲ್ಲಿಯೂ ಬಾಂಗ್ಲಾದೇಶ ಸೇರಿದಂತೆ ಅನ್ಯ ದೇಶಗಳ ನಾಗರಿಕರು ಅಕ್ರಮವಾಗಿ ನೆಲೆಸಿದ್ದು, ಇಲ್ಲೂ ಸಹ ಎಸ್‌ಐಆರ್ ಪ್ರಕ್ರಿಯೆ ಚುರುಕಾಗಿ ನಡೆಯುತ್ತಿದೆ ಎಂದು ವಿವರಿಸಿದರು.

ಪಟ್ಟಣದಲ್ಲಿ ಒಟ್ಟು ೩೩ ಬೂತ್‌ಗಳಿದ್ದು, ಎಲ್ಲ ಬೂತ್ ಅಧ್ಯಕ್ಷರು ಹಾಗೂ ಬಿಎಲ್‌ಎ-೨ (ಬೂತ್ ಮಟ್ಟದ ಏಜೆಂಟರು)ಗಳು ಸಾರ್ವಜನಿಕರ ಮನೆ ಬಾಗಿಲಿಗೆ ತೆರಳಿ ಎಸ್‌ಐಆರ್ ಕುರಿತು ಜಾಗೃತಿ ಮೂಡಿಸಬೇಕು. ಬಿಎಲ್‌ಎ-೨ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುವುದರ ಜೊತೆಗೆ, ಪ್ರಧಾನಿ ನರೇಂದ್ರ ಮೋದಿ ಅವರು ಜನಸಾಮಾನ್ಯರಿಗೆ ನೀಡಿರುವ ಸೌಲಭ್ಯಗಳನ್ನು ಮನೆಮನೆಗೆ ತಲುಪಿಸಬೇಕು ಎಂದು ಸೂಚಿಸಿದರು.

ಕೇಂದ್ರದ ಸಾಧನೆ ಜನರಿಗೆ ತಲುಪಿಸಿ:


ಬಿಜೆಪಿ ಟೌನ್ ಅಧ್ಯಕ್ಷ ವೆಂಕಟೇಶ್ ಪ್ರಭು ಮಾತನಾಡಿ, ಪ್ರತಿಯೊಬ್ಬ ಕಾರ್ಯಕರ್ತರು ತಮಗೆ ನೀಡಿರುವ ಜವಾಬ್ದಾರಿಯನ್ನು ಅರಿತು ನಿಷ್ಠೆಯಿಂದ ಕೆಲಸ ಮಾಡಬೇಕು. ಮನೆ ಮನೆಗೆ ತೆರಳಿದಾಗ ಪ್ರಸ್ತುತ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಹಾಗೂ ಕೇಂದ್ರದ ಮೋದಿಯವರ ಜನಪರ ಸಾಧನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಕರೆ ನೀಡಿದರು.

ಸಭೆಯಲ್ಲಿ ಪಕ್ಷದ ಮುಖಂಡರಾದ ಬಲಮುರಿ ಶ್ರೀನಿವಾಸ್, ಧರ್ಮಪುರ ಅನಿಲ್, ಬುಲೆಟ್ ರಾಮಚಂದ್ರಪ್ಪ, ರಾಮಕೃಷ್ಣ ಹೆಗಡೆ, ಭಗವಾನ್, ಶಾಮಣ್ಣ, ನಾಗವೇಣಿ, ಚಂದು, ಶಾಮಣ್ಣ, ವಿಜಯ ರಾಘವೇಂದ್ರ, ತಾಯಮ್ಮ, ಪ್ರೇಮ, ಭಾಗ್ಯಮ್ಮ, ಹಾಗೂ ಶಿವಣ್ಣ ಉಪಸ್ಥಿತರಿದ್ದರು.