ಬಳ್ಳಾರಿ: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಬೆಳಕಿಗೆ ಬಂದಿರುವ ಘಟಿಕೋತ್ಸವ ಪ್ರಮಾಣಪತ್ರ ಹಗರಣಕ್ಕೆ ಸಂಬಂಧಿಸಿದಂತೆ ವಿವಿಯ ಪ್ರಭಾರ ಕುಲಪತಿ, ಕುಲಸಚಿವ ಮತ್ತು ಸಿಬ್ಬಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಲು ಪೊಲೀಸರು ಸಿದ್ದತೆ ನಡೆಸಿದ್ದಾರೆ.

ಈ ಹಗರಣದ ತನಿಖೆ ನಡೆಸಿದ ನಿವೃತ್ತ ನ್ಯಾಯಾಧೀಶರ ಸಮಿತಿಯ ವರದಿಯಲ್ಲಿ ನಿಕಟಪೂರ್ವ ಪ್ರಭಾರ ಕುಲಪತಿಯಾಗಿದ್ದ ಸಾಹೇಬ್‌ ಅಲಿ, ನಿಕಟಪೂರ್ವ ಮೌಲ್ಯಮಾಪನ ಕುಲಸಚಿವ ಪ್ರೊ.ರಮೇಶ್‌ ಓಲೇಕರ್‌, ಸಿಬ್ಬಂದಿ ಮಹಾಂತೇಶ್‌, ಹನುಮೇಶ ವಿರುದ್ಧ ಆರೋಪ ಕೇಳಿಬಂದಿದೆ. ಈ ಬಗ್ಗೆ ಎಫ್‌ಐಆರ್‌ ದಾಖಲಿಸಲು ಎಸ್ಪಿ ಡಾ.ಸುಮನ್‌ ಡಿ.ಪನ್ನೇಕರ್‌ ಅವರನ್ನು ಹಾಗೂ ಗ್ರಾಮೀಣ ಠಾಣೆ ಪೊಲೀಸರನ್ನು ಸಂಪರ್ಕಿಸಿದ್ದು, ಶೀಘ್ರದಲ್ಲಿಯೇ ಸಂಬಂಧಿಸಿದವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗುವುದು ಎಂದು ವಿವಿಯ ಹಾಲಿ ಕುಲಪತಿ ಪ್ರೊ.ಎಂ.ಮುನಿರಾಜು ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿವರ ನೀಡಿದ ಅವರು, ವಿವಿಯಲ್ಲಿ ಸುಳ್ಳು ದಾಖಲೆಗಳನ್ನು ಸಲ್ಲಿಸಿ ನೇಮಕವಾಗಿರುವ ಅನಂತ್‌ ಎಲ್‌.ಝಂಡೇಕರ್‌ ಅವರ ಬಗ್ಗೆ ಸೇವಾ ಅವಧಿಯಲ್ಲಿನ ಮಾಹಿತಿ, ದಾಖಲೆಗಳನ್ನು ಸಂಗ್ರಹಿಸಿದೆ. ಇದರ ತನಿಖೆಗಾಗಿ ಜಿಲ್ಲಾ ನ್ಯಾಯಾಧೀಶ ಒಳಗೊಂಡ ಸಮಿತಿಯನ್ನು ಸಹ ರಚಿಸಲಾಗಿದೆ. ಶೀಘ್ರದಲ್ಲಿ ಇವರ ವಿರುದ್ಧವೂ ಸಹ ಕ್ರಮ ಕೈಗೊಳ್ಳಲಾಗುವುದು ಎಂದರು.

ವಿವಿಯ ಸಹಾಯಕ ಪ್ರಾಧ್ಯಾಪಕ ಮೋಹನ್‌ ದಾಸ್‌ ಸೇರಿ ಮೂವರ ವಿರುದ್ಧ ಕಲಬುರಗಿಯ ಜಿಲ್ಲೆಯ ವಾಡಿ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈ ಹಿನ್ನೆಲೆ ಅವರಿಗೆ ರಜೆ ನೀಡಲಾಗಿದೆ. ಅವರ ವೇತನವನ್ನು ತಡೆ ಹಿಡಿದಿದ್ದು, ಪೊಲೀಸರಿಂದ ಬಿ ರಿಪೋರ್ಟ್‌ ತಲುಪಿದ ಬಳಿಕ ಅವರ ವೇತನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.

-------