ಸಾರಾಂಶ
ಧಾರವಾಡ:
ಅಡುಗೆ ಅನಿಲ ಪೈಪ್ಲೈನ್ ಸೋರಿಕೆಯಾಗಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೆಲಹೊತ್ತು ಜನರು ಆತಂಕಗೊಂಡ ಘಟನೆ ಇಲ್ಲಿನ ರಜತಗಿರಿಯಲ್ಲಿ ಭಾನುವಾರ ನಡೆದಿದೆ.ನಗರದ ಕೆಲವು ಕಡೆಗಳಲ್ಲಿ ಭೂಮಿಯೊಳಗೆ ಗ್ಯಾಸ್ ಪೈಪ್ಲೈನ್ ಅಳವಡಿಸಲಾಗಿದೆ. ಅದರಂತೆ ರಜತಗಿರಿಯಲ್ಲೂ ಅಳವಡಿಸಿದ್ದು, 1ನೇ ಕ್ರಾಸ್ನಲ್ಲಿ ಬೆಳಗ್ಗೆ 11ರ ಹೊತ್ತಿಗೆ ಏಕಾಏಕಿ ಪೈಪ್ನಲ್ಲಿ ಹೊಗೆ ಕಾಣಿಸಿಕೊಂಡು ಒಂದು ಕಡೆ ಬೆಂಕಿ ಹೊತ್ತಿದೆ. ಜನರು ಅದನ್ನು ನೋಡುತ್ತಿದ್ದಂತೆ ಮತ್ತೆರಡು ಕಡೆಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಭಯಭೀತರಾದ ಜನರು ತಮ್ಮ ಮನೆಗಳಲ್ಲಿನ ಅನಿಲ ಸಂಪರ್ಕ ಕಡಿತಗೊಳಿಸಿ ಸಂಭವನೀಯ ಅನಾಹುತ ತಪ್ಪಿಸಿದ್ದಾರೆ.
ಬೆಂಕಿ ಪ್ರಮಾಣ ಹೆಚ್ಚುತ್ತಿದ್ದಂತೆ ಪೈಪ್ಲೈನ್ ಮೂಲಕ ಅಡುಗೆ ಅನಿಲ ಪೂರೈಸುವ ಇಂಡಿಯನ್ ಆಯಿಲ್ ಅದಾನಿ ಗ್ಯಾಸ್ (ಐಒಎಜಿ) ಸಂಸ್ಥೆಗೆ ಹಾಗೂ ಅಗ್ನಿಶಾಮಕ ದಳಕ್ಕೆ ಜನರು ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಬೆಂಕಿ ಹತೋಟಿಗೆ ಬಂದಿರಲಿಲ್ಲ. ಅನಿಲ ಪೂರೈಕೆ ವಾಲ್ವ್ ಬಂದ್ ಮಾಡಿದ ಬಳಿಕವೇ ಹತೋಟಿಗೆ ಬಂದಿದೆ.ಬೆಂಕಿ ಹೊತ್ತಿಕೊಂಡ ಸ್ಥಳದಲ್ಲಿದ್ದ ವಾಹನಗಳನ್ನು ನಿವಾಸಿಗಳು ಬೇರೆ ಕಡೆಗೆ ಸ್ಥಳಾಂತರ ಮಾಡಿದ್ದಾರೆ. ಘಟನೆಯಿಂದ ಯಾವುದೇ ಹಾನಿ ಸಂಭವಿಸಿಲ್ಲ. ಆದರೆ, ಬೆಂಕಿಯಿಂದ ಸುತ್ತಲಿನ ಕೆಲವು ಗಿಡಗಳು ಸುಟ್ಟಿವೆ. ಬೆಂಕಿ ಕಾಣಿಸಿಕೊಂಡ ಕೆಲಕ್ಷಣದಲ್ಲೇ ಸಂಬಂಧಿಸಿದ ಕಂಪನಿಗೆ ಮಾಹಿತಿ ನೀಡಿದರೂ ಸೂಕ್ತ ಸ್ಪಂದನೆ ನೀಡಲಿಲ್ಲ. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುವಂತಾಗಿತ್ತು. ಅಷ್ಟರಲ್ಲೇ ಪಾಲಿಕೆ ಸದಸ್ಯ ಆನಂದ ಯಾವಗಲ್ಲ ಸೇರಿ ಸ್ಥಳೀಯರು ವಾಲ್ವ್ ಹುಡುಕಿ ಬಂದ್ ಮಾಡಿ ಹೆಚ್ಚಿನ ಅವಘಡ ತಪ್ಪಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಒಂದು ಗಂಟೆ ಬಳಿಕ ಬಂದು ವಾಲ್ವ ಬಂದ್ ಮಾಡಿದ್ದಾರೆ. ಇಂತಹ ಅವಘಡಗಳು ಸಂಭವಿಸಿದಾಗ ಕಂಪನಿ ಸಿಬ್ಬಂದಿ ತ್ವರಿತವಾಗಿ ಸ್ಪಂದಿಸಿ ಹೆಚ್ಚಿನ ಅನಾಹುತ ತಡೆಯಬೇಕು ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.