ಸಾರಾಂಶ
ಸಹಕಾರಿ ಸಂಘಗಳು ತತ್ವ ಸಿದ್ಧಾಂತ, ಆದರ್ಶ, ನಂಬಿಕೆ, ವಿಶ್ವಾಸದ ಮೇಲೆ ನಡೆಯುತ್ತಿದೆ.
ಭಟ್ಕಳ: ಸರ್ಪನಕಟ್ಟೆಯ ವಾಸುಕಿ ಸೌಹಾರ್ದ ಪತ್ತಿನ ಸಹಕಾರಿ ಸಂಘದ ರಂಗಿಕಟ್ಟೆ ಶಾಖೆ ಗಣಹೋಮ ಮತ್ತು ಲಕ್ಷ್ಮೀಪೂಜೆ ಮಾಡುವುದರ ಮೂಲಕ ಲೋಕಾರ್ಪಣೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಉಪಸ್ಥಿತರಿದ್ದ ರಾಜ್ಯ ಸಂಯುಕ್ತ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕ ಹಾಗೂ ಕೆನರಾ ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಮೋಹನದಾಸ ನಾಯಕ ಮಾತನಾಡಿ, ಸಹಕಾರಿ ಸಂಘಗಳು ತತ್ವ ಸಿದ್ಧಾಂತ, ಆದರ್ಶ, ನಂಬಿಕೆ, ವಿಶ್ವಾಸದ ಮೇಲೆ ನಡೆಯುತ್ತಿದೆ. ಆದರೆ ಇಂದು ಕೆಲವರು ಸಹಕಾರಿ ಸಂಘಗಳನ್ನು ತಮ್ಮ ಸ್ವಾರ್ಥಕ್ಕೆ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇದು ಸರಿಯಲ್ಲ. ಸಹಕಾರಿ ಸಂಘಗಳು ಜನರ ನಂಬಿಕೆ, ಪ್ರೀತಿ, ವಿಶ್ವಾಸದಿಂದ ಕಾರ್ಯ ನಿರ್ವಹಿಸಬೇಕು. ಸಹಕಾರಿ ಸಂಘದ ಆಡಳಿತ ಮಂಡಳಿ ಮತ್ತು ಸಿಬ್ಬಂದಿಯಲ್ಲಿ ಶಿಸ್ತು ಮುಖ್ಯವಾಗಿದೆ. ಸಹಕಾರಿ ಸಂಘಗಳ ಮಧ್ಯೆ ಸ್ಪರ್ಧೆ ಸರಿಯಲ್ಲ. ಸಹಕಾರಿ ಸಂಘಗಳು ಸಹಕಾರಿ ಕಾಯ್ದೆಯಡಿ ಇತಿಮಿತಿಯಲ್ಲಿ ವ್ಯವಹಾರ ಮಾಡಿ ಗ್ರಾಹಕರ ವಿಶ್ವಾಸಗಳಿಸಿದರೆ ಎಂದಿಗೂ ಸಮಸ್ಯೆ ಉಂಟಾಗುವುದಿಲ್ಲ. ವಾಸುಕಿ ಸೌಹಾರ್ದ ಸಹಕಾರಿಯಲ್ಲಿ ಅನುಭವಿ ನಿರ್ದೇಶಕರಿದ್ದು, ಈ ಸಂಘ ಉತ್ತಮವಾಗಿ ನಡೆಯಲಿ ಎಂದು ಹಾರೈಸಿದರು.ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಗಜೇಂದ್ರ ಶೆಟ್ಟಿ ಸಂಘದ ಕಳೆದ 4 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಂಡಿದೆ ಎಂದರು.
ಸಂಘದ ವೃತ್ತಿಪರ ನಿರ್ದೇಶಕ ಸುಭಾಷ್ ಶೆಟ್ಟಿ ಮಾತನಾಡಿ, ಸಂಘ ₹11.25 ಕೋಟಿ ಠೇವಣಿ ಹೊಂದಿದೆ. 9 ಕೋಟಿ ಸಾಲ ವಿತರಿಸಿದೆ. ಸಂಘದಲ್ಲಿ ಎಟಿಎಂ, ಆರ್ಟಿಜಿಎಸ್, ನೆಫ್ಟ್ ಸೇರಿದಂತೆ ಗ್ರಾಹಕರಿಗೆ ತ್ವರಿತ ಸೇವೆ ನೀಡಲಾಗುತ್ತಿದೆ. ಮಾರ್ಚ್ ಅಂತ್ಯಕ್ಕೆ ₹29 ಲಕ್ಷ ನಿವ್ವಳ ಲಾಭ ಗಳಿಸಿ ಅಭಿವೃದ್ಧಿ ಪಥದಲ್ಲಿ ಸಾಗಿದೆ ಎಂದರು. ವೇದಿಕೆಯಲ್ಲಿ ಉಪಾಧ್ಯಕ್ಷ ನಾರಾಯಣ ಗವಾಳಿ, ನಿರ್ದೇಶಕರಾದ ಮಾದೇವ ನಾಯ್ಕ, ಸಂತೋಷ ಶೇಟ್. ಅಶ್ರಫ್, ಜಯಾ ಭಟ್ಟ ಇದ್ದರು.ಸಂಘದ ಮುಖ್ಯಕಾರ್ಯನಿರ್ವಾಹಕ ಕಿಶನ್ ಶೆಟ್ಟಿ ವಂದಿಸಿದರು.