ಸಹಕಾರ ಸಂಘಗಳು ಆರ್ಥಿಕ ಶಕ್ತಿಯಾಗಿ ಯಶಸ್ಸು ಸಾಧಿಸುತ್ತಿವೆ: ಮಹೇಶ್‌

| Published : Nov 15 2025, 01:00 AM IST

ಸಾರಾಂಶ

ಚಿಕ್ಕಮಗಳೂರುಜಿಲ್ಲೆಯ ಸಹಕಾರಿ ಕ್ಷೇತ್ರದ ಸಹಕಾರ ಸಂಘಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸಾಲ ಸೌಲಭ್ಯ ಒದಗಿಸುವ ಮೂಲಕ ಆರ್ಥಿಕ ಶಕ್ತಿಯಾಗಿ ಯಶಸ್ಸು ಸಾಧಿಸುತ್ತಿವೆ ಎಂದು ಕಾಸ್ಕಾರ್ಡ್ ಬ್ಯಾಂಕ್ ಜಿಲ್ಲಾ ನಿರ್ದೇಶಕ ಈಶ್ವರಹಳ್ಳಿ ಮಹೇಶ್ ಹೇಳಿದರು.

- ಅಖಿಲ ಭಾರತ ಸಹಕಾರ ಸಪ್ತಾಹ, ಜಿಲ್ಲಾ ಸಹಕಾರ ಯೂನಿಯನ್‌ ಸಭಾಂಗಣದಲ್ಲಿ ಉದ್ಘಾಟನೆ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಜಿಲ್ಲೆಯ ಸಹಕಾರಿ ಕ್ಷೇತ್ರದ ಸಹಕಾರ ಸಂಘಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸಾಲ ಸೌಲಭ್ಯ ಒದಗಿಸುವ ಮೂಲಕ ಆರ್ಥಿಕ ಶಕ್ತಿಯಾಗಿ ಯಶಸ್ಸು ಸಾಧಿಸುತ್ತಿವೆ ಎಂದು ಕಾಸ್ಕಾರ್ಡ್ ಬ್ಯಾಂಕ್ ಜಿಲ್ಲಾ ನಿರ್ದೇಶಕ ಈಶ್ವರಹಳ್ಳಿ ಮಹೇಶ್ ಹೇಳಿದರು.ಜಿಲ್ಲಾ ಸಹಕಾರ ಯೂನಿಯನ್ನಿನ ಸಭಾಂಗಣದಲ್ಲಿ ಶುಕ್ರವಾರ ರಾಜ್ಯ ಸಹಕಾರ ಮಹಾಮಂಡಳ, ಸಹಕಾರ ಯೂನಿಯನ್, ಸಹಕಾರ ಕೇಂದ್ರ ಬ್ಯಾಂಕ್, ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಹಮ್ಮಿಕೊಂಡಿದ್ಧ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.ಜಿಲ್ಲೆಯ ಡಿಸಿಸಿ ಬ್ಯಾಂಕ್, ಹಾಲು ಒಕ್ಕೂಟ, ಪಿಸಿಎಲ್‌ಡಿ ಬ್ಯಾಂಕ್ ಹಾಗೂ ಸಹಕಾರ ಸಂಘಗಳ ಸದಸ್ಯ ಬಂಧುಗಳಿಗೆ ಸಕಾಲಕ್ಕೆ ಸಾಲ ಸೌಲಭ್ಯ ಪೂರೈಸುವ ಮೂಲಕ ನಿಗಧಿತ ಸಮಯಕ್ಕೆ ಸದಸ್ಯರು ಮರು ಪಾವತಿಸುತ್ತಿರುವ ಕಾರಣ ಲಾಭದಾಯಕವಾಗಿ ಮುನ್ನಡೆ ಸಾಧಿಸುತ್ತಿವೆ ಎಂದರು.ಸಹಕಾರ ಚಳುವಳಿ ಹಲವಾರು ಸವಾಲು, ಸ್ಪರ್ಧೆಗಳನ್ನು ಎದುರಿಸಿದರೂ ಧೃತಿಗೆಡದೇ ಮುಂದುವರಿದಿದೆ. ಸ್ವಾವಲಂಬಿ ಆರ್ಥಿಕತೆಯತ್ತ ದಾಪುಗಾಲಿಡುತ್ತಿರುವ ಕಾರಣ ರಾಷ್ಟ್ರದಲ್ಲಿ ಸಹಕಾರಿ ಸಂಸ್ಥೆಗಳು ವೇಗ ವರ್ಧಕವಾಗಿ ಕೆಲಸ ಮಾಡುತ್ತಿವೆ ಎಂದು ತಿಳಿಸಿದರು. ಸುಸ್ಥಿರ ಅಭಿವೃದ್ಧಿ, ಸಮ ಸಮಾಜ ನಿರ್ಮಾಣ, ಸಂಪನ್ಮೂಲಗಳ ಸಮಾನ ಹಂಚಿಕೆ ಹಾಗೂ ಸಾಂಘಿಕ ಭವ್ಯತೆಯನ್ನು ಆತ್ಮನಿರ್ಭಾರ ಭಾರತ ಕಲ್ಪನೆಯಲ್ಲಿ ಕಾಣುತ್ತಿದ್ದು, 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅವಧಿಯಲ್ಲಿ ವಿಚಾರಗೋಷ್ಠಿ, ಸ್ಪರ್ಧೆ ಮುಂತಾದವು ಸಹಕಾರ ಕ್ಷೇತ್ರದ ಬಗ್ಗೆ ಜನಜಾಗೃತಿ ಉಂಟು ಮಾಡುತ್ತಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳದ ಸಂಶೋಧನೆ ಮತ್ತು ಮೌಲ್ಯೀಕರಣ ವಿಭಾಗದ ನಿರ್ದೇಶಕಿ ಡಾ. ಆರ್.ಎಸ್. ರೇಣುಕಾ ಮಾತನಾಡಿ, ಸಹಕಾರ ಸಂಘಗಳಲ್ಲಿ ಡಿಜಿಲೀಕರಣದ ಅಳವಡಿಕೆ ದಕ್ಷತೆ ಮತ್ತು ಹೊಂದಾಣಿಕೆಯ ಕೆಲಸದ ಹೊಸ ಅವಕಾಶಗಳನ್ನು ತೆರೆಯಲಿದೆ. ತಂತ್ರಜ್ಞಾನ ಬಳಸಿಕೊಳ್ಳುವ ಮೂಲಕ ಸಹಕಾರಿ ಸಂಸ್ಥೆಗಳು ದತ್ತಾಂಶ ಚಾಲಿತ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಎಂದರು.

ಅನೇಕ ಸಹಕಾರಿ ಸಂಸ್ಥೆಗಳು ಇತ್ತೀಚಿನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಪರಿಣಾಮಕಾರಿಯಾಗಿ ಬಳಸುತ್ತಿವೆ. ಆದರೆ, ತಮ್ಮ ಸ್ವಂತ ಅಗತ್ಯಗಳಿಗೆ ಅನುಗುಣವಾಗಿ ತಂತ್ರಜ್ಞಾನ ಉಪಯೋಗಿಸಿಕೊಂಡು ಉತ್ಪನ್ನಗಳನ್ನು ಹೆಚ್ಚಿಸಿಕೊಂಡು ಮಾರಾಟ ಹಾಗೂ ಸೇವೆ ವಿಸ್ತರಿಸಿಕೊಳ್ಳಲು ಅವಕಾಶಗಳಿವೆ ಎಂದು ತಿಳಿಸಿದರು. ಆತ್ಮನಿರ್ಭಾರ ಭಾರತದ ಗುರಿ ತಲುಪಲು ಸಹಕಾರ ಸಂಸ್ಥೆಗಳು ಮುಂದಾಗಲು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿವೆ. ಸಹಕಾರ ಸಂಸ್ಥೆಗಳು ಆರ್ಥಿಕ ಸ್ವಾವಲಂಬನೆ ಸುಸ್ಥಿರ ಅಭಿವೃದ್ಧಿ ಸ್ಥಳೀಯ ಸಂಸ್ಥೆ ಗಳ ಪ್ರಕ್ರಿಯೆ ಯಶಸ್ಸಿಗೆ ಕಾರಣವಾಗಲಿದೆ ಎಂದು ಹೇಳಿದರು. ಇದೇ ವೇಳೆ ತಾಲ್ಲೂಕಿನಲ್ಲಿ ಕೆ.ಆರ್.ಪೇಟೆ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಮುಗುಳುವಳ್ಳಿ ಗ್ರಾಮ ದ ಹಾಲು ಉತ್ಪಾದಕರ ಸಂಘಕ್ಕೆ ಉತ್ತಮ ಸಹಕಾರ ಸಂಘವೆಂದು ಗುರುತಿಸಿ ಪ್ರಶಸ್ತಿ ನೀಡಲಾಯಿತು.ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಎಚ್.ಬಿ.ಸತೀಶ್, ಜಿ.ಕೆ.ದಿವಾಕರ್, ನಿರ್ದೇಶಕರಾದ ಸಿ.ಎಸ್.ರಂಗನಾಥ್, ವರಸಿದ್ದಿ ವೇಣುಗೋಪಾಲ್, ಎಂ.ಪರಮೇಶ್ವರಪ್ಪ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಂ.ಎಸ್.ದಯಾನಂದ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಶಸ್, ವ್ಯವಸ್ಥಾಪಕ ಇಂದ್ರೇಶ್ ಉಪಸ್ಥಿತರಿದ್ದರು. 14 ಕೆಸಿಕೆಎಂ 1

ಜಿಲ್ಲಾ ಸಹಕಾರ ಯೂನಿಯನ್ನಿನ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ಧ 72ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಈಶ್ವರಹಳ್ಳಿ ಮಹೇಶ್‌ ಅವರು ಉದ್ಘಾಟಿಸಿದರು.