ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಎಲ್ಲೆಡೆ ಕೋವಿಡ್ ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಬೆಡ್ಗಳ ಮತ್ತು ಇತರೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಬುಧವಾರದಿಂದ ಕೊರೋನಾ ಪರೀಕ್ಷೆ ಶುರುವಾಗಲಿದ್ದು, ಯಾರೂ ಕೂಡ ಭಯಪಡದೇ ಮುನ್ನೆಚರಿಕೆ ಕ್ರಮವನ್ನು ಅನುಸರಿಸಬೇಕೆಂದು ಸಂಸದ ಶ್ರೇಯಸ್ ಎಂ. ಪಟೇಲ್ ಸಲಹೆ ನೀಡಿದರು.ದಿನೇ ದಿನೆ ಕೋವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಸಾಲಗಾಮೆ ರಸ್ತೆ ಬಳಿ ಇರುವ ಜಿಲ್ಲಾ ಆರೋಗ್ಯ ಕಲ್ಯಾಣ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಂಸದ ಶ್ರೇಯಸ್ ಎಂ. ಪಟೇಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕಿನ ಆರೋಗ್ಯಾಧಿಕಾರಿಗಳಿಂದ ಮಾಹಿತಿ ಪಡೆದು ನಂತರ ಮಾತನಾಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕಿನ ಆರೋಗ್ಯಾಧಿಕಾರಿಗಳ ಸಭೆಯನ್ನು ಕರೆಯಲಾಗಿದ್ದು, ಕೋವಿಡ್-೧೯ ಮತ್ತು ಡೆಂಘೀ ಬಗ್ಗೆ ಯಾವ ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂಬ ಬಗ್ಗೆ, ಕೋವಿಡ್ಗೆ ಇರುವ ಮಾನದಂಡಗಳ ಕುರಿತು ರಾಜ್ಯ ಸರ್ಕಾರವು ಹೇಳಿರುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳು ಎಲ್ಲಾ ತಾಲೂಕಿಗೂ ಕೋವಿಡ್ ಪರೀಕ್ಷೆ ಮಾಡುವ ಕಿಟ್ಗಳನ್ನು ವಿತರಿಸುತ್ತಾರೆ. ಮಂಗಳವಾರ ಸಂಜೆ ಇಲ್ಲವೇ ಬುಧವಾರದಂದು ಕೋವಿಡ್ ಟೆಸ್ಟ್ ಶುರುವಾಗುತ್ತದೆ ಎಂದರು.
ಕೋವಿಡ್ನ ಅಗತ್ಯ ಔಷಧಿಗಳನ್ನು ಲಭ್ಯವಾಗಿ ಇಟ್ಟುಕೊಳಬೇಕು, ಅಗತ್ಯ ಇದ್ದ ಔಷಧಿಗಳನ್ನು ಅತೀ ಶೀಘ್ರವಾಗಿ ಸರ್ಕಾರಕ್ಕೆ ಬರೆದು ತರಿಸಿಕೊಳ್ಳುವ ನಿಟ್ಟಿನಲ್ಲಿ ಮುಂದಾಗಬೇಕು. ಯಾವುದೇ ರೀತಿಯ ಔಷಧಿಗಳನ್ನು ಖಾಸಗಿ ಮೆಡಿಕಲ್ಗಳಿಗೆ ಬರೆಯಬಾರದು. ಎಲ್ಲವೂ ಸಾರ್ವಜನಿಕರಿಗೆ ಸುಲಭವಾಗಿ ಸಿಗುವಂತೆ ನೋಡಿಕೊಳ್ಳಬೇಕು. ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳು ಮತ್ತು ವಯೋವೃದ್ಧರು ತಮ್ಮ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು. ರೋಗ ನಿರೋಧಕ ಶಕ್ತಿ ಇರುವ ಎಲ್ಲರೂ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ. ಗುಂಪುಗುಂಪಾಗಿ ಜನ ಸೇರುವುದನ್ನು ಆದಷ್ಟು ಕಡಿಮೆ ಮಾಡುವುದು ಸೂಕ್ತ ಎಂದು ಸಲಹೆ ನೀಡಿದರು. ಈ ವೇಳೆ ಯಾರು ಆತಂಕಕ್ಕೆ ಒಳಗಾಗುವುದು ಬೇಡ. ಮುನ್ನೆಚರಿಕ ಕ್ರಮವಾಗಿ ಎಲ್ಲರೂ ಮಾಸ್ಕ್ ಧರಿಸಿ, ಸ್ಯಾನಿಟೇಸರ್ ಹಾಕುವುದು, ಕೈಯನ್ನು ಶುದ್ಧವಾಗಿ ತೊಳೆದುಕೊಂಡು ಕೋವಿಡ್ ಮಾನದಂಡವನ್ನು ಸರ್ಕಾರದವರು ಏನು ಸೂಚಿಸಿದ್ದಾರೆ ಅದನ್ನ ಪಾಲಿಸಿದರೇ ಖಂಡಿತವಾಗಿಯೂ ಈ ಸಂಕಷ್ಟದಿಂದ ನಾವು ಪಾರಾಗಬಹುದು. ನಮ್ಮ ಜಿಲ್ಲೆಯ ಎಲ್ಲಾ ವೈದ್ಯರು ಸನ್ನದ್ಧರಾಗಿದ್ದು, ಬುಧವಾರದಿಂದಲೇ ಕೋವಿಡ್ ಪರೀಕ್ಷೆ ಮಾಡಲಾಗುವುದು. ಭಯಪಡುವುದಕ್ಕಿಂತ ಮುನ್ನೆಚರಿಕ ಕ್ರಮವನ್ನು ಅನುಸರಿಸುವುದು ಸೂಕ್ತ ಎಂದು ಸಲಹೆ ನೀಡಿದರು.ಮನೆ ಸುತ್ತ ಸ್ವಚ್ಛತೆ, ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಕೋವಿಡ್ ಹರಡುತ್ತಿರುವ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಸಿದ್ಧತೆ ಮಾಡಲಾಗಿದ್ದು, ಕೋವಿಡ್ ವಾರ್ಡನ್ನು ನಿಗದಿಪಡಿಸಲಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಮೂರು ಬೆಡ್ನ್ನು ಐಸೋಲೇಶನ್ ವಾರ್ಡಾಗಿ ರಿಸರ್ವ್ ಮಾಡಲಾಗಿದೆ ಎಂದರು. ಇಲ್ಲಿ ಆಕ್ಸಿಜನ್ ಕೊರತೆ ಯಾವುದೂ ಇರುವುದಿಲ್ಲ. ಸರ್ಕಾರದ ಮಾರ್ಗಸೂಚಿಯಂತೆ ಔಷಧಿ ಸಿದ್ಧಪಡಿಸಿಕೊಳ್ಳಲಾಗಿದ್ದು, ಯಾರು ಹೆದರಬೇಡಿ ಎಂದು ಹೇಳಿದರು. ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅನಿಲ್, ಜಿಲ್ಲಾ ಶಸ್ತ್ರ ಚಿಕಿತ್ಸಕ ನಾಗಪ್ಪ, ಹಿಮ್ಸ್ನ ರಾಘವೇಂದ್ರ, ಡಾ. ಚೇತನ್ ಸೇರಿದಂತೆ ಹಾಸನ ಜಿಲ್ಲೆಯ ಎಲ್ಲಾ ತಾಲೂಕಿನ ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು.