ಕನ್ನಡಪ್ರಭ ವಾರ್ತೆ ಬೇಲೂರುಶ್ರೀ ಚನ್ನಕೇಶವ ಸ್ವಾಮಿ ದೇವಾಲಯದ ಹುಂಡಿ ಏಣಿಕೆಯಲ್ಲಿ ಮೂರು ತಿಂಗಳಲ್ಲಿ ₹ 26.21 ಲಕ್ಷ ಸಂಗ್ರಹವಾಗಿದೆ.ದೇವಾಲಯದ ಆಡಳಿತಾಧಿಕಾರಿ, ಬ್ಯಾಂಕ್ ನೌಕರರು ಹಾಗೂ ಸಿಬ್ಬಂದಿಯ ಸಮ್ಮುಖದಲ್ಲಿ ಬುಧವಾರ ಬೆಳಿಗ್ಗೆ ಹುಂಡಿ ತೆರೆಯಲಾಗಿದ್ದು, ಭಕ್ತರಿಂದ ಸಮರ್ಪಿಸಲಾದ ನಗದು ಹಾಗೂ ಕಾಣಿಕೆಗಳನ್ನು ಎಣಿಕೆ ಮಾಡಲಾಯಿತು. ಎಚ್‌ಡಿಎಫ್‌ಸಿ ಸಿಬ್ಬಂದಿ ಹಾಗೂ ಸರ್ವೋದಯ ಶಾಲೆಯ ವಿದ್ಯಾರ್ಥಿಗಳು ಹುಂಡಿ ಹಣ ಎಣಿಕೆ ಕಾರ್ಯದಲ್ಲಿ ಭಾಗವಹಿಸಿದರು.ಈ ವೇಳೆ ಒಟ್ಟು ₹26,21 ಲಕ್ಷ ರು. ಸಂಗ್ರಹವಾಗಿದ್ದು, ಇದು ದೇವಸ್ಥಾನ ಹಾಗೂ ದಾಸೋಹದಿಂದ ಬಂದ ಹುಂಡಿ ಹಣವಾಗಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಈ ಮೊತ್ತ ಸಂಗ್ರಹವಾಗಿದೆ. ಇದಲ್ಲದೆ ಬೆಳ್ಳಿಯ ಚಿಕ್ಕ ತೊಟ್ಟಿಲು, ಬೆಳ್ಳಿಯ ಕಣ್ಣು ಹಾಗೂ ಅಮೆರಿಕಾ ಮತ್ತು ಯುರೋಪ್ ದೇಶಗಳ ಡಾಲರ್‌ಗಳೂ ದೊರೆತಿವೆ ಎಂದು ದೇಗುಲ ಕಾರ್ಯನಿರ್ವಾಹಣಾಧಿಕಾರಿ ಯೋಗೇಶ್ ಮಾಹಿತಿ ನೀಡಿದರು.ಹುಂಡಿ ಏಣಿಕೆ ಕಾರ್ಯ ಪಾರದರ್ಶಕತೆಯಿಂದ ನಡೆಯುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಭದ್ರತಾ ವ್ಯವಸ್ಥೆಯೊಂದಿಗೆ ಲೆಕ್ಕಪತ್ರಗಳನ್ನು ದಾಖಲಿಸಿ ಬ್ಯಾಂಕ್‌ಗೆ ಜಮಾ ಮಾಡುವ ಪ್ರಕ್ರಿಯೆ ಮುಂದುವರಿಯಿತು. ಸಂಗ್ರಹಿತ ಮೊತ್ತವನ್ನು ದೇವಾಲಯದ ಅಭಿವೃದ್ಧಿ ಕಾರ್ಯಗಳು, ನಿತ್ಯ ಪೂಜೆ, ಅನ್ನಸಂತರ್ಪಣೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಬಳಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ದೇವಾಲಯದಲ್ಲಿ ನಡೆಯುತ್ತಿರುವ ವಿಶೇಷ ಪೂಜೆ ಹಾಗೂ ಉತ್ಸವಗಳ ಹಿನ್ನೆಲೆ ಭಕ್ತರ ಆಗಮನ ಹೆಚ್ಚಾಗಿದ್ದು, ಇದರಿಂದ ಹುಂಡಿ ಸಂಗ್ರಹದಲ್ಲಿಯೂ ಏರಿಕೆ ಕಂಡುಬಂದಿದೆ ಎಂದು ತಿಳಿದುಬಂದಿದೆ.ಈ ಸಂದರ್ಭದಲ್ಲಿ ಸಕಲೇಶಪುರ ಎಸಿ ಡಾ. ಮಂಜುನಾಥ್, ತಹಸೀಲ್ದಾರ್ ಶ್ರೀಧರ್ ಕಂಕಣವಾಡಿ, ಬ್ಯಾಂಕ್ ಮ್ಯಾನೇಜರ್ ಆನಂದ್, ಕಂದಾಯ ಇಲಾಖೆ ಅಧಿಕಾರಿಗಳು, ಆರ್‌ಐ, ಗ್ರಾಮ ಆಡಳಿತಾಧಿಕಾರಿಗಳು, ಹೋಂಗಾರ್ಡ್ಸ್ ಹಾಗೂ ದೇವಸ್ಥಾನ ಸಿಬ್ಬಂದಿ ವರ್ಗದವರು ಹಾಜರಿದ್ದರು.