ಸರ್ವಾನುಮತದಿಂದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

ಕನ್ನಡಪ್ರಭ ವಾರ್ತೆ ಕುಮಟಾಕುಮಟಾ ಮೀನುಗಾರರ ಸಹಕಾರ ಸಂಘದ ಚುನಾವಣೆ ಹಾಗೂ ಮತ ಎಣಿಕೆಯನ್ನು ಹೈಕೋರ್ಟ್‌ ಆದೇಶದಂತೆ ನಡೆಸಲಾಗಿದ್ದು ಯಾವುದೇ ಗೊಂದಲವಿಲ್ಲ. ಮತ ಎಣಿಕೆಯ ಬಳಿಕ ವಿಜೇತರಾದವರಲ್ಲಿ ಸರ್ವಾನುಮತದಿಂದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯನ್ನೂ ಮಾಡಲಾಗಿದೆ ಎಂದು ಕುಮಟಾ ಮೀನುಗಾರರ ಸಹಕಾರ ಸಂಘದ ನೂತನ ಚುನಾಯಿತ ಅಧ್ಯಕ್ಷ ಜೈವಿಠ್ಠಲ ಕುಬಾಲ ತಿಳಿಸಿದರು.

ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ೧೯೫೯ರಲ್ಲಿ ಸಂಸ್ಥಾಪನೆಗೊಂಡ ನಮ್ಮ ಮೀನುಗಾರರ ಸಹಕಾರಿಯಲ್ಲಿ ಪ್ರತಿಬಾರಿ ಅವಿರೋಧ ಆಯ್ಕೆ ನಡೆಯುತ್ತಿದ್ದರಿಂದ ಈವರೆಗೂ ಆಡಳಿತ ಮಂಡಳಿಗೆ ಚುನಾವಣೆ ಮಾಡುವ ಪ್ರಮೇಯ ಎದುರಾಗಿರಲಿಲ್ಲ. ಈ ಬಾರಿ ನಡೆದ ಚುನಾವಣೆಗೆ ಮುನ್ನ ಅರ್ಹ ಹಾಗೂ ಅನರ್ಹ ಮತದಾರರ ಪಟ್ಟಿಯನ್ನು ಚುನಾವಣಾಧಿಕಾರಿ ಸಿದ್ಧ ಪಡಿಸಿದ್ದರು. ಇಲ್ಲಿ ನಾಗರಾಜ ಹರಿಕಂತ್ರ ಬಣದ ೧೧ ಮತದಾರರು, ಸುಧಾಕರ ತಾರಿ ಬಣದ ೧೧೧ ಮತದಾರರು ಹಾಗೂ ಆಶಾ ಅಂಬಿಗ ಬಣದ ೨೫೦ ಮತದಾರರು ಸೇರಿದಂತೆ ಒಟ್ಟೂ ೩೭೨ ಮಂದಿ ಅನರ್ಹ ಮತದಾರ ಪಟ್ಟಿ ವಿರುದ್ಧ ಧಾರವಾಡ ಹೈಕೋರ್ಟಿಗೆ ಪ್ರತ್ಯೇಕ ೩ ಅರ್ಜಿ ಸಲ್ಲಿಸಲಾಗಿತ್ತು. ಈ ಪೈಕಿ ೨೫೦ ಮಂದಿ ಅನರ್ಹ ಮತದಾರರ ಅರ್ಜಿಗೆ ಸಂಬಂಧಿಸಿದ ವಿಚಾರಣೆಯಲ್ಲಿ ಮತದಾರರಿಗೆ ಪ್ರತ್ಯೇಕ ಮತಪೆಟ್ಟಿಗೆಯಲ್ಲಿ ಮತದಾನಕ್ಕೆ ಹೈಕೋರ್ಟ ಅನುಮತಿಸಿತ್ತು. ಅದರಂತೆ ಇತರ ೨ ಅರ್ಜಿದಾರರಿಗೆ ಸಂಬಂಧಿಸಿದ ಮತದಾರರಿಗೂ ಮತದಾನಕ್ಕೆ ಅನುಮತಿ ಲಭ್ಯವಾಗಿತ್ತು.ಬಳಿಕ ೧೭-೮-೨೦೨೫ ರಲ್ಲಿ ಚುನಾವಣೆ ನಡೆದಿತ್ತು. ಬಳಿಕ ಪುನಃ ಚುನಾವಣೆಯ ಮತ ಎಣಿಕೆಗೆ ಆದೇಶಿಸಲು ಹೈಕೋರ್ಟನ್ನು ಆಶಾ ಅಂಬಿಗ ಹಾಗೂ ನಾಗರಾಜ ಹರಿಕಂತ್ರ ಬಣದವರು ಅರ್ಜಿ ಮೂಲಕ ವಿನಂತಿಸಿದಾಗ ಹೈಕೋರ್ಟ ಅನುಮತಿ ನೀಡಿದಂತೆ ಮತ ಎಣಿಕೆ ನಡೆದು ಫಲಿತಾಂಶ ಬಂದಿದೆ. ಸುಧಾಕರ ತಾರಿ ಬಣದವರ ೧೧೧ ಮತಗಳ ಎಣಿಕೆಗೆ ಆದೇಶವಾಗಿಲ್ಲ. ಸಾಕಷ್ಟು ಸಮಯಾವಕಾಶ ಇದ್ದರೂ ಅವರು ಗೊಂದಲ ಪರಿಹಾರಕ್ಕೆ ರಿಟ್ ಸಲ್ಲಿಸಿಲ್ಲ. ಸದ್ಯ ಹೊಸ ಆಡಳಿತ ಮಂಡಳಿಗೆ ಅಧ್ಯಕ್ಷನಾಗಿ ನನ್ನನ್ನು (ಜೈವಿಠ್ಠಲ ಕುಬಾಲ) ಪುನರಾಯ್ಕೆ ಹಾಗೂ ಉಪಾಧ್ಯಕ್ಷರಾಗಿ ನಾಗಪ್ಪ ಎಸ್. ಹರಿಕಂತ್ರ ಆಯ್ಕೆ ಮಾಡಲಾಗಿದೆ ಎಂದರು. ಸಹಕಾರಿಯ ಸದಸ್ಯರ ಮತದಾನದ ಹಕ್ಕು ನಿರಾಕರಣೆ ಹಾಗೂ ಹೈಕೋರ್ಟ್‌ ಆದೇಶಗಳ ಕುರಿತು ಹೈಕೋರ್ಟ್‌ ವಕೀಲೆ ನಜೀಫಾ ಬೆಂಗಳೂರು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಬಾಬುರಾಯ ಕುಬಾಲ, ರಾಘವೇಂದ್ರ ಜಾಧವ, ಲಕ್ಷ್ಮಣ ಅಂಬಿಗ, ಮಾಲಾ ಅಂಬಿಗ, ನಾಗಪ್ಪ ಹರಿಕಂತ್ರ, ಶಂಕರ ಸೋಡನಕರ, ನಂದಾ ಜಾಧವ, ಗೌರೀಶ ಕುಬಾಲ, ಮಹಾಬಲೇಶ್ವರ ಅಂಬಿಗ ಹಾಗೂ ಇತರರು ಇದ್ದರು.