ಎಲ್ಲಕ್ಕಿಂತ ದೇಶ ಮೊದಲು

| Published : Jun 18 2025, 12:59 AM IST

ಸಾರಾಂಶ

ಸ್ವಾತಂತ್ರೊತ್ತರ ಕಾಲದಲ್ಲಿ ಈವರೆಗೆ ಆಗದ ಕೆಲಸ ಮೋದಿಯವರು ತಮ್ಮ ೧೧ ವರ್ಷಗಳ ಅಧಿಕಾರ ಅವಧಿಯಲ್ಲಿ ಮಾಡಿ ತೋರಿಸಿದ್ದಾರೆ.

ಕುಮಟಾ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ೧೧ ವರ್ಷಗಳ ಅವಧಿಯಲ್ಲಿ ಯಾವುದೇ ಓಲೈಕೆ ಇಲ್ಲದೇ ಎಲ್ಲಕ್ಕಿಂತ ದೇಶ ಮೊದಲು ಎನ್ನುವ ಮನೋಭಾವನೆಯಿಂದ ಅಭಿವೃದ್ಧಿಯ ಹೆಜ್ಜೆಗಳನ್ನು ವೇಗವಾಗಿ ಇಡುತ್ತಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಪ್ರಧಾನಿಯಾಗಿ ನರೇಂದ್ರ ಮೋದಿಜಿಯವರ ೧೧ವರ್ಷಗಳ ಸಾಧನೆ ಕುರಿತು ಪಟ್ಟಣದ ರೋಟರಿ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ವೃತ್ತಿಪರರ ಸಭೆ ಉದ್ದೇಶಿಸಿ ಮಾತನಾಡಿದರು.

ಸ್ವಾತಂತ್ರೊತ್ತರ ಕಾಲದಲ್ಲಿ ಈವರೆಗೆ ಆಗದ ಕೆಲಸ ಮೋದಿಯವರು ತಮ್ಮ ೧೧ ವರ್ಷಗಳ ಅಧಿಕಾರ ಅವಧಿಯಲ್ಲಿ ಮಾಡಿ ತೋರಿಸಿದ್ದಾರೆ. ಭಾರತ ಇಂದು ವಿಶ್ವದ ೪ನೇ ಆರ್ಥಿಕ ಶಕ್ತಿಯ ಸ್ಥಾನಕ್ಕೆ ಏರಿದೆ. ಇಂದು ಜಿಡಿಪಿ ೬.೮ ಕ್ಕೂ ಹೆಚ್ಚಿದೆ. ಜಿಎಸ್ಟಿ ಜಾರಿ, ನೋಟ್ ಅಮಾನ್ಯೀಕರಣ, ಡಿಜಿಟಲ್ ಆರ್ಥಿಕತೆ ಮುಂತಾದವು ದೇಶದ ಮುನ್ನಡೆಗೆ ಮೋದಿ ಕೊಡುಗೆಯಾಗಿದೆ ಎಂದರು.

ಡಿಜಿಟಲೀಕರಣ ಜತೆಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಿದ್ದೇವೆ. ಪಾಕಿಸ್ತಾನ ಭಾರತದ ಮೇಲೆ ಉಡಾಯಿಸಿದ ಮಿಸೈಲ್‌ಗಳನ್ನು ಭಾರತ ಹೊಡೆದುರುಳಿಸಿದ ರೀತಿ ಎಲ್ಲರಿಗೂ ತಿಳಿದಿದೆ. ೨೦೧೪ ರ ಪೂರ್ವದಲ್ಲಿ ಮೂಲಭೂತ ಸೌಲಭ್ಯ ಅಭಿವೃದ್ಧಿಗೆ ನೀಡುತ್ತಿರುವ ಹಣದ ೫೪೦ಪಟ್ಟು ಹಣ ಈಗ ನೀಡಲಾಗುತ್ತಿದೆ. ೪೦೦ ವಿಶ್ವದರ್ಜೆಯ ರೈಲ್ವೆ ನೀಡಲಾಗಿದೆ. ೨೦೧೪ರ ನಂತರ ೮೬ ಹೊಸ ವಿಮಾನ ನಿಲ್ದಾಣಗಳಾಗಿವೆ. ಚನಾಬ್ ನದಿಗೆ ವಿಶ್ವದ ಅತಿ ಎತ್ತರದ ಸೇತುವೆ ನಿರ್ಮಾಣ ಸೇರಿದಂತೆ ೩೬೩ ಕ್ಕೂ ಹೆಚ್ಚು ವಿಶೇಷ ಯೋಜನೆ ಜಾರಿಮಾಡಲಾಗಿದೆ. ನಮ್ಮನ್ನು ಜಾತಿ, ಭಾಷೆ, ಗಡಿ,ನೀರಿನ ಹೆಸರಿನಲ್ಲಿ ಒಡೆದು ನುಚ್ಚುನೂರು ಮಾಡಿ ಭಯೋತ್ಪಾದಕರ ಕೊಡುಗೆ ನೀಡಿದ ಈ ಹಿಂದಿನ ಆಡಳಿತ ನೋಡಿದ್ದೇವೆ. ಆದರೆ ಮೋದಿ ನೇತೃತ್ವದಲ್ಲಿ ಇಂದು ದೇಶದ ಜನ ಒಂದಾಗಿ ಹೋಗುತ್ತಿದ್ದಾರೆ. ಸ್ವದೇಶಿ ಚಿಂತನೆಗಳು ಬೆಳೆಯುತ್ತಿದೆ.ನಾವು ಗ್ಯಾರಂಟಿಗಳಿಗೆ ಮತದ ಮೌಲ್ಯ ಮಾರಿ ದೇಶಕ್ಕೆ ಕೆಟ್ಟ ಪರಿಸ್ಥಿತಿ ತರದಂತೆ ಎಚ್ಚರವಹಿಸಬೇಕು. ರಾಮಮಂದಿರ ನಿರ್ಮಾಣ ಆಗಿದೆ, ರಾಮ ರಾಜ್ಯ ನಿರ್ಮಾಣ ಮಾಡೋಣ ಎಂದರು.

ಶಾಸಕ ದಿನಕರ ಶೆಟ್ಟಿ ಮಾತನಾಡಿ,ಮೋದಿ ಸ್ವಾತಂತ್ರ‍್ಯ ನಂತರ ಹಲವು ವರ್ಷಗಳ ವರೆಗೆ ಮಾಡಲಾಗದ ಕೆಲಸಗಳನ್ನು ತಮ್ಮ ಅವಧಿಯಲ್ಲಿ ಮಾಡಿ ತೋರಿಸಿದ್ದಾರೆ. ಆಪರೇಷನ್ ಸಿಂಧೂರದ ಮೂಲಕ ದೇಶದ ಸೈನಿಕ ಶಕ್ತಿ ಏನೆಂದು ತೋರಿಸಿದ್ದಾರೆ. ಭಯೋತ್ಪಾದನೆ ಪ್ರಚೋದಿಸಿದ ಪಾಕಿಸ್ತಾನಕ್ಕೆ ಸಿಂಧು ನದಿ ನೀರು ತಡೆಯುವ ಮೂಲಕ ದಿಟ್ಟ ಉತ್ತರ ನೀಡಿದ್ದಾರೆ ಎಂದರು.

ನಿಕಟಪೂರ್ವ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಮಾತನಾಡಿ, ದೇಶದ ಗಡಿಯಲ್ಲಿ ಸೈನಿಕರಿಗೆ ಶಕ್ತಿ ತುಂಬಿದಂತೆ ದೇಶದೊಳಗೆ ಪ್ರಜೆಗಳಿಗೆ ಶಕ್ತಿ ತುಂಬಿದ್ದಾರೆ. ಕೇಂದ್ರದಲ್ಲಿ ಹಿಂದಿನ ಸರ್ಕಾರದ ಅವಧಿಯ ಆಡಳಿತ ನೋಡಿದ್ದೇವೆ. ಆದರೆ ಕಳೆದ ೧೧ ವರ್ಷಗಳಿಂದ ಮೋದಿ ನೇತೃತ್ವದಲ್ಲಿ ಮೂಲಭೂತ ಸೌಲಭ್ಯಗಳು, ಹೆದ್ದಾರಿ/ರಸ್ತೆಗಳು, ಡಿಜಿಟಲ್ ಇಂಡಿಯಾ, ಆತ್ಮನಿರ್ಭರ ಭಾರತ, ಆನ್‌ಲೈನ್ ವಹಿವಾಟು, ರೈಲ್ವೆ ವಿದ್ಯುದೀಕರಣ, ವಿಮಾನ ನಿಲ್ದಾಣಗಳು, ವಿಶ್ವವಿದ್ಯಾಲಯ, ಕಾಲೇಜುಗಳ ನಿರ್ಮಾಣ, ಜಿಎಸ್ಟಿ, ಡಿಜಿಟಲ್ ಅಡ್ರೆಸ್ ಮುಂತಾದವು ಅಸಂಖ್ಯ ಪ್ರಗತಿಯ ದ್ಯೋತಕ. ಸುರಕ್ಷಿತ ಭಾರತ ಸ್ಥಾಪನೆ ನಡೆದಿದೆ ಎಂದರು.

ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಭಟ್ಕಳ ಮಾಜಿ ಶಾಸಕರಾದ ಸುನಿಲ ನಾಯ್ಕ,ಶಿವಾನಂದ ನಾಯ್ಕ, ಹಳಿಯಾಳದ ಸುನಿಲ ಹೆಗಡೆ,ರವಿ ಹೆಗಡೆ ಹೂವಿನಮನೆ, ಶಿವಾನಿ ಭಟ್, ಮಂಡಲಾಧ್ಯಕ್ಷ ಜಿ.ಐ.ಹೆಗಡೆ, ಪ್ರಶಾಂತ ನಾಯ್ಕ ಇನ್ನಿತರರು ಇದ್ದರು. ರಾಜ್ಯ ಸಂಚಾಲಕ ಎಂ.ಜಿ. ಭಟ್ ಸ್ವಾಗತಿಸಿದರು.