ದುಶ್ಚಟಗಳಿಂದ ದೇಶದ ಅಭಿವೃದ್ಧಿ ಕುಂಠಿತ

| Published : Oct 31 2025, 03:00 AM IST

ಸಾರಾಂಶ

ಯುವಜನತೆಯು ಅಭಿವೃದ್ಧಿಯತ್ತ ಸಾಗಿದಾಗ ಮಾತ್ರ ದೇಶದ ಅಭಿವೃದ್ಧಿಯಾಗಲಿದೆ, ನಮ್ಮ ದೇಶವು ಅತಿ ಹೆಚ್ಚು ಯುವಕರನ್ನು ಹೊಂದಿದ ದೇಶವಾಗಿದೆ

ಕುಷ್ಟಗಿ: ದುಶ್ಚಟಗಳಿಂದ ದೇಶದ ಅಭಿವೃದ್ಧಿ ಕುಂಠಿತಗೊಳ್ಳಲಿದ್ದು, ಯುವಕರು ದುಶ್ಚಟಗಳಿಂದ ದೂರವಿರಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಮಂಜುನಾಥ ಹೇಳಿದರು.

ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ,ತಾಲೂಕು ವಕೀಲರ ಸಂಘ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆಯ ಸಹಯೋಗದಲ್ಲಿ ನಡೆದ ಡ್ರಗ್ಸ್ ಜಾಗೃತಿ ಮತ್ತು ಸ್ವಾಸ್ಥ್ಯ ಸಂರಕ್ಷಣೆ ಕಾನೂನು ಅರಿವು ನೆರವು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯುವಜನತೆಯು ಅಭಿವೃದ್ಧಿಯತ್ತ ಸಾಗಿದಾಗ ಮಾತ್ರ ದೇಶದ ಅಭಿವೃದ್ಧಿಯಾಗಲಿದೆ, ನಮ್ಮ ದೇಶವು ಅತಿ ಹೆಚ್ಚು ಯುವಕರನ್ನು ಹೊಂದಿದ ದೇಶವಾಗಿದೆ. ತಾಂತ್ರಿಕವಾಗಿ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿಯಾಗುತ್ತಿದ್ದರೂ ಸಹಿತ ಕೆಲ ಯುವಜನರು ದುಶ್ಚಟಗಳಿಗೆ ಬಲಿಯಾಗುವ ಪರಿಣಾಮವಾಗಿ ಅಭಿವೃದ್ಧಿಯಲ್ಲಿ ಕುಂಠಿತ ಕಾಣುತ್ತಿದ್ದೇವೆ ಎಂದರು.

ಸಮಾಜದ ಬಗ್ಗೆ ಕಳಕಳಿ ಹೊಂದುವ ಮೂಲಕ ಉತ್ತಮ ಕಾರ್ಯಗಳೊಂದಿಗೆ ದೇಶದ ಗೌರವ ಕಾಪಾಡಬೇಕು, ದುಶ್ಚಟಕ್ಕೆ ಬಲಿಯಾದವರಿಗೆ ತಿಳಿವಳಿಕೆ ಮೂಡಿಸಬೇಕು. ಯುವಕರಾದವರು ಉನ್ನತಿಯ ಮಾರ್ಗ ಕಂಡುಕೊಳ್ಳಬೇಕು ಹೊರತು ಅದಃ ಪತನದ ಮಾರ್ಗ ಕಂಡುಕೊಳ್ಳಬಾರದು ದುಷ್ಟ ಜನರಿಂದ ದೂರವಿರಬೇಕು ಹೆತ್ತ ತಂದೆ ತಾಯಿಗಳಿಗೆ ಗೌರವಿಸುವ ಮೂಲಕ ದೇಶದ ಅಭಿವೃದ್ಧಿಯ ಸಲುವಾಗಿ ಒಳ್ಳೆಯ ಕಾರ್ಯ ಮಾಡಬೇಕು ದೇಶಕ್ಕೆ ಮಾರಕವಾಗುವ ಚಟುವಟಿಕೆಯಲ್ಲಿ ಭಾಗವಹಿಸಬಾರದು ಎಂದು ತಿಳಿಸಿದರು.

ಪಿಎಸೈ ಹನಮಂತಪ್ಪ ತಳವಾರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಬಹುತೇಕ ಯುವಜನರು ಮದ್ಯವ್ಯಸನಿಗಳಾಗುತ್ತಿದ್ದು, ಇದರಿಂದ ಆರೋಗ್ಯ ಸ್ಥೀತಿ ಕೆಡಿಸಿಕೊಳ್ಳುವದು ಅಷ್ಟೆ ಅಲ್ಲದೆ ದೇಶದ ಅಭಿವೃದ್ಧಿ ಹಿನ್ನಡೆಯಾಗಲು ಕಾರಣರಾಗುತ್ತಿದ್ದಾರೆ. ವಿದ್ಯಾರ್ಥಿಗಳು ಹಾಗೂ ಯುವಕರು ಮಾದಕ ದ್ರವ್ಯಗಳಿಗೆ ಬಲಿಯಾಗಬಾರದು ಅಂತಹ ಘಟನೆಗಳು ಕಂಡು ಬಂದಲ್ಲಿ (ಡ್ರಗ್ಸ್‌ ಸೇವನೆ ಮಾಡುವದು, ಮಾರಾಟ ಮಾಡುವದು) ಹತ್ತಿರದ ಪೊಲೀಸ್‌ ಠಾಣೆಗೆ ಮಾಹಿತಿ ನೀಡಬೇಕು ಅಥವಾ 112 ಸಂಖ್ಯೆಗೆ ಕರೆ ಮಾಡುವ ಮೂಲಕ ತಪ್ಪು ದಾರಿ ಕಂಡುಕೊಳ್ಳುತ್ತಿರುವವರನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಕಾರ್ಯ ಮಾಡಬೇಕು ಎಂದರು.

ಆಪ್ತಸಮಾಲೋಚಕ ಕೆ.ಎಸ್.ಮಗ್ಗಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಯುವ ಜನರು ಆರ್ಥಿಕತೆಯ ಸ್ತಂಭವಾಗಿ ಕುಟುಂಬಕ್ಕೆ ಆಧಾರ ಸ್ತಂಭವಾಗಬೇಕು ಯಾವುದಾದರೂ ದುಶ್ಚಟಗಳಿಗೆ ದಾಸರಾದರೆ ಹೃದಯಘಾತ, ಕೊಲೆಸ್ಟ್ರಾಲ್, ಲಿವರ್ ಸಮಸ್ಯೆ, ಸ್ಟ್ರೋಕ್, ಕ್ಯಾನ್ಸರಗಳಂತಹ ಭಯಾನಕ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ. ಆದ ಕಾರಣದಿಂದ ಮಾದಕ ದ್ರವ್ಯ ತ್ಯಜಿಸಬೇಕು ಇಂದಿನ ಯುವಜನರ ಮನಸ್ಥಿತಿ ಬದಲಾಯಿಸುವ ಮೂಲಕ ಕುಟುಂಬದ ಪರಿಸ್ಥಿತಿ ಉತ್ತಮವಾಗಿಟ್ಟುಕೊಳ್ಳಬೇಕು, ಅಂದಾಗ ಮಾತ್ರ ಒಳ್ಳೆಯ ವ್ಯಕ್ತಿಯಾಗಲು ಸಾಧ್ಯ ನಮಗೆ ಒಳ್ಳೆ ಜೀವನ ಸಿಗಲಿದೆ ಎಂದರು.

ಈ ಜಾಗೃತಿ ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ದೊಡ್ಡನಗೌಡ ಪಾಟೀಲ್, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ವಾದಿರಾಜ ಮಠದ, ಡಾ.ಟಿ.ಜಿ.ಸೌಮ್ಯ, ವಿಜಯಕುಮಾರ ಬಲ್ಲೂರೆ, ಸುನೀಲ ಮಠ, ದ್ಯಾನಕುಮಾರ, ಆಕಾಶ ಸಂಗನಾಳ, ಎಸ್. ಜಿ.ಪಾಟೀಲ, ಎಸ್.ಕೆ. ಪಾಟೀಲ, ಪಿ.ರಮೇಶ. ಎಂ.ಬಿ.ಕೊನಸಾಗರ. ಎ.ಎಸ್.ಡೊಳ್ಳಿನ. ಎಸ್.ಎನ್. ನಾಯಕ ಸೇರಿದಂತೆ ಸಂಸ್ಥೆಯ ಸಿಬ್ಬಂದಿ ವರ್ಗ,ವಿದ್ಯಾರ್ಥಿಗಳು ವಕೀಲರ ಸಂಘದ ಪದಾಧಿಕಾರಿಗಳು ಹಾಜರಿದ್ದರು.