ಕನಕಪುರ: ಈ ಚುನಾವಣೆ ಸ್ವಾಭಿಮಾನ ಹಾಗೂ ದೇಶದ ಸುರಕ್ಷತೆಯ ಚುನಾವಣೆಯಾಗಿದ್ದು ನಿಮ್ಮ ಆತ್ಮಸಾಕ್ಷಿಗೆ ತಕ್ಕಂತೆ ಮತ ಚಲಾಯಿಸಿ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಎನ್‌ ಡಿಎ ಮೈತ್ರಿ ಅಭ್ಯರ್ಥಿ ಡಾ. ಮಂಜುನಾಥ್ ಹೇಳಿದರು.

ಕನಕಪುರ: ಈ ಚುನಾವಣೆ ಸ್ವಾಭಿಮಾನ ಹಾಗೂ ದೇಶದ ಸುರಕ್ಷತೆಯ ಚುನಾವಣೆಯಾಗಿದ್ದು ನಿಮ್ಮ ಆತ್ಮಸಾಕ್ಷಿಗೆ ತಕ್ಕಂತೆ ಮತ ಚಲಾಯಿಸಿ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಎನ್‌ ಡಿಎ ಮೈತ್ರಿ ಅಭ್ಯರ್ಥಿ ಡಾ. ಮಂಜುನಾಥ್ ಹೇಳಿದರು.

ಲೋಕಸಭಾ ಚುನಾವಣಾ ಪ್ರಚಾರದ ಅಂಗವಾಗಿ ಬಿಜೆಪಿ ಜೆಡಿಎಸ್‌ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ನಗರದ ಮೇಳೆಕೋಟೆ, ಅಂಬೇಡ್ಕರ್ ಕಾಲೋನಿ ಸೇರಿದಂತೆ ಸಾತನೂರು, ಕೋಡಿಹಳ್ಳಿ, ದೊಡ್ಡಆಲಹಳ್ಳಿ ಹುಣಸನಹಳ್ಳಿ ಗ್ರಾಮಗಳಲ್ಲಿ ಮತಯಾಚಿಸಿದರು.

ಆಸ್ಪತ್ರೆಯ ವೈದ್ಯರ ಸಹಕಾರದಿಂದ ಸುಮಾರು 75 ಲಕ್ಷ ಹೃದಯ ಚಿಕಿತ್ಸೆ ಮಾಡಿ ಅವರ ಜೀವ ಹಾಗೂ ಜೀವನವನ್ನು ಉಳಿಸಿರುವ ತೃಪ್ತಿಯಿದ್ದು ನನ್ನ ಕೈಲಾದಷ್ಟು ಬಡವರು, ಕೂಲಿ ಕಾರ್ಮಿಕರು, ರೈತರ ಜೀವ ಕಾಪಾಡಿರುವ ಆತ್ಮತೃಪ್ತಿಯಿದೆ. ರಾಜಕೀಯ ನನಗೆ ಹೊಸದಿರಬಹುದು. ಆದರೆ ಜನ ಸಾಮಾನ್ಯರ ಒಡನಾಟ ನನಗೆ ಬಹಳ ಹತ್ತಿರವಾದುದು. ರಾಜಕೀಯದಿಂದ ನಾನು ಏನನ್ನೂ ಸಂಪಾದಿಸಲು ಬಂದಿಲ್ಲ. ದೇಶದ ಹಾಗೂ ಕನ್ನಡ ನಾಡಿನ ಜನರ ಆರೋಗ್ಯ ಸುಧಾರಣೆಗೆ ಏನಾದರೂ ಒಂದು ಶಾಶ್ವತ ಪರಿಹಾರ ಒದಗಿಸಬೇಕು ಎಂಬುದು ನನ್ನ ಬಯಕೆಯಾಗಿದೆ. ಕ್ಷೇತ್ರದ ಮತದಾರರು ನಿಮ್ಮ ಸೇವೆ ಮಾಡಲು ನನಗೊಂದು ಅವಕಾಶ ಕೊಡಿ. ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ವಿಧಾನ ಪರಿಷತ್ ಸದಸ್ಯ ಯೋಗೇಶ್ವರ್ ಮಾತನಾಡಿ, ದೇವೇಗೌಡರ ಮಾರ್ಗದರ್ಶನದಲ್ಲಿ ಯಾರು ನಿರೀಕ್ಷೆ ಮಾಡದ ಒಬ್ಬ ಸರಳ ಸಜ್ಜನ ವ್ಯಕ್ತಿಯನ್ನು ಮಾನ್ಯ ಪ್ರಧಾನ ಮಂತ್ರಿಗಳು ನಮ್ಮ ಲೋಕಸಭಾ ಕ್ಷೇತ್ರಕ್ಕೆ ಆಯ್ಕೆ ಮಾಡಿರುವುದು ಹೆಮ್ಮೆಯ ವಿಷಯ. ಈ ಚುನಾವಣೆ ಧರ್ಮ-ಅಧರ್ಮದ ನಡುವಿನ ಹೋರಾಟ. ತಮ್ಮ ವೃತ್ತಿ ಜೀವನದಲ್ಲಿ ಲಕ್ಷಾಂತರ ಜನರ ಪ್ರಾಣ ಹಾಗೂ ಜೀವನ ಉಳಿಸಿರುವ ಸರಳ, ಸಜ್ಜನಿಕೆಯ ವ್ಯಕ್ತಿ ಹಾಗೂ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದ ವ್ಯಕ್ತಿ ಬೇಕೋ, ದರ್ಪ, ದೌರ್ಜನ್ಯ, ದಬ್ಬಾಳಿಕೆಯಿಂದಲೇ ಜನರನ್ನು ಬೆದರಿಸಿ, ಹೆದರಿಸಿ ರಾಜಕೀಯ ನಡೆಸುತ್ತಿರುವ ವ್ಯಕ್ತಿಬೇಕೋ ಜನರೇ ತೀರ್ಮಾನಿ ಸಬೇಕಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ಬಿ.ನಾಗರಾಜು, ಮುಖಂಡರಾದ ಕಬ್ಬಾಳೇಗೌಡ, ಪಂಚಲಿಂಗೇಗೌಡ, ಸಿದ್ಧಮರೀಗೌಡ, ಪುಟ್ಟರಾಜು, ಚಿನ್ನಸ್ವಾಮಿ, ಸಮಾಜ ಸೇವಕ ಅನಿಲ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಜಿಲ್ಲಾ ಮುಖಂಡ ಶಿವಮಾದು, ಗ್ರಾಮಾಂತರ ಮಂಡಲ ಅಧ್ಯಕ್ಷ ಕೆ.ಪಿ.ಕುಮಾರ್, ಪ್ರ.ಕಾರ್ಯದರ್ಶಿ ಬೊಮ್ಮನಹಳ್ಳಿ ಕುಮಾರ್, ನಗರ ಮಂಡಲ ಅಧ್ಯಕ್ಷ ಮಂಜುನಾಥ್, ಬಿಜೆಪಿ ಜಿಲ್ಲಾ ರೈತಾ ಮೋರ್ಚಾ ಪ್ರ. ಕಾರ್ಯದರ್ಶಿ ನಾಗನಂದ್, ಜಿಲ್ಲಾ ಎಸ್‌ಟಿ ಮೋರ್ಚಾ ಅಧ್ಯಕ್ಷ ಶ್ರೀನಿವಾಸ್, ತಾಲೂಕು ಎಸ್‌ಟಿ ಮೋರ್ಚಾ ಅಧ್ಯಕ್ಷ ಶಿವಮುತ್ತು, ಯುವ ಮೋರ್ಚಾ ಅಧ್ಯಕ್ಷ ಸುನೀಲ್, ಶೇಖರ್, ಮಹಿಳಾ ಘಟಕದ ಪವಿತ್ರ, ತಾಹಸೀನಾ ಖಾನ್‌ ಮುಖಂಡರಿದ್ದರು.