ಪ್ರತಾಪ್‌ಸಿಂಹ ವಿರುದ್ಧ ₹60 ಕೋಟಿಅಕ್ರಮ ಆರೋಪ: ಮಾನನಷ್ಟ ಕೇಸ್‌

| Published : Mar 02 2024, 01:47 AM IST

ಸಾರಾಂಶ

ಬೆಂಗಳೂರು-ಮೈಸೂರು ಹೆದ್ದಾರಿ ನಿರ್ಮಾಣದಲ್ಲಿ 60 ಕೋಟಿ ರು. ಹಣ ನುಂಗಿದ್ದಾರೆ ಎಂಬುದೂ ಸೇರಿದಂತೆ ಮೈಸೂರು ಸಂಸದ ಪ್ರತಾಪ್‌ ಸಿಂಹ ವಿರುದ್ಧ ಹಲವು ಆರೋಪ ಮಾಡಿದ ಸಂಬಂಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಿರುದ್ಧ ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಿಸಲು ಬೆಂಗಳೂರಿನ 32ನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ.

- ಕೆಪಿಸಿಸಿ ವಕ್ತಾರ ಲಕ್ಷ್ಮಣ್‌ ವಿರುದ್ಧ ಕೇಸ್‌ ಹಾಕಿ: ಆದೇಶಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರು-ಮೈಸೂರು ಹೆದ್ದಾರಿ ನಿರ್ಮಾಣದಲ್ಲಿ 60 ಕೋಟಿ ರು. ಹಣ ನುಂಗಿದ್ದಾರೆ ಎಂಬುದೂ ಸೇರಿದಂತೆ ಮೈಸೂರು ಸಂಸದ ಪ್ರತಾಪ್‌ ಸಿಂಹ ವಿರುದ್ಧ ಹಲವು ಆರೋಪ ಮಾಡಿದ ಸಂಬಂಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಿರುದ್ಧ ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಿಸಲು ಬೆಂಗಳೂರಿನ 32ನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ. ಮಾನನಷ್ಟ ಉಂಟು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಎಂ.ಲಕ್ಷ್ಮಣ್‌ ವಿರುದ್ಧ ಸಂಸದ ಪ್ರತಾಪ ಸಿಂಹ ದಾಖಲಿಸಿರುವ ಖಾಸಗಿ ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯ ಪ್ರತಾಪ್‌ ಸಿಂಹ ಅವರಿಗೆ ಮಾನನಷ್ಟ ಉಂಟು ಮಾಡಿದ ಆರೋಪ ಸಂಬಂಧ ಲಕ್ಷ್ಮಣ್‌ ವಿರುದ್ಧ ಸೂಕ್ತ ಪುರಾವೆಗಳು ಇರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹಾಗಾಗಿ, ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ, ಮುಂದಿನ ಕಾನೂನು ಪ್ರಕ್ರಿಯೆ ಆರಂಭಿಸುವುದು ಸೂಕ್ತವೆನಿಸುತ್ತಿದೆ ಎಂದು ಪೀಠ ಆದೇಶದಲ್ಲಿ ಅಭಿಪ್ರಾಯಟ್ಟಿದೆ. ಐಪಿಸಿ ಸೆಕ್ಷನ್ 499, 500 ಮತ್ತು 503ರ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಕಚೇರಿಗೆ (ಕೋರ್ಟ್‌ ರಿಜಿಸ್ಟ್ರಿಗೆ) ನಿರ್ದೇಶಿಸಿರುವ ನ್ಯಾಯಾಲಯ, ಲಕ್ಷ್ಮನ್‌ ಅವರಿಗೆ ನೋಟಿಸ್‌ ಜಾರಿ ಮಾಡಿದ್ದು, ಜೂ.12ರೊಳಗೆ ಲಿಖಿತ ಉತ್ತರ ನೀಡಬೇಕು ಎಂದು ಸೂಚಿಸಿದೆ.ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ನಿರ್ಮಾಣ ಸಮಯದಲ್ಲಿ ನಾನು 60 ಕೋಟಿ ಹಣವನ್ನು ಅಕ್ರಮವಾಗಿ ಸಂಪಾದನೆ ಮಾಡಿ, ಕೊಡಗಿನ ಬೇನಾಮಿ ಕಂಪನಿಯಲ್ಲಿ ಹೂಡಿಕೆ ಮಾಡಿದ್ದೇನೆ. ಈ ಕುರಿತು ಐಟಿ-ಇಡಿಗೆ ದೂರು ಸಲ್ಲಿಸುತ್ತೇನೆ ಎಂದು 2023ರ ಜೂ.16 ಹಾಗೂ 20ರಂದು ಪತ್ರಿಕಾಗೋಷ್ಠಿ ನಡೆಸಿ ಲಕ್ಷ್ಮಣ್‌ ಅವರು ಆರೋಪ ಮಾಡಿದ್ದಾರೆ. 2023ರ ಡಿ.13ರಂದು ಸಂಸತ್‌ ಲೋಕಸಭೆಯಲ್ಲಿ ಮೈಸೂರಿನ ಮನೋರಂಜನ್‌ ಮತ್ತು ಆತನ ಸ್ನೇಹಿತ ಸಾಗರ್‌ ಶಾ ಗೆ ಹೊಗೆ ಬಾಂಬ್‌ ಸ್ಪೋಟಿಸಿದ್ದು, ಆ ಕೃತ್ಯ ಎಸಗಲು ಅವರಿಗೆ ನಾನು ತರಬೇತಿ ನೀಡಿರುವ ಬಗ್ಗೆ 5 ನಿಮಿಷದ ವಿಡಿಯೋ ತಮ್ಮ ಬಳಿ ಇದೆ. ಅದನ್ನು ಮಾಧ್ಯಮದವರು ಹಾಗೂ ಪೊಲೀಸರಿಗೆ ನೀಡುತ್ತೇನೆಂದು ಗಿ ಲಕ್ಷ್ಮಣ್‌ ಆರೋಪ ಮಾಡಿದ್ದರು ಎಂದು ದೂರಿನಲ್ಲಿ ಪ್ರತಾಪ್‌ ಸಿಂಹ ತಿಳಿಸಿದ್ದರು.ಆದರೆ ಲಕ್ಷ್ಮಣ್‌ ಅವರು ಪೆನ್‌ ಡ್ರೈವ್‌ ಅನ್ನು ಪೊಲೀಸರಿಗಾಗಲಿ ಅಥವಾ ಮಾಧ್ಯಮದವರಿಗೆ ನೀಡಿಲ್ಲ. ಮಾಧ್ಯಮದವರು ಕೇಳಿದಾಗ ನಿಮಗೆ ನೀಡುವುದಿಲ್ಲ. ಪೊಲೀಸರಿಗೆ ನೀಡುತ್ತೇನೆ ಎಂದು ಹೇಳಿದ್ದಾರೆ. ಪ್ರತಿ ಪತ್ರಿಕಾಗೋಷ್ಟಿಯಲ್ಲಿ ನನ್ನ ವಿರುದ್ಧ ಇಲ್ಲ-ಸಲ್ಲದ ಆರೋಪ ಹೊರಿಸುತ್ತಿದ್ದಾರೆ. ಆ ಮೂಲಕ ಜನರನ್ನು ದಾರಿ ತಪ್ಪಿಸುವ ಮತ್ತು ಜನರಲ್ಲಿ ನನ್ನ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸುತ್ತಾ ತೇಜೋವಧೆ ಮಾಡುತ್ತಿದ್ದಾರೆ. ಹಾಗಾಗಿ, ಲಕ್ಷ್ಮಣ್‌ ವಿರುದ್ಧ ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರತಾಪ್‌ ಸಿಂಹ್‌ ತಮ್ಮ ದೂರಿನಲ್ಲಿ ಕೋರಿದ್ದಾರೆ.