ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಚಿರತೆ ದಾಳಿ ಮಾಡಿ ಎರಡು ಹಸುವಿನ ಕರುಗಳು ಹಾಗೂ ಮೇಕೆಯನ್ನು ಬಲಿ ಪಡೆದಿರುವ ಘಟನೆ ತಾಲೂಕಿನ ಹಿರೇಮರಳಿ ಗ್ರಾಮದ ಹೊರವಲಯದಲ್ಲಿ ಭಾನುವಾರ ರಾತ್ರಿ ನಡೆದಿದೆ.ಗ್ರಾಮದ ರಾಜೇಶ್ ಎಂಬ ರೈತನಿಗೆ ಸೇರಿದ ಹಸುವಿನ ಕರು ಹಾಗೂ ಮೇಕೆಯನ್ನು ಹೊತ್ತೊಯ್ದಿದ್ದು ಸಾವಿರಾರು ನಷ್ಟ ಉಂಟಾಗಿದೆ.ಹಿರೇಮರಳಿ ಗ್ರಾಮದಿಂದ ಚಿಕ್ಕಮರಳಿ ಗ್ರಾಮದ ಕಡೆಗೆ ಹೋಗುವ ರಸ್ತೆ ಪಕ್ಕದ ಆಲೆಮನೆ ಬಳಿ ಮಾಲೀಕ ರಾಜೇಶ್ ಹಸುವಿನ ಕರು ಹಾಗೂ ಮೇಕೆಯನ್ನು ಕಟ್ಟಿ ಹಾಕಿದ್ದರು.
ಆಲೆಮನೆ ಚಾಲ್ತಿಯಲ್ಲಿದ್ದು ಕೆಲಸ ಮುಗಿಸಿ ಆಲೆಮನೆಯಲ್ಲಿ ಕೆಲಸ ಮಾಡುವ ಕಾರ್ಮಿಕರು ಹಾಗೂ ಮಾಲೀಕರು ರೂಂ ಒಳಗಡೆ ಮಲಗಿದ್ದಾಗ ಭಾನುವಾರ ರಾತ್ರಿ ಚಿರತೆ ದಾಳಿ ನಡೆಸಿ ಹಸುವಿನ ಎರಡು ಕರುಗಳು ಹಾಗೂ ಮೇಕೆ ಮೇಲೆ ದಾಳಿ ನಡೆಸಿ ಕರುಗಳನ್ನು ಕೊಂದು ಮೇಕೆಯನ್ನು ಹೊತ್ತೊಯ್ದಿದೆ. ಮಾಲೀಕರು ಬೆಳಗ್ಗೆ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.ಬಳಿಕ ಒಂದು ಕರು ಆಲೆಮನೆ ಬಳಿಯೇ ಬಿಸಾಡಿದ್ದು, ಮತ್ತೊಂದು ಕರುವನ್ನು ಸ್ವಲ್ಪ ದೂರದ ಕಬ್ಬಿನ ಗದ್ದೆಯ ಬಳಿ ಬಿಸಾಡಿ ಹೋಗಿದೆ. ಮೇಕೆಯನ್ನು ಸ್ಥಳದಿಂದ ಎಳೆದುಕೊಂಡು ಹೋಗಿದ್ದು ಸಾವಿರಾರು ರು. ನಷ್ಟ ಉಂಟಾಗಿದೆ ಎಂದು ರೈತ ರಾಜೇಶ್ ಎಂದು ಗೋಳಾಟ ವ್ಯಕ್ತಪಡಿಸಿದರು.
ವಿಷಯ ತಿಳಿದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಚಿರತೆ ದಾಳಿಯಲ್ಲಿ ಮೃತಪಟ್ಟ ಕರುಗಳ ಶವಪರೀಕ್ಷೆ ನಡೆಸಿದರು. ಬಳಿಕ ಸರಕಾರಿದಿಂದ ದೊರೆಯುವ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದರು.ಚಿರತೆ ದಾಳಿಯಿಂದ ರೈತರು ಸಾಕಷ್ಟು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಸಾಲ ಮಾಡಿ ಕಸು, ಕರು ಹಾಗೂ ಮೇಕೆಗಳನ್ನು ಕೊಂಡು ಸಾಕಾಣಿಕೆ ಮಾಡುತ್ತಿದ್ದಾರೆ. ಚಿರತೆ ದಾಳಿ ಪ್ರಕರಣದಿಂದ ರೈತರಿಗೆ ಸಾಕಷ್ಟು ನಷ್ಟ ಉಂಟಾಗುತ್ತಿದೆ. ಸರಕಾರ ಹಾಗೂ ಅರಣ್ಯಾಧಿಕಾರಿಗಳು ಸಂಕಷ್ಟದಲ್ಲಿರುವ ರೈತರಿಗೆ ಸೂಕ್ತಪರಿಹಾರ ದೊರಕಿಸಿಕೊಡಬೇಕೆಂದು ರೈತ ಹಿರೇಮರಳಿ ರಾಜೇಶ್ ಒತ್ತಾಯಿಸಿದರು.
ಸಾರ್ವಜನಿಕರು ಆತಂಕ:ಇತ್ತೀಚಿನ ದಿನಗಳಲ್ಲಿ ಚಿರತೆ ದಾಳಿ ಹೆಚ್ಚಾಗುತ್ತಿದೆ. ಇದರಿಂದ ಸಾರ್ವಜನಿಕರು, ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ಚಿಕ್ಕಮರಳಿ, ಹಿರೇಮರಳಿ, ನುಗ್ಗಹಳ್ಳಿ, ಕನಗನಮರಡಿ, ಕುರಹಟ್ಟಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿರತೆ ದಾಳಿ ಪ್ರಕರಣಗಳು ವರದಿಯಾಗಿವೆ. ಸಂಬಂಧಪಟ್ಟ ಅರಣ್ಯ ಅಧಿಕಾರಿಗಳು ಚಿರತೆಗಳ ಸೆರೆಗೆ ಸೂಕ್ತ ಕ್ರಮಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.