ತುಮಕೂರು, ಬಳ್ಳಾರಿಯಲ್ಲಿ ಸಿಪಿಐ ಸ್ಪರ್ಧೆ: ಸಾತಿ ಸುಂದರೇಶ್‌

| Published : Feb 22 2024, 01:45 AM IST

ತುಮಕೂರು, ಬಳ್ಳಾರಿಯಲ್ಲಿ ಸಿಪಿಐ ಸ್ಪರ್ಧೆ: ಸಾತಿ ಸುಂದರೇಶ್‌
Share this Article
  • FB
  • TW
  • Linkdin
  • Email

ಸಾರಾಂಶ

ತುಮಕೂರು ಮತ್ತು ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸಿಪಿಐ ಅಭ್ಯರ್ಥಿಯನ್ನು ಮುಂದಿನ ಲೋಕಸಭಾ ಚುನಾವಣಾ ಕಣಕ್ಕೆ ಇಳಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಮಂಡಳಿಗೆ ವರದಿ ನೀಡಲಾಗಿದೆ ಎಂದು ರಾಜ್ಯ ಮಂಡಳಿ ಕಾರ್ಯದರ್ಶಿ ಸಾತಿ ಸುಂದರೇಶ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು

ತುಮಕೂರು ಮತ್ತು ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸಿಪಿಐ ಅಭ್ಯರ್ಥಿಯನ್ನು ಮುಂದಿನ ಲೋಕಸಭಾ ಚುನಾವಣಾ ಕಣಕ್ಕೆ ಇಳಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಮಂಡಳಿಗೆ ವರದಿ ನೀಡಲಾಗಿದೆ ಎಂದು ರಾಜ್ಯ ಮಂಡಳಿ ಕಾರ್ಯದರ್ಶಿ ಸಾತಿ ಸುಂದರೇಶ್ ತಿಳಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈದ್ರಾಬಾದಿನಲ್ಲಿ ನಡೆದ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಕರ್ನಾಟಕದಿಂದ ಸಿಪಿಐ ಸ್ಪರ್ಧೆ ಮಾಡಬಹುದಾದ ಲೋಕಸಭಾ ಕ್ಷೇತ್ರಗಳನ್ನು ಗುರುತಿಸಿ ಹೆಸರಿಸುವಂತೆ ಸೂಚನೆ ನೀಡಿದ್ದರು. ಆದರಂತೆ ರಾಜ್ಯದಲ್ಲಿ ಎಲ್ಲಾ ಜಿಲ್ಲಾ ಮುಖಂಡ ಅಭಿಪ್ರಾಯ ಸಂಗ್ರಹಿಸಿದ್ದು, ತುಮಕೂರು ಮತ್ತು ಬಳ್ಳಾರಿ ಲೋಕಸಭಾ ಕ್ಷೇತ್ರಗಳನ್ನು ಆಯ್ಕೆ ಮಾಡಲಾಗಿದೆ. ಈ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವುದು ಬಿಡುವುದು ರಾಷ್ಟ್ರೀಯ ಮಂಡಳಿಗೆ ಬಿಟ್ಟ ತೀರ್ಮಾನ ಎಂದರು.

ಕಳೆದ 10 ವರ್ಷಗಳಲ್ಲಿ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸದೆ ಧಾರ್ಮಿಕ ಮತ್ತು ಭಾವನಾತ್ಮಕ ವಿಚಾರಗಳ ಮೂಲಕ ಜನರನ್ನು ತಪ್ಪುದಾರಿಗೆ ಎಳೆಯುತ್ತಿರುವ ಒಕ್ಕೂಟ ಸರ್ಕಾರದ ಕ್ರಮವನ್ನು ಖಂಡಿಸಿ, ಬಿಜೆಪಿ ಸೊಲಿಸಿ, ದೇಶ ಉಳಿಸಿ ಎಂಬ ಆಂದೋಲವನ್ನು ಮಾ.3 ರಿಂದ ರಾಜ್ಯದಾದ್ಯಂತ ಆಯೋಜಿಸಿದ್ದು, ರಾಜ್ಯದ ಮೈಸೂರು, ಕಲ್ಬುರ್ಗಿ, ಬಳ್ಳಾರಿ, ಮಂಗಳೂರು, ಹಾವೇರಿ ಮತ್ತು ದಾವಣಗೆರೆಯಲ್ಲಿ ಬೃಹತ್ ಕಾರ್ಮಿಕರು, ರೈತರ ಸಮಾವೇಶ ಆಯೋಜಿಸಲಾಗಿದೆ. ಮಾ. 3ರಂದು ಮೊದಲ ಕಾರ್ಯಕ್ರಮದ ದಾವಣಗೆರೆಯಲ್ಲಿ ಆಯೋಜಿಸಲಾಗಿದೆ. ಈ ಆಂದೋಲನಕ್ಕೆ ಜಾತ್ಯಾತೀತ ಮನಸ್ಸುಗಳೆಲ್ಲವನ್ನು ಆಹ್ವಾನಿಸಲಾಗಿದೆ ಎಂದು ಸಾತಿ ಸುಂದರೇಶ್ ತಿಳಿಸಿದರು.

ಕೇಂದ್ರದಲ್ಲಿ ಮೊದಲ ಬಾರಿಗೆ ಅಂದರೆ 2014ರಲ್ಲಿ ಯುವಕರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ, ಕಪ್ಪು ಧನ ವಾಪಸ್ ಸೇರಿದಂತೆ ಹಲವಾರು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಎನ್.ಡಿ.ಎ ಸರಕಾರ, ಐದು ವರ್ಷಗಳಲ್ಲಿ ಕೊಟ್ಟ ಭರವಸೆ ಈಡೇರಿಸಲಾಗಿದೆ. ಚುನಾವಣೆ ಹೊಸ್ತಿಲಿನಲ್ಲಿ ಪುಲ್ವಾಮ್ ಘಟನೆಯನ್ನು ಮುಂದಕ್ಕೆ ತಂದು ಜನರನ್ನು ಭಾವನಾತ್ಮಕವಾಗಿ ಕೆರಳಿಸಿ, ಅಧಿಕಾರ ಹಿಡಿಯಿತು. ಈಗ ಪೂರ್ಣವಾಗದ ಶ್ರೀರಾಮಮಂದಿರ ಉದ್ಘಾಟಿಸಿ, ಧಾರ್ಮಿಕವಾಗಿ ಜನರನ್ನು ದಾರಿ ತಪ್ಪಿಸಿ ಅಧಿಕಾರ ಗದ್ದುಗೆ ಏರಲು ಪ್ರಯತ್ನಿಸುತ್ತಿದೆ ಎಂದರು.

ಸಿಪಿಐ ರಾಷ್ಟ್ರೀಯ ಮಂಡಳಿ ಕಾರ್ಯದರ್ಶಿ ಪಿ.ವಿ. ಲೋಕೇಶ್ ಮಾತನಾಡಿದರು, ಸುದ್ದಿಗೋಷ್ಠಿಯಲ್ಲಿ ರಾಜ್ಯ ಮಂಡಳಿ ಅಮ್ಜಾದ್ ಖಾನ್, ಕೆ. ಜ್ಯೋತಿ, ಜಿಲ್ಲಾಧ್ಯಕ್ಷ ಗಿರೀಶ್, ಖಜಾಂಚಿ ಅಶ್ವಥನಾರಾಯಣ ಉಪಸ್ಥಿತರಿದ್ದರು.