ಸಾರಾಂಶ
ಸಂಸತ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಕೇಂದ್ರ ಗೃಹ ಸಚಿವರನ್ನು ಅಧಿಕಾರ ಸ್ಥಾನದಿಂದ ವಜಾ ಮಾಡುವಂತೆ ಆಗ್ರಹಿಸಿ, ಶನಿವಾರ ಭಾರತ ಕಮ್ಯುನಿಸ್ಟ್ ಪಕ್ಷದಿಂದ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಹರಿಹರ
ಸಂಸತ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಕೇಂದ್ರ ಗೃಹ ಸಚಿವರನ್ನು ಅಧಿಕಾರ ಸ್ಥಾನದಿಂದ ವಜಾ ಮಾಡುವಂತೆ ಆಗ್ರಹಿಸಿ, ಶನಿವಾರ ಭಾರತ ಕಮ್ಯುನಿಸ್ಟ್ ಪಕ್ಷದಿಂದ ಮನವಿ ಸಲ್ಲಿಸಲಾಯಿತು.ತಹಸೀಲ್ದಾರ್ ಕಚೇರಿಗೆ ಆಗಮಿಸಿದ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಮುಖಂಡರು ಚುನಾವಣಾ ಶಿರಸ್ತೇದಾರ್ ಅಶೋಕ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಅನಂತರ ಮುಖಂಡರು ಮಾತನಾಡಿ, ಸಮಾಜದಲ್ಲಿ ಅಂಬೇಡ್ಕರ್ ಎಲ್ಲರ ಸಮಾನತೆಗಾಗಿ ಹೋರಾಡಿ, ಶೋಷಿತ ಸಮುದಾಯಗಳಿಗೆ ಚೇತನ ತುಂಬಿರುವ ಧೀಮಂತ ನಾಯಕ. ಅವರ ಬಗ್ಗೆ ಸಂಸತ್ನಲ್ಲಿ ಅವಹೇಳನಕಾರಿ ಹೇಳಿಕೆ ನೀಡಿರುವ ಅಮಿತ್ ಷಾ ಅವರನ್ನು ತಕ್ಷಣವೇ ಸಂಪುಟದಿಂದ ವಜಾಗೊಳಿಸಲು ಒತ್ತಾಯಿಸಿದರು.ದೇವಸ್ಥಾನದ ಗಂಟೆಗಳಿಗಿಂತ ಶಾಲೆಯ ಗಂಟೆಗಳು ಹೆಚ್ಚು ಕೇಳಬೇಕೆಂಬುದು ಅವರ ಹಂಬಲವಿತ್ತು. ಧರ್ಮಕ್ಕಿಂತ ಶ್ರಮದ ಬಗ್ಗೆ ಒಲವು ವ್ಯಕ್ತಪಡಿಸುತ್ತಿದ್ದರು. ಅಂಥವರ ಬಗ್ಗೆ ಹಗುರವಾಗಿ ಮಾತನಾಡುವುದು ಖಂಡನೀಯ. ಅಮಿತ್ ಷಾ ಅವರು ತಕ್ಷಣವೇ ಕ್ಷಮೆ ಯಾಚಿಸಬೇಕು. ಪ್ರಧಾನಿ ಮೋದಿ ಈ ಬಗ್ಗೆ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಪಕ್ಷದ ಹಿರಿಯ ಮುಖಂಡ ಎಚ್.ಕೆ. ಕೊಟ್ಟಪ್ಪ, ಪಕ್ಷದ ಕಾರ್ಯದರ್ಶಿ ಟಿ.ಎಚ್. ನಾಗರಾಜಪ್ಪ, ಕೋಶಾಧ್ಯಕ್ಷ ಕುಮಾರ್ ನಾಯಕ್, ನಾಯಕರಾದ ಎನ್.ಪರಮೇಶ್ವರಪ್ಪ, ಆರ್.ಎಚ್. ಚಂದ್ರಪ್ಪ, ಆರ್.ಎಚ್. ನಾಗರಾಜ್, ಎಚ್.ಸಿ. ಮೈದೂರ್, ಶಮಿವುಲ್ಲಾ, ಹನುಮಂತಪ್ಪ ಸೊಸೈಟಿ, ಹನುಮಂತಪ್ಪ ಕೊತ್ವಾಲ್, ವೈ.ರಘುಪತಿ, ಗಂಗಾಧರ್ ಕೊಟಗಿ, ಶ್ರೀನಿವಾಸ್ ಕೊಡ್ಲಿ, ಮೌಲಾಲಿ, ಹಾಲೇಶಪ್ಪ, ಕಿರಣ್, ಬುಡನ್ ಸಾಬ್, ರಫೀಕ್ ಇತರರು ಭಾಗವಹಿಸಿದ್ದರು.- - - -೨೧ಎಚ್ಆರ್ಆರ್೦೩:
ಹರಿಹರದಲ್ಲಿ ಸಂಸತ್ನಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ, ಕೇಂದ್ರ ಗೃಹಸಚಿವರನ್ನು ಸಚಿವ ಸ್ಥಾನದಿಂದ ವಜಾ ಮಾಡುವಂತೆ ಆಗ್ರಹಿಸಿ, ಭಾರತ ಕಮ್ಯುನಿಸ್ಟ್ ಪಕ್ಷದಿಂದ ಮನವಿ ಸಲ್ಲಿಸಲಾಯಿತು.