ವೆನ್ಲಾಕ್‌ನಲ್ಲಿ ‘ಕರುಣೆಯ ತೊಟ್ಟಿಲು’ ಕ್ಲೋತ್‌ ಬ್ಯಾಂಕ್‌ ಉದ್ಘಾಟನೆ

| Published : Sep 22 2025, 01:02 AM IST

ಸಾರಾಂಶ

ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ದೂರದ ಊರುಗಳಿಂದ ಬರುವವರ ಅನುಕೂಲಕ್ಕಾಗಿ ಎಂಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ನಿರ್ಮಿಸಿದ ‘ಕರುಣೆಯ ತೊಟ್ಟಿಲು’ ಕ್ಲೋತ್ ಬ್ಯಾಂಕ್‌ನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಭಾನುವಾರ ಉದ್ಘಾಟಿಸಿದರು.

ಸಾರ್ವಜನಿಕರು ನೀಡಿದ ಶುಭ್ರ ಬಟ್ಟೆ ಇಲ್ಲಿ ರೋಗಿ ಅಥವಾ ಜತೆಗಾರರಿಗೆ ಮೀಸಲುಕನ್ನಡಪ್ರಭ ವಾರ್ತೆ ಮಂಗಳೂರುಮಂಗಳೂರಿನ ಜಿಲ್ಲಾ ಸರ್ಕಾರಿ ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ದೂರದ ಊರುಗಳಿಂದ ಬರುವವರ ಅನುಕೂಲಕ್ಕಾಗಿ ಎಂಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ನಿರ್ಮಿಸಿದ ‘ಕರುಣೆಯ ತೊಟ್ಟಿಲು’ ಕ್ಲೋತ್ ಬ್ಯಾಂಕ್‌ನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಭಾನುವಾರ ಉದ್ಘಾಟಿಸಿ, ಶುಭ ಹಾರೈಸಿದರು.ಎಂಫೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಝಕರಿಯಾ ಜೋಕಟ್ಟೆ ಮಾತನಾಡಿ, ಟ್ರಸ್ಟ್ ಸ್ಥಾಪನೆಯಾಗಿ ಸುಮಾರು 12 ವರ್ಷಗಳಾಗಿದ್ದು, ಎಂಟು ವರ್ಷಗಳಿಂದ ನಿರಂತರ ವೆನ್ಲಾಕ್ ಆಸ್ಪತ್ರೆ ಒಳ ರೋಗಿಗಳ ಜೊತೆಗಾರರಿಗೆ ರಾತ್ರಿಯ ಊಟ ವಿತರಿಸುತ್ತಿದೆ. ದಾನಿಗಳ ನೆರವು ಮತ್ತು ಟ್ರಸ್ಟಿಗಳ ಸಹಾಯದಿಂದ ನಡೆಯುವ ಕಾರುಣ್ಯ ಯೋಜನೆಯನ್ನು ನ.1ರಿಂದ ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಗೂ ವಿಸ್ತರಿಸಲಾಗುತ್ತಿದೆ ಎಂದರು.

ಇದೀಗ ವೆನ್ಲಾಕ್ ಆಸ್ಪತ್ರೆಯಲ್ಲಿ ಹೊಸ ಕಲ್ಪನೆಯಾಗಿ ಕ್ಲೋತ್ ಬ್ಯಾಂಕ್ ಆರಂಭಿಸಲಾಗಿದೆ. ಸಾರ್ವಜನಿಕರು ಹೊಸದಾಗಿ ಖರೀದಿಸಿದ ಅಥವಾ ಬಳಕೆ ಮಾಡಿದ ಶುಭ್ರ ಬಟ್ಟೆಗಳನ್ನು ಇಲ್ಲಿ ತಂದು ಇಡಬಹುದು. ಇದನ್ನು ಅಗತ್ಯವಿರುವ ರೋಗಿಗಳು ಅಥವಾ ಅವರ ಜತೆಗಾರರು ಕೊಂಡೊಯ್ಯಲಿದ್ದಾರೆ ಎಂದು ಅವರು ಹೇಳಿದರು.ಎಂಫ್ರೆಂಡ್ಸ್ ಸ್ಥಾಪಕ ರಶೀದ್ ವಿಟ್ಲ ಮಾತನಾಡಿ, ವೆನ್ಲಾಕ್ ಆಸ್ಪತ್ರೆಯ ಡಿಎಂಒ ಅವರ ಮನವಿ ಮೇರೆಗೆ ಕ್ಲೋತ್ ಬ್ಯಾಂಕ್ ಆರಂಭಿಸಿದ್ದು, ಅದರ ಖರ್ಚು ವೆಚ್ಚವನ್ನು ನಮ್ಮ ಟ್ರಸ್ಟಿ ಶರೀಫ್ ವೈಟ್‌ಸ್ಟೋನ್ ಭರಿಸಿದ್ದಾರೆ. ಜನರು ಉತ್ತಮ ದರ್ಜೆಯ ಬಟ್ಟೆ ತಂದು ಕೊಟ್ಟು ಸಹಕರಿಸಬೇಕು. ಇಲ್ಲಿಯ ಸಿಬ್ಬಂದಿ ಅಗತ್ಯವಿರುವವರಿಗೆ ಉಚಿತವಾಗಿ ವಿತರಿಸಲಿಸಲಿದ್ದಾರೆ ಎಂದರು.ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ,ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ವೆನ್ಲಾಕ್‌ ಆಸ್ಪತ್ರೆ ಅಧೀಕ್ಷಕ ಡಾ.ಡಿ.ಎಸ್. ಶಿವಪ್ರಕಾಶ್, ಆರ್‌ಎಂಒ ಡಾ.ಸುಧಾಕರ್, ಕೆಎಂಸಿ ಆಸ್ಪತ್ರೆ ಡೀನ್ ಡಾ.ಉನ್ನಿಕೃಷ್ಣನ್, ಜಿ.ಪಂ. ಮಾಜಿ ಸದಸ್ಯ ಶಾಹುಲ್ ಹಮೀದ್ ಕೆ.ಕೆ., ಮಾಜಿ ಕಾರ್ಪೊರೇಟರ್ ಎ.ಸಿ.ವಿನಯರಾಜ್, ಎಂಫ್ರೆಂಡ್ಸ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಆರಿಫ್ ಪಡುಬಿದ್ರಿ, ಟ್ರಸ್ಟಿಗಳಾದ ಮೊಹಮ್ಮದ್ ಹನೀಫ್ ಗೋಳ್ತಮಜಲು, ಅಬೂಬಕರ್ ಕೆ., ಅಬೂಬಕರ್ ಪುತ್ತು, ಅನ್ವರ್ ಹುಸೇನ್, ಇಬ್ರಾಹಿಂ ಮೊಯ್ದಿನಬ್ಬ ನಂದಾವರ, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಸಲೀಂ ಮಕ್ಕಾ, ಡಿ.ಎಂ.ರಶೀದ್ ಮತ್ತಿತರರು ಇದ್ದರು.