ಸಾರಾಂಶ
ಬಿ. ಶೇಖರ್ ಗೋಪಿನಾಥಂ
ಕನ್ನಡಪ್ರಭ ವಾರ್ತೆ ಮೈಸೂರು2024ನೇ ಸಾಲಿನ ದಸರಾ ಜಂಬೂಸವಾರಿಯಲ್ಲಿ 51 ಸ್ತಬ್ಧಚಿತ್ರಗಳು ಹವಾ ಸೃಷ್ಟಿಸಲಿವೆ. ಇದೇ ಮೊದಲ ಬಾರಿಗೆ ಅತಿ ಹೆಚ್ಚು ಸ್ತಬ್ಧಚಿತ್ರಗಳು ವಿಜಯದಶಮಿ ಮೆರವಣಿಗೆಯಲ್ಲಿ ಸಾಗಿ ನಾಡಿನ ವೈಭವದ ಸಾರಲು ಸಜ್ಜಾಗಿವೆ.
ರಾಜ್ಯದ 31 ಜಿಲ್ಲೆಗಳಿಂದ ತಲಾ ಒಂದೊಂದು ಸ್ತಬ್ಧಚಿತ್ರಗಳು, ರಾಜ್ಯ ಸರ್ಕಾರಕದ 9 ಇಲಾಖೆಗಳ ಸ್ತಬ್ಧಚಿತ್ರಗಳು, 6 ನಿಗಮ ಮಂಡಳಿಗಳ ಸ್ತಬ್ಧಚಿತ್ರಗಳು, 2 ಕೇಂದ್ರ ಸರ್ಕಾರದ ಸ್ತಬ್ಧಚಿತ್ರಗಳು, 1 ವಿಶ್ವವಿದ್ಯಾನಿಲಯ ಹಾಗೂ 2 ಸ್ತಬ್ಧಚಿತ್ರ ಉಪ ಸಮಿತಿಯ ಸ್ತಬ್ಧಚಿತ್ರಗಳು ಸೇರಿದಂತೆ ಒಟ್ಟು 51 ಸ್ತಬ್ಧಚಿತ್ರಗಳು ದಸರಾ ಜಂಬೂಸವಾರಿಯ ಮೆರುಗು ಹೆಚ್ಚಿಸಲು ಸನ್ನದ್ಧವಾಗಿವೆ.31 ಜಿಲ್ಲೆಗಳ ವೈವಿಧ್ಯತೆ ಅನಾವರಣ
ಯಾದಗಿರಿ ಜಿಲ್ಲೆಯಿಂದ ತಿಂಥಣಿ ಮೌನೇಶ್ವರ ದೇವಾಲಯ, ಕೊಡಗು ಜಿಲ್ಲೆಯಿಂದ ಭೂ ಸಂರಕ್ಷಣೆ, ಹಾರಂಗಿ ಜಲಾಶಯ, ಕಾಫಿ- ಕಾಳು ಮೆಣಸು ತೋಟ ಹಾಗೂ ಆನೆ ಕ್ಯಾಂಪ್, ರಾಯಚೂರು ಜಿಲ್ಲೆಯಿಂದ ಮುದ್ಗಲ್ ಕೋಟೆ ಮತ್ತು ಗಾಣದಾಳ ಪಂಚಮುಖಿ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ, ಚಾಮರಾಜನಗರ ಜಿಲ್ಲೆಯಿಂದ ಸೋಲಿಗರ ಸೊಗಡು ಒಮ್ಮೆ ನೀ ಬಂದು ನೋಡು.ವಿಜಯನಗರ ಜಿಲ್ಲೆಯಿಂದ ವಿಜಯನಗರ ಸಾಮ್ರಾಜ್ಯದ ವೈಭವ, ಬೆಂಗಳೂರು ನಗರ- ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ವಿಧಾನಸೌಧ, ಬೀದರ್ ಜಿಲ್ಲೆಯಿಂದ ಕನ್ನಡ ಪಟ್ಟ ದೇವರು ಪೂಜ್ಯಶ್ರೀ ಮದ್ ಘನಲಿಂಗ ಚಕ್ರವರ್ತಿ ಚನ್ನಬಸವ ಪಟ್ಟದ್ದೇವರು, ಕೊಪ್ಪಳ ಜಿಲ್ಲೆಯಿಂದ ಕಿನ್ನಾಳ ಕಲೆ, ಶ್ರೀ ಹುಲಿಗಮ್ಮದೇವಿ ದೇವಸ್ಥಾನ, ಹಿರೇ ಬೆಣಕಲ್ ಶಿಲಾ ಸಮಾಧಿ, ಇಟಗಿ ಮಹದೇವ ದೇವಾಲಯ.
ಉತ್ತರ ಕನ್ನಡ ಜಿಲ್ಲೆಯಿಂದ ಮುರುಡೇಶ್ವರದ ಬೃಹತ್ ಶಿವನ ಮೂರ್ತಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಪೊಕ್ಕುಂದ/ ಹೆಗ್ಗುಂದದ ರಾಮದೇವರ ಬೆಟ್ಟ, ನಿಜಗಲ್ಲು ದುರ್ಗ, ಬಿನ್ನ ಮಂಗಲ ದೇವಸ್ಥಾನ, ದಾವಣಗೆರೆ ಜಿಲ್ಲೆಯಿಂದ ನಾವು ಮನುಜರು, ಕೋಲಾರ ಜಿಲ್ಲೆಯಿಂದ ವಿಶ್ವ ವಿಖ್ಯಾತ ಶ್ರೀ ಕೋಟಿಲಿಂಗೇಶ್ವರಸ್ವಾಮಿ ದೇವಸ್ಥಾನದ ಪರಿಚಯ, ಉಡುಪಿ- ಜಿಲ್ಲೆಯ ಸಾಂಸ್ಕೃತಿಕ ವೈಭವ ಹಾಗೂ ಕರಾವಳಿಯ ಸೊಬಗು.ಶಿವಮೊಗ್ಗ ಜಿಲ್ಲೆಯಿಂದ ಸೊರಬ ತಾಲೂಕಿನ ಕೋಟಿಪುರ ಕೈತಭೇಶ್ವರ ದೇವಾಲಯ, ಬಳ್ಳಾರಿ ಜಿಲ್ಲೆಯಿಂದ ಕುರುಗೋಡು ದೇವಸ್ಥಾನ, ಬಾಗಲಕೋಟೆ ಜಿಲ್ಲೆಯಿಂದ ರನ್ನನ ಕಾವ್ಯ ಗದಾಯುದ್ದ, ಹಾವೇರಿ ಜಿಲ್ಲೆಯಿಂದ ಏಲಕ್ಕಿ ಕಂಪಿನ ನಾಡು ಹಾಗೂ ಸಂತರು, ಸಾಹಿತಿಗಳ ನೆಲೆಬೀಡು, ಮಂಡ್ಯ ಜಿಲ್ಲೆಯಿಂದ ರಂಗನತಿಟ್ಟು ಪಕ್ಷಿಧಾಮ ಹಾಗೂ ಕೃಷ್ಣರಾಜಸಾಗರ ಅಣೆಕಟ್ಟು, ರಾಮನಗರ- ಜಿಲ್ಲಾ ವೈವಿಧ್ಯತೆಗಳು, ಕಲಬುರಗಿ ಜಿಲ್ಲೆಯಿಂದ ತೊಗರಿಯ ಕಣಜ ಕಲಬುರಗಿ ಜಿಲ್ಲೆ ಅಭಿವೃದ್ಧಿಯತ್ತ ದಾಪುಗಾಲು.
ವಿಜಯಪುರ- ಬಸವನ ಬಾಗೇವಾಡಿಯ ಮೂಲ ನಂದಿ ಬಸವೇಶ್ವರ ದೇವಾಲಯ, ದಕ್ಷಿಣ ಕನ್ನಡ ಜಿಲ್ಲೆ- ಕರಾವಳಿಯ ವಾಣಿಜ್ಯ ಮತ್ತು ಪ್ರವಾಸೋದ್ಯಮ, ಮೈಸೂರು ಜಿಲ್ಲೆಯಿಂದ ಮಾನವಕುಲದ ಸಮಾನತೆ, ಧಾರ್ಮಿಕ ಬೆಳಕಿನಿಂದ ಸಾಂವಿಧಾನಿಕ ನ್ಯಾಯದವರೆಗೆ, ಬೆಳಗಾವಿ ಜಿಲ್ಲೆಯಿಂದ ಕಿತ್ತೂರು ಕದನದ 200ನೇ ವರ್ಷಾಚರಣೆ, ಚಿತ್ರದುರ್ಗ ಜಿಲ್ಲೆಯಿಂದ ಚಿತ್ರದುರ್ಗದ ಕೋಟೆ ಮತ್ತು ಗಾಳಿಯಂತ್ರಗಳು, ಚಿಕ್ಕಬಳ್ಳಾಪುರ- ನಂದಿ ರೋಪ್ ವೇ, ಗದಗ ಜಿಲ್ಲೆಯಿಂದ ಗ್ರಾಮ ಸಭೆ- ಹಳ್ಳಿಯ ವಿಧಾನಸಭೆ.ಧಾರವಾಡ ಜಿಲ್ಲೆಯಿಂದ ಇಸ್ರೋ ಗಗನಯಾನದಲ್ಲಿ ಹಣ್ಣಿನ ನೊಣಗಳು, ಹಾಸನ ಜಿಲ್ಲೆಯಿಂದ ವಿಶ್ವ ಪಾರಂಪರಿಕ ತಾಣ ಬೇಲೂರು- ಹಳೆಬೀಡು, ಚಿಕ್ಕಮಗಳೂರು- ತೇಜಸ್ವಿ ವಿಸ್ಮಯ ಲೋಕ, ತುಮಕೂರು- ಔಷಧ ಸಸ್ಯಗಳ ಸಂಜೀವಿನಿ ಪರ್ವತ ಸಿದ್ಧರಬೆಟ್ಟ ಮತ್ತು ಬಯಲು ಸೀಮೆಯನ್ನಾಳಿದ ಹೆಮ್ಮೆಯ ಅರಸರು.
ನಿಗಮ ಮಂಡಳಿಗಳು ಸಾಧನೆ:ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾ ಮಂಡಳಿ(ಕೆಎಂಎಫ್)- ಕ್ಷೀರ ಭಾಗ್ಯ ಮತ್ತು ಕ್ಷೀರ ಸಂಜೀವಿನಿ ಯೋಜನೆಗಳ ಯಶಸ್ವಿ ಪಥ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದಿಂದ ಮೈಸೂರು ಸ್ಯಾಂಡಲ್ ಸೋಪ್ ಕಿರು ಪರಿಚಯ, ಡಾ. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ(ಲಿಡ್ಕರ್)- ನಿಗಮದ ಉತ್ಪನ್ನಗಳ ಮಾದರಿ, ಕರ್ನಾಟಕ ರೇಷ್ಮೆ ಉದ್ಯಮ ನಿಗಮದಿಂದ ಕರ್ನಾಟಕ ರೇಷ್ಮೆ ನಮ್ಮ ಹೆಮ್ಮೆ, ಕಾವೇರಿ ನೀರಾವರಿ ನಿಗಮದಿಂದ ಏಕತೆಯಲ್ಲಿ ಅನೇಕತೆ ಸಾರುವ ಅಣೆಕಟ್ಟು ಹಾಗೂ ಜಲ ಸಂರಕ್ಷಣೆ, ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಸಂಸ್ಥೆ- ವನ್ಯಜೀವಿ ಸಂರಕ್ಷಣೆ ನಮ್ಮೆಲ್ಲರ ಹೊಣೆ.
ಇತರೆ ಸ್ತಬ್ಧ ಚಿತ್ರಗಳು:ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಸಿ.ಎಫ್.ಟಿ.ಆರ್.ಐ)- ಕೃಷಿ ಸರಕುಗಳ ಮೌಲ್ಯವರ್ಧನೆ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಸಂಸ್ಥೆಯ ಕೊಡುಗೆ, ಭಾರತೀಯ ರೈಲ್ವೆ ಇಲಾಖೆಯಿಂದ ವಂದೇ ಭಾರತ್ ಎಕ್ಸ್ ಪ್ರೆಸ್, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ- ನಿಮ್ಮ ಮನೆಯೇ ನಿರಂತರ ಪಾಠಶಾಲೆ, ದಸರಾ ಸ್ತಬ್ಧಚಿತ್ರ ಉಪ ಸಮಿತಿಯಿಂದ 1. ಸಾಮಾಜಿಕ ನ್ಯಾಯ ಹಾಗೂ 2. ಆನೆ ಬಂಡಿ ಸ್ತಬ್ಧಚಿತ್ರಗಳು ಸಾಗಲಿವೆ.ವಿವಿಧ ಇಲಾಖೆಗಳು ಕಾರ್ಯಕ್ರಮಗಳು:
ಪ್ರವಾಸೋದ್ಯಮ ಇಲಾಖೆಯಿಂದ ಒಂದು ರಾಜ್ಯ ಹಲವು ಜಗತ್ತುಗಳು, ಕಾರ್ಮಿಕ ಇಲಾಖೆಯಿಂದ ಕಾರ್ಮಿಕ ಹಿತರಕ್ಷಣೆ, ಗ್ರಾಮೀಣ ಕುಡಿಯುವ ವೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯಿಂದ ಗ್ರಾಮೀಣ ಜನರ ಆರೋಗ್ಯದಲ್ಲಿ ಸುಸ್ಥಿರತೆ ಸಾಧಿಸುವುದು, ಸಮಾಜ ಕಲ್ಯಾಣ ಇಲಾಖೆಯಿಂದ ಸಮ ಸಮಾಜ ನಿರ್ಮಾಣಕ್ಕಾಗಿ, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ- ಇಲಾಖೆಯ ಕಿರು ಪರಿಚಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹೆಣ್ಣು ಭ್ರೂಣಹತ್ಯೆ ತಡೆ, ಅಂಧತ್ವ ಶ್ರವಣ ದೋಷ ನಿವಾರಣ ಕಾರ್ಯಕ್ರಮ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಅನುಷ್ಠಾನ ಮಾಡಲಾಗುತ್ತಿರುವ ಕಾರ್ಯಕ್ರಮಗಳು, ವಾರ್ತಾ ಇಲಾಖೆಯಿಂದ ವಿಶ್ವಗುರು ಬಸವಣ್ಣ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ಕೌಶಲ್ಯ ಕರ್ನಾಟಕ.