ಪರಿಶ್ರಮದ ಮೂಲಕ ಉಜ್ವಲ ಜೀವನ ರೂಪಿಸಿಕೊಳ್ಳಿ

| Published : Dec 18 2023, 02:00 AM IST

ಸಾರಾಂಶ

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ದಿನಗಳಲ್ಲಿ ನಿರಂತರ ಶ್ರದ್ಧೆ, ಪರಿಶ್ರಮದ ಮೂಲಕ ಉಜ್ವಲ ಜೀವನ ರೂಪಿಸಿಕೊಳ್ಳುವಂತೆ ಶ್ರೀ ಮುರುಘಾಮಠದ ಉಸ್ತುವಾರಿಗಳಾದ ಶ್ರೀ ಬಸವಪ್ರಭು ಸ್ವಾಮೀಜಿ ಕರೆ ನೀಡಿದರು. ಚಿತ್ರದುರ್ಗದ ಚಂದ್ರವಳ್ಳಿಯ ಎಸ್‌ಜೆಎಂ ಕಾಲೇಜಿನ ರಾಜ್ಯಶಾಸ್ತ್ರ ಮತ್ತು ಐಕ್ಯೂಎಸಿ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ್ದ ಕರ್ನಾಟಕ ಗ್ರಾಮ ಸ್ವರಾಜ್ಯ ವಿಷಯ ಕುರಿತ ಸರ್ಟಿಫಿಕೇಟ್ ಕೋರ್ಸ್ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಕರ್ನಾಟಕ ಗ್ರಾಮ ಸ್ವರಾಜ್ಯ ಕೋರ್ಸ್‌ನ ಪ್ರಮಾಣ ಪತ್ರ ವಿತರಣಾ ಸಮಾರಂಭದಲ್ಲಿ ಬಸವಪ್ರಭು ಶ್ರೀಕನ್ನಡಪ್ರಭ ವಾರ್ತೆ ಚಿತ್ರದುರ್ಗ

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ದಿನಗಳಲ್ಲಿ ನಿರಂತರ ಶ್ರದ್ಧೆ, ಪರಿಶ್ರಮದ ಮೂಲಕ ಉಜ್ವಲ ಜೀವನ ರೂಪಿಸಿಕೊಳ್ಳುವಂತೆ ಶ್ರೀ ಮುರುಘಾಮಠದ ಉಸ್ತುವಾರಿಗಳಾದ ಶ್ರೀ ಬಸವಪ್ರಭು ಸ್ವಾಮೀಜಿ ಕರೆ ನೀಡಿದರು.

ನಗರದ ಚಂದ್ರವಳ್ಳಿಯ ಎಸ್‌ಜೆಎಂ ಕಾಲೇಜಿನ ರಾಜ್ಯಶಾಸ್ತ್ರ ಮತ್ತು ಐಕ್ಯೂಎಸಿ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ್ದ ಕರ್ನಾಟಕ ಗ್ರಾಮ ಸ್ವರಾಜ್ಯ ವಿಷಯ ಕುರಿತ ಸರ್ಟಿಫಿಕೇಟ್ ಕೋರ್ಸ್ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಪದವಿ ನಂತರ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ, ಭವಿಷ್ಯವನ್ನು ರೂಪಿಸಿಕೊಂಡು ಸಮಾಜದ ಋಣ ತೀರಿಸುವ ಜವಾಬ್ದಾರಿ ವಿದ್ಯಾರ್ಥಿ ಸಮೂಹದ ಮೇಲಿದೆ . ಮುಂದಿನ ದಿನಗಳಲ್ಲಿ ಮಹಾವಿದ್ಯಾಲಯವು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿಕೊಳ್ಳಲು ಪೂರಕವಾದ ಕೋರ್ಸ್ ಗಳನ್ನು ನಡೆಸಲು ಶ್ರೀಮಠದಿಂದ ಸಹಕಾರ ನೀಡಲಾಗುವುದೆಂದು ಹೇಳಿದರು.

ಚಿತ್ರದುರ್ಗ ಸರ್ಕಾರಿ ಕಲಾ ಕಾಲೇಜಿನ ಸ್ನಾತಕೋತ್ತರ ವಿಭಾಗದ ಪ್ರಾಧ್ಯಾಪಕ ಡಾ. ಪಿ.ಎಸ್.ಗಂಗಾಧರ್ ಮಾತನಾಡಿ, ಗ್ರಾಮೀಣ ಭಾರತದ ಸರ್ವತೋಮುಖ ಬೆಳವಣಿಗೆಯಾದಾಗ ಮಾತ್ರ ದೇಶವು ಸಮಗ್ರ ಅಭಿವೃದ್ಧಿ ಹೊಂದಲು ಸಾಧ್ಯ. 1992ರಲ್ಲಿ ಭಾರತ ಸಂವಿಧಾನಕ್ಕೆ 73ನೇ ತಿದ್ದುಪಡಿಯ ಮೂಲಕ ಗ್ರಾಮೀಣ ಭಾರತದ ಆಡಳಿತವನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ಮಹತ್ವಪೂರ್ಣ ಹೆಜ್ಜೆ ಇಡಲಾಯಿತು. ತನ್ಮೂಲಕ ಈ ಹಿಂದೆ ಕೆಲವೇ ವ್ಯಕ್ತಿಗಳ ನಿಯಂತ್ರಣದಲ್ಲಿದ್ದ ಆಡಳಿತ ಸೂತ್ರವು ಶ್ರೀಸಾಮಾನ್ಯನಿಗೂ ತಲುಪುವಂತಾಯಿತು.

ಅಲ್ಲದೇ ಗ್ರಾಮೀಣ ಮಟ್ಟದಲ್ಲಿ ಸ್ತ್ರೀಯರಿಗೆ ಸಮಾನ ಅವಕಾಶಗಳು ದೊರೆಯುವಂತಾದುದು ಇದರ ಸಾಧನೆಯಾಗಿದೆ. ಒಂದು ವಿಶ್ವವಿದ್ಯಾಲ ಯದ ಮಟ್ಟದಲ್ಲಿ ಆರ್ಥಿಕ ಸಹಕಾರದೊಂದಿಗೆ ಆಯೋಜಿಸಬಹುದಾದ ಇಂತಹ ಕಾರ್ಯಕ್ರಮವನ್ನು ಯಾವುದೇ ಹಣಕಾಸಿನ ನೆರವು ಇಲ್ಲದೆ ಕಾಲೇಜು ಮಟ್ಟದಲ್ಲಿ ಆಯೋಜಿಸಿರುವುದು ತುಂಬ ಶ್ಲಾಘನೀಯ. ಇದರ ಫಲಾನುಭವಿಗಳಾದ ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಲು ಅನುಕೂಲವಾಗಲಿದೆ ಎಂದು ಹೇಳಿದರು.

ಕಾಲೇಜಿನ ಪ್ರಾಚಾರ್ಯರಾದ ಡಾ.ಎಸ್.ಎಚ್. ಪಂಚಾಕ್ಷರಿ ಮಾತನಾಡಿ, ಗ್ರಾಮೀಣಗಳನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ಕಾಲಕಾಲಕ್ಕೆ ತಿದ್ದುಪಡಿಯಾದ ವಿಧೇಯಕಗಳು ದೇಶದ ಸಮಗ್ರತೆ ಮತ್ತು ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಸಂಗತಿಗಳಾಗಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸರ್ಟಿಫಿಕೇಟ್ ಕೋರ್ಸ್ ಪೂರ್ಣಗೊಳಿಸಿದ 47 ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಐಕ್ಯೂಎಸಿ ಸಂಯೋಜಕರಾದ ಡಾ. ಹರ್ಷವರ್ಧನ್ ವೇದಿಕೆಯಲ್ಲಿದ್ದರು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರುಗಳಾದ ಪ್ರೊ.ಜಿ.ಎನ್. ಬಸವರಾಜಪ್ಪ, ಡಾ.ಬಿ. ರೇವಣ್ಣ, ಡಾ.ಸತೀಶ್ ನಾಯ್ಕ್, ಪ್ರೊ.ಎಚ್.ಎಂ.ಮಂಜುನಾಥ ಸ್ವಾಮಿ, ಪ್ರೊ.ಬಿ.ನಾಗರಾಜ್, ಪ್ರೊ.ಟಿ.ಎನ್.ರಜಪೂತ್, ಡಾ.ಎಸ್. ನಾಜಿರು ನ್ನೀಸಾ, ಪ್ರೊ.ವಿ.ನಳಿನಿ, ಪ್ರೊ.ಎನ್.ಚಂದಮ್ಮ, ಪ್ರೊ. ಸಿ.ಎನ್.ವೆಂಕಟೇಶ್ ಹಾಗೂ ವಿದ್ಯಾರ್ಥಿಗಳು ಇದ್ದರು.

ತೃತೀಯ ಬಿ.ಎ. ವಿದ್ಯಾರ್ಥಿನಿಯರಾದ ಸಹನಾ, ಪುಷ್ಪ ಪ್ರಾರ್ಥಿಸಿದರು. ಪ್ರೊ.ಆರ್.ಕೆ. ಕೇದಾರನಾಥ್ ಸ್ವಾಗತಿಸಿದರು. ಡಾ.ಬಿ.ರೇವಣ್ಣ ವಂದಿಸಿದರು. ಲೀಲಾ ನಿರೂಪಿಸಿದರು.------------------

ಚಂದ್ರವಳ್ಳಿಯ ಎಸ್‌ಜೆಎಂ ಕಾಲೇಜಿನ ಆಯೋಜಿಸಿದ್ದ ಕರ್ನಾಟಕ ಗ್ರಾಮ ಸ್ವರಾಜ್ಯ ವಿಷಯ ಕುರಿತ ಸರ್ಟಿಫಿಕೇಟ್ ಕೋರ್ಸ್ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಸಮಾರಂಭದಲ್ಲಿ ಬಸವಪ್ರಭು ಸ್ವಾಮೀಜಿ ಮಾತನಾಡಿದರು.