ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಿ: ಎಸ್. ಆನಂದ

| Published : Jun 01 2025, 03:31 AM IST

ಸಾರಾಂಶ

ಎರಡು ವರ್ಷ ಶಿಕ್ಷಣದಲ್ಲಿ ಹರುಷ ಎಂಬ ಧ್ಯೇಯವಾಕ್ಯದೊಂದಿಗೆ ಹಾನಗಲ್ಲ ತಾಲೂಕಿನ ಅರಳೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಾರಂಭೋತ್ಸವ ಮಂಗಲ ವಾದ್ಯಗಳನ್ನು ನುಡಿಸುವ ಮೂಲಕ ನಡೆಯಿತು.

ಹಾನಗಲ್ಲ: ಎರಡು ವರ್ಷ ಶಿಕ್ಷಣದಲ್ಲಿ ಹರುಷ ಎಂಬ ಧ್ಯೇಯವಾಕ್ಯದೊಂದಿಗೆ ತಾಲೂಕಿನ ಅರಳೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಾರಂಭೋತ್ಸವ ಮಂಗಲ ವಾದ್ಯಗಳನ್ನು ನುಡಿಸುವ ಮೂಲಕ ನಡೆಯಿತು. ಶುಕ್ರವಾರ ಅರಳೇಶ್ವರದಲ್ಲಿ ನೋಡಲ್ ಅಧಿಕಾರಿ ಹಿಂದುಳಿದ ವರ್ಗಗಳ ಇಲಾಖೆ ಸಹಾಯಕ ನಿರ್ದೇಶಕ ಎಸ್. ಆನಂದ ಅವರು ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಮಕ್ಕಳಲ್ಲಿ ಸ್ನೇಹಮಯ ವಾತಾವರಣ ನಿರ್ಮಾಣವಾಗಬೇಕು. ಇದು ಕಲಿಕೆಗೆ ಪೂರಕವಾಗಿರಬೇಕು. ಮಕ್ಕಳು ವರ್ಷಪೂರ್ತಿ ಶಾಲೆಗೆ ಬರುವಂತಾಗಲು ಪಾಲಕರ ಜವಾಬ್ದಾರಿಯೂ ಇದೆ. ಆಗ ಮಾತ್ರ ಶಿಕ್ಷರ ಶ್ರಮ ಸಾರ್ಥಕವಾಗುತ್ತದೆ ಎಂದರು.ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಸಿದ್ದು ಗೌರಣ್ಣನವರ ಮಾತನಾಡಿ, ಮಕ್ಕಳ ಮನಸ್ಸು ಬುದ್ಧಿ, ವಿವೇಕದ ಮೇಲೆ ಉತ್ತಮ ಪರಿಣಾಮ ಬೀರುವ ಶಿಕ್ಷಣ ಸರ್ಕಾರಿ ಶಾಲೆಗಳಿಂದ ಸಾಧ್ಯ. ಇಂದು ಪ್ರತಿಭಾವಂತ ಶಿಕ್ಷಕರ ನೇಮಕದ ಮೂಲಕ ಸರ್ಕಾರಿ ಶಾಲೆಗಳು ಅತ್ಯಂತ ಉತ್ತಮ ಶಿಕ್ಷಣ ನೀಡುತ್ತಿರುವುದು ಎಲ್ಲೆಡೆ ಸಂತಸದ ವಾತಾವರಣ ಮೂಡಿಸಿದೆ. ಸರ್ಕಾರಿ ಶಾಲೆಗಳ ಬಗ್ಗೆ ನಿರ್ಲಕ್ಷ್ಯ ಸಲ್ಲದು ಎಂದರು.ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ವಿದ್ಯಾ ಡಂಬಳಪ್ಪನವರ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಪ್ಪ ಕುರಿಯವರ, ಸದಸ್ಯ ಚಂದ್ರಪ್ಪ ಬಾರ್ಕಿ, ಗಣ್ಯರಾದ ನಾಗರಾಜ ಡಂಬಳಪ್ಪನವರ, ಶಂಭುಲಿಂಗ ಅರಳೇಶ್ವರ, ಸುರೇಶ ಹೀರೂರ, ಮಖಬೂಲಸಾಬ ಮುಜಾವರ, ದೇವಿಂದ್ರಪ್ಪ ಶಿವಪೂರ, ಯಶೋದಾ ದೊಡ್ಡಗೌಡರ, ಸುಶೀಲಾ ಹಳ್ಳದ, ಸುಮಿತ್ರಾ ತುಮರಿಕೊಪ್ಪ, ಅರುಣಕುಮಾರ ತಿರುಮಲೆ, ಮಲ್ಲೇಶ ಜಾವೋಜಿ, ಗೀತಾ ತವರಿ, ಸತೀಶ ಜಾವೋಜಿ, ಮುಖ್ಯೋಪಾಧ್ಯಾಯ ವೈ.ಡಿ. ಹೊಸಮನಿ, ಶಿಕ್ಷಕರಾದ ಸುಭಾಸ ಹೊಸಮನಿ, ಬಿ.ಎನ್. ಕರೆಪ್ಯಾಟಿ, ರಾಜೇಶ್ವರಿ ದಶಾವಂತರ, ಸುಶ್ಮಿತಾ ಹೀರೂರ, ನಾಗರಾಜ ಪೂಜಾರ, ಶಿಲ್ಪಾ ನಂದೀಕೋಲ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.