ಸಾರಾಂಶ
ಸಾರ್ವಜನಿಕರಿಗೆ ಲಿಂಗಾನುಪಾತ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ರಾಧಾ ಜಿ. ಮಣ್ಣೂರು ಹೇಳಿದರು.
ಗದಗ: ಸಾರ್ವಜನಿಕರಿಗೆ ಲಿಂಗಾನುಪಾತ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ರಾಧಾ ಜಿ. ಮಣ್ಣೂರು ಹೇಳಿದರು.
ನಗರದ ವಿದ್ಯಾದಾನ ಶಿಕ್ಷಣ ಸಮಿತಿಯ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆಯಡಿ ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ಜಿಲ್ಲೆಯಲ್ಲಿ ಲಿಂಗಾನುಪಾತ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು, ಆಗಸ್ಟ್-2024ರ ಅಂತ್ಯಕ್ಕೆ ಲಿಂಗಾನುಪಾತ 1000ಕ್ಕೆ 889 ಇದ್ದು ನಾವೆಲ್ಲರೂ ಲಿಂಗಾನುಪಾತ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಿ ಸುಧಾರಿಸಲು ಕ್ರಮ ವಹಿಸಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಿಷನ್ ಶಕ್ತಿ ಯೋಜನೆಯಡಿ ಮಹಿಳಾ ಸಬಲೀಕರಣ ಘಟಕಕ್ಕೆ ಭೇಟಿ ನೀಡಿ ಮಹಿಳೆಯರು ಮಾಹಿತಿ ಪಡೆಯಬಹುದು ಎಂದು ವಿವರಿಸಿದರು.
ವಿದ್ಯಾದಾನ ಸಮಿತಿ ಬಿ.ಇಡಿ. ಕಾಲೇಜ್ ಪ್ರಾ. ಡಾ. ಗಂಗೂಬಾಯಿ ಪವಾರ ಮಾತನಾಡಿ, ಮಹಿಳೆಯರು ವಿವಿಧ ಇಲಾಖೆಯಡಿ ಲಭ್ಯವಿರುವ ಸೌಲಭ್ಯಗಳನ್ನು ಪಡೆದುಕೊಂಡು ಕಾರ್ಯಕ್ರಮದ ಉದ್ದೇಶವನ್ನು ಈಡೇರಿಸಬೇಕೆಂದು ತಿಳಿಸಿದರು.ಬಾಲಕರ ಬಾಲಮಂದಿರ ಅಧೀಕ್ಷಕಿ ಗಿರೀಜಾ ದೊಡ್ಡಮನಿ, ರಾಜೇಶ್ವರಿ ಮಾತನಾಡಿದರು. ಈ ವೇಳೆ ಸಖಿ ಒನ್ ಸ್ಟಾಫ್ ಸೆಂಟರ್ ಆಡಳಿತಾಧಿಕಾರಿ ಸುಜಾತಾ ಮಠಪತಿ, ವಕೀಲರಾದ ಖಾಜಾ ಮುನ್ನಿ ಸೇರಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹಾಗೂ ವಿದ್ಯಾದಾನ ಸಮಿತಿಯ ಸಿಬ್ಬಂದಿ ಇದ್ದರು. ಶ್ರೀಧರ ಪೂಜಾರ ನಿರೂಪಿಸಿದರು. ಮಧು ಉಪ್ಪಾರ ವಂದಿಸಿದರು.