ಸಾರಾಂಶ
ಯುವ ಮತದಾರರು ಚುನಾವಣೆಯ ಪ್ರಮುಖ ಶಕ್ತಿ. ಅವರಲ್ಲಿ ಅರಿವು ಮೂಡಿಸಲು ಸಾಮಾಜಿಕ ಜಾಲತಾಣಗಳ ಸದ್ಬಳಕೆ ಮಾಡಿಕೊಳ್ಳಬೇಕು. ವಿಡಿಯೋ, ಪೋಸ್ಟರ್, ಸಣ್ಣ ಜಾಹೀರಾತುಗಳ ಮೂಲಕ ಮತದಾನದ ಮಹತ್ವವನ್ನು ತಲುಪಿಸಬೇಕು.
ಗದಗ: ಚುನಾವಣೆಯು ಪ್ರಜಾಪ್ರಭುತ್ವದ ಹಬ್ಬ. ಪ್ರತಿಯೊಬ್ಬ ನಾಗರಿಕನು ತನ್ನ ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಪಾಲ್ಗೊಳ್ಳಬೇಕು. ಈ ನಿಟ್ಟಿನಲ್ಲಿ ಸರ್ಕಾರದ ವಿವಿಧ ಇಲಾಖೆ, ಶಿಕ್ಷಣ ಸಂಸ್ಥೆಗಳು, ಹಾಗೂ ಸಾಮಾಜಿಕ ಸಂಘಟನೆಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ರಾಜ್ಯದ ನೋಡಲ್ ಅಧಿಕಾರಿ ಪಿ.ಎಸ್. ವಸ್ತ್ರದ ತಿಳಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ಮತದಾರರ ಜಾಗೃತಿ ಮತ್ತು ಪಾಲ್ಗೊಳ್ಳುವಿಕೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಯುವ ಮತದಾರರು ಚುನಾವಣೆಯ ಪ್ರಮುಖ ಶಕ್ತಿ. ಅವರಲ್ಲಿ ಅರಿವು ಮೂಡಿಸಲು ಸಾಮಾಜಿಕ ಜಾಲತಾಣಗಳ ಸದ್ಬಳಕೆ ಮಾಡಿಕೊಳ್ಳಬೇಕು. ವಿಡಿಯೋ, ಪೋಸ್ಟರ್, ಸಣ್ಣ ಜಾಹೀರಾತುಗಳ ಮೂಲಕ ಮತದಾನದ ಮಹತ್ವವನ್ನು ತಲುಪಿಸಬೇಕು ಎಂದರು.
ಅಧಿಕಾರಿಗಳು ಮತ್ತು ಸಿಬ್ಬಂದಿ ಸದಸ್ಯರಿಗೆ ಮತದಾರರ ಶೇಕಡಾವಾರು ಹೆಚ್ಚಿಸುವ ಕಾರ್ಯವನ್ನು ಗುರಿಯನ್ನಾಗಿಸಿಕೊಂಡು ಕಾರ್ಯ ಯೋಜನೆ ರೂಪಿಸಬೇಕು. ಶಾಲೆ-ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳು, ಮತದಾರರ ರ್ಯಾಲಿಗಳು, ಕಿರುಚಿತ್ರ ಪ್ರದರ್ಶನ, ಮತದಾರ ಪ್ರೋತ್ಸಾಹ ಸ್ಪರ್ಧೆಗಳು ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಸ್ವೀಪ್ ಅಭಿಯಾನವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮೂಲಕ ಜಿಲ್ಲೆಯ ಮತದಾರರಲ್ಲಿ ಮತದಾನದ ಜಾಗೃತಿ ಮೂಡಿಸುವುದು ಸಭೆಯ ಪ್ರಮುಖ ಉದ್ದೇಶ. ಮಹಿಳಾ ಮತ್ತು ಯುವ ಮತದಾರರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ವಿಶೇಷ ಅಭಿಯಾನಗಳನ್ನು ರೂಪಿಸುವ ಅಗತ್ಯವಿದೆ ಎಂದು ತಿಳಿಸಿದರು.ಸಭೆಯಲ್ಲಿ ಅಧಿಕಾರಿಗಳು ತಮ್ಮ ತಮ್ಮ ವಿಭಾಗಗಳಲ್ಲಿ ಕೈಗೊಳ್ಳಬಹುದಾದ ಜಾಗೃತಿ ಕ್ರಮಗಳ ಬಗ್ಗೆ ಅಭಿಪ್ರಾಯ ವಿನಿಮಯ ಮಾಡಿದರು. ಪ್ರತ್ಯೇಕವಾಗಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕುರಿತು ಸೂಚನೆ ನೀಡಲಾಯಿತು.
ಈ ವೇಳೆ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಸಹಾಯಕ ಆಯುಕ್ತ ಗಂಗಪ್ಪ ಎಂ., ಆರ್.ಎಸ್. ಬುರಡಿ, ಶಿದ್ದಲಿಂಗ ಮಸಾನಾಯಕ, ಡಾ. ಎಸ್.ಎಸ್. ನೀಲಗುಂದ, ಪದ್ಮಾವತಿ ಜಿ., ಅಮಿತ್ ಬಿದರಿ, ವಸಂತ ಮಡ್ಲೂರ, ಶಿವಕುಮಾರ ಕುರಿಯವರ, ಶರಣು ಗೊಗೇರಿ, ಜಿ.ಎಂ. ಮುಂದಿನಮನಿ, ಕೆ. ಮಹಾಂತೇಶ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ತಹಸೀಲ್ದಾರರು, ಶಿಕ್ಷಣ ಇಲಾಖೆಯ ಪ್ರತಿನಿಧಿಗಳು ಹಾಗೂ ಸ್ವೀಪ್ ನೊಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))