ವಿದ್ಯುತ್‌ ಅವಘಡ ತಪ್ಪಿಸಲು ಜನಜಾಗೃತಿ ಮೂಡಿಸಿ

| Published : Jul 02 2024, 01:30 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ತಿಕೋಟಾ ಮಳೆಗಾಲದಲ್ಲಿ ವಿದ್ಯುತ್ ಸಂಬಂಧಿತ ಅವಘಡಗಳನ್ನು ತಪ್ಪಿಸಲು ಡಂಗುರ ಸಾರುವ ಮೂಲಕ ಜನಜಾಗೃತಿ ಮೂಡಿಸಬೇಕು ಎಂದು ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ತಿಕೋಟಾ

ಮಳೆಗಾಲದಲ್ಲಿ ವಿದ್ಯುತ್ ಸಂಬಂಧಿತ ಅವಘಡಗಳನ್ನು ತಪ್ಪಿಸಲು ಡಂಗುರ ಸಾರುವ ಮೂಲಕ ಜನಜಾಗೃತಿ ಮೂಡಿಸಬೇಕು ಎಂದು ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಿಕೋಟಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ₹1.50 ಕೋಟಿ ವೆಚ್ಚದ ತಿಕೋಟಾ ತಾಜಪೂರ.ಎಚ್, ₹1.20 ಕೋಟಿ ವೆಚ್ಚದ ತಿಕೋಟಾ-ಐಟಿಐ ಕಾಲೇಜುವರೆಗಿನ ರಸ್ತೆ, ₹1.20 ಕೋಟಿ ವೆಚ್ಚದ ತಿಕೋಟಾ- ನಂದಿಕೋಲ ರಸ್ತೆ ಸುಧಾರಣೆ ಭೂಮಿ ಪೂಜೆ ನೆರೆವೇರಿಸಿದರು. ಅಲ್ಲದೇ, ₹ 25 ಲಕ್ಷ ವೆಚ್ಚದ ತಿಕೋಟಾ ರೈತ ಸಂಪರ್ಕ ಕೇಂದ್ರ ಗೋಡೌನ್‌ ಕಟ್ಟಡ ನಿರ್ಮಾಣ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಮಳೆಗಾಲದಲ್ಲಿ ಜಿಲ್ಲೆಯ ನಾನಾ ಕಡೆಗಳಲ್ಲಿ ವಿದ್ಯುತ್ ಸಂಬಂಧಿತ ಅವಘಡಗಳಲ್ಲಿ ಈಗಾಗಲೇ ಮಕ್ಕಳು ಸೇರಿದಂತೆ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಮುಂಗಾರು ಆರಂಭವಾದ ನಂತರ ಹಲವು ಕಡೆಗಳಲ್ಲಿ ವಿದ್ಯುತ್ ತಂತಿಗಳು ಮಳೆ-ಗಾಳಿಗೆ ತುಂಡಾಗಿ ಬಿದ್ದಿವೆ. ಸುತ್ತಲಿರುವ ವಿದ್ಯುತ್ ಕಂಬಗಳಿದ್ದರೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಹಿರೇಮಠದ ಶಿವಬಸವ ಶಿವಾಚಾರ್ಯ ಸ್ವಾಮೀಜಿ, ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಜಿಪಂ ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೋಟ, ಮುಖಂಡರಾದ ಪ್ರಭಾವತಿ ನಾಟಿಕಾರ, ಜಕ್ಕಪ್ಪ ಯಡವೆ, ಯಾಕೂಬ್‌ ಜತ್ತಿ, ವಿಜುಗೌಡ ಪಾಟೀಲ, ಡಾ.ಜಿ.ಎಸ್.ಮೈಶಾಳ, ತಹಸೀಲ್ದಾರ್‌ ಪ್ರಶಾಂತ ಚನಗೊಂಡ, ಗ್ರಾಮದ ಹಿರಿಯರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

ತಿಕೋಟಾ ತಾಲೂಕಿನ ಮುಮ್ಮೆಟ್ಟಿಗುಡ್ಡದ ಕಾರ್ಯಕ್ರಮದಲ್ಲಿ, ಶಾಸಕ ಸುನೀಲ ಗೌಡ ₹ 1.45 ಕೋಟಿ ವೆಚ್ಚದ ಸಿದ್ದಾಪೂರ- ಅಮೋಘಸಿದ್ದ ರಸ್ತೆ ಸುಧಾರಣೆ, ಅಮೋಘಸಿದ್ದ ಗುಡ್ಡದಿಂದ ಜಾಲಗೇರಿ ಮುಖ್ಯ ರಸ್ತೆಯ ವರೆಗೆ ₹1.50 ಕೋಟಿ ವೆಚ್ಚದ ರಸ್ತೆ ಸುಧಾರಣೆ, ಇಟ್ಟಂಗಿಹಾಳ- ಖಿಲಾರಹಟ್ಟಿ ರಸ್ತೆಯಿಂದ ಇಟ್ಟಂಗಿಹಾಳ ಎಲ್.ಟಿ- 2 ಅಮೋಘಸಿದ್ದ ಗುಡ್ಡದ ವರೆಗೆ ₹ 2 ಕೋಟಿ ವೆಚ್ಚದ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ಅರ್ಜುನ ಹೀರು ರಾಠೋಡ, ಮುಖಂಡರಾದ ಚನ್ನಪ್ಪ ದಳವಾಯಿ, ಪೀರ ಪಟೇಲ, ಭೂತಾಳಿಸಿದ್ದ ಒಡೆಯರ, ಅರಕೇರಿ ಗ್ರಾಪಂ ಅಧ್ಯಕ್ಷ ಅಣ್ಣಪ್ಪ ಮಾನವರ, ಜಾಲಗೇರಿ ಗ್ರಾಪಂ ಅಧ್ಯಕ್ಷ ಓಗೆಪ್ಪ ಗೋಪಣೆ, ಮುಖಂಡರಾದ ಗೀತಾಂಜಲಿ ಪಾಟೀಲ ಉಪಸ್ಥಿತರಿದ್ದರು.

ತಿಕೋಟಾ ನಂತರ ನಿಡೋಣಿ ಬಳಿ ನಡೆದ ಕಾರ್ಯಕ್ರಮದಲ್ಲಿ ತಾಜಪುರ-ಎಚ್ ದಿಂದ ನಿಡೋಣಿವರೆಗಿನ ರಸ್ತೆ ಸುಧಾರಣೆ ಕಾಮಗಾರಿಗೆ ಸುನೀಲಗೌಡ ಪಾಟೀಲ ಭೂಮಿಪೂಜೆ ನೆರವೇರಿಸಿದರು. ಅಲ್ಲದೇ, ಗ್ರಾಮ ಒನ್ ಕೇಂದ್ರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ವಿರಕ್ತ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಕೆಎಂಎಫ್ ನಿರ್ದೇಶಕ ಶ್ರೀಶೈಲಗೌಡ ಪಾಟೀಲ ನಿಡೋಣಿ, ಮುಖಂಡರಾದ ಶಂಕರಗೌಡ ಆರ್. ಪಾಟೀಲ, ಜಾಫರ್ ಇನಾಮದಾರ, ಸೋಮಶೇಖರ ಕೋಟ್ಯಾಳ, ಕುಮಾರೇಶ ಬಡಗಿ, ಭೀಮಗೊಂಡ ಗವಾರಿ, ಸಾಬು ತೇರದಾಳ ಮುಂತಾದವರು ಉಪಸ್ಥಿತರಿದ್ದರು.

-----------------------------

ಕೋಟ್‌

ಹೆಸ್ಕಾಂ ಹಾಗೂ ಕೆಪಿಟಿಸಿಎಲ್ ಅಧಿಕಾರಿಗಳಿಗೆ ವಿದ್ಯುತ್ ಸಂಬಂಧಿತ ಅವಘಡಗಳನ್ನು ತಪ್ಪಿಸಲು ಈಗಾಗಲೇ ಸೂಚನೆ ನೀಡಿದ್ದೇನೆ. ಅಲ್ಲದೇ, ಸ್ಥಳೀಯ ಸಂಸ್ಥೆಗಳಲ್ಲಿ ಈ ಕುರಿತು ಅಧಿಕಾರಿಗಳೊಂದಿಗೆ ಸಭೆಯನ್ನೂ ನಡೆಸಲಾಗುವುದು. ಆದ್ದರಿಂದ ರೈತರು ಮತ್ತು ಸಾರ್ವಜನಿಕರು ಕೂಡ ವಿದ್ಯುತ್ ತಂತಿ ಹರಿದು ಬಿದ್ದಿದ್ದರೆ ಮತ್ತು ಭೂಮಿಯಲ್ಲಿ ವಿದ್ಯುತ್ ಪ್ರವಹಿಸುತ್ತಿದ್ದರೆ ಕೂಡಲೇ ಹೆಸ್ಕಾಂ ಗಮನಕ್ಕೆ ತರಬೇಕು.

- ಸುನೀಲಗೌಡ ಪಾಟೀಲ, ವಿಧಾನ ಪರಿಷತ್‌ ಸದಸ್ಯ