ಕನ್ನಡಪ್ರಭ ವಾರ್ತೆ ಪಾಂಡವಪುರ

ವಿಜ್ಞಾನ- ತಂತ್ರಜ್ಞಾನ ನಾಗಾಲೋಟದಲ್ಲಿ ಬೆಳವಣಿಗೆ ಕಾಣುತ್ತಿದೆ. ಎಐ (ಕೃತಕ ಬುದ್ಧಿಮತ್ತೆ) ಎಲ್ಲ ಕ್ಷೇತ್ರಗಳನ್ನು ಆವರಿಸಿಕೊಳ್ಳುತ್ತಿದೆ. ಈ ಹೊತ್ತಿನಲ್ಲಿ ವಿಜ್ಞಾನ ಕ್ಷೇತ್ರದ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡುವಂತೆ ಮಾಡುವುದು ಪೋಷಕರ ಕರ್ತವ್ಯ ಎಂದು ಬಿಜಿಎಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ತಿಳಿಸಿದರು.

ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ವಿಜ್ಞಾನದ ದಿನದ ಪ್ರಯುಕ್ತ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ, ಚಿಕ್ಕ ವಯಸ್ಸಿನಲ್ಲೇ ಮಕ್ಕಳು ವಿಜ್ಞಾನದತ್ತ ಆಕರ್ಷಿತರಾಗುವಂತೆ ಮಾಡಬೇಕು. ವಿಜ್ಞಾನದ ಬಗ್ಗೆ ಕುತೂಹಲ ಮೂಡುವಂತೆ ಮಾಡಿದಾಗ ಕಲಿಕೆ ಮತ್ತು ಸಂಶೋಧನೆ ಕಡೆಗೆ ಮಕ್ಕಳು ಆಸಕ್ತಿ ವಹಿಸುವರು ಎಂದು ಹೇಳಿದರು.

ಮಕ್ಕಳಲ್ಲಿ ಇರುವ ವಿಶೇಷ ಪ್ರತಿಭೆಯನ್ನು ಹೊರತರುವ ಉದ್ದೇಶದಿಂದ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನವನ್ನು ಆಯೋಜನೆ ಮಾಡಲಾಗಿದೆ. ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಮಕ್ಕಳು ಮಾಡಿರುವ ಮಾದರಿಯನ್ನು ನೋಡಿದರೆ ನಮಗೆ ಅಚ್ಚರಿಯಾಗುತ್ತದೆ. ೬೦೦- ೭೦೦ ಮಾದರಿಯನ್ನು ಮಕ್ಕಳು ಪ್ರದರ್ಶಿಸಿದ್ದರು. ಮಕ್ಕಳ ಪ್ರತಿಭೆಯನ್ನು ಹೊರತರಲು ಸೂಕ್ತವಾದ ವೇದಿಕೆಯನ್ನು ನೀಡಬೇಕು. ಆಗ ಮಾತ್ರ ಮಕ್ಕಳಲ್ಲಿರುವ ವಿಶೇಷ ಪ್ರತಿಭೆ ಗುರುತಿಸಲು ಸಾಧ್ಯವಾಗುತ್ತಿದೆ. ಪೋಷಕರು ಸಹ ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡುತ್ತಿದ್ದಾರೆ. ಶಿಕ್ಷಕರು ತಾವು ಸೂಚಿಸಿದ ಮಾದರಿಯನ್ನು ಮಕ್ಕಳಿಂದ ನಿರ್ಮಿಸಿ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಕಳುಹಿಸಿದ್ದಾರೆ. ಶಿಕ್ಷಕರು, ಶಾಲೆಗಳು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಂಬಂಧಿಸಿದ ಮಾಡುವ ಪ್ರತಿ ಕಾರ್ಯಕ್ರಮವಕ್ಕೂ ಪೂರಕವಾಗಿ ಸಹಕಾರ ನೀಡುತ್ತಿದ್ದಾರೆ ಎಂದರು.

ಬಳಿಕ ಮಕ್ಕಳು ತಯಾರಿಸಿಕೊಂಡು ಬಂದಿರುವ ಮಾದರಿಗಳ ಬಗ್ಗೆ ಮಾಹಿತಿ ಪಡೆದರು.


ಮನುಷ್ಯನ ಅಂಗಾಂಗಗಳು ಕೆಲಸ ಮಾಡುವ ಬಗ್ಗೆ, ಪರಿಸರ, ಕೃಷಿ, ತಂತ್ರಜ್ಞಾನ, ಬಾಹ್ಯಾಕಾಶದ ಸಂಶೋಧನೆಗಳು, ಡ್ಯಾಂ, ವಿದ್ಯುತ್ ಉತ್ಪಾದನೆ, ಮಾದರಿ ಕೃಷಿ, ಮಾದರಿ ನಗರ, ಟೆಕ್ನಾಲಜಿಗಳು ಹೀಗೆ ಹಲವಾರು ಮಾದರಿಯನ್ನು ಪ್ರದರ್ಶನ ಮಾಡುವ ಮೂಲಕ ಗಮನಸೆಳೆದರು. ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಶಾಲೆಯ ಪ್ರಿ- ಕೆಜಿ ಮಕ್ಕಳಿಂದ ಹಿಡಿದು ೯ ನೇ ತರಗತಿಯವರೆಗೂ ೧೪೦೦ ಮಕ್ಕಳು ವಿದ್ಯಾರ್ಥಿಗಳು ಭಾಗವಹಿಸಿ ವೈವಿಧ್ಯಮಯ ವಿಜ್ಞಾನದ ಮಾದರಿಗಳನ್ನು ಪ್ರದರ್ಶಿಸಿದರು.

ಈ ಸಂದರ್ಭದಲ್ಲಿ ಪ್ರಾಂಶುಪಾಲ ರಘು ಸೇರಿದಂತೆ ಹಲವರು ಇದ್ದರು.