ಮಕ್ಕಳಿಗೆ ಕಲ್ಪನೆಯ ಲೋಕದ ವಿಸ್ತರಣೆಗೆ ಸಾಹಿತ್ಯದ ಅಭಿರುಚಿ ಅಗತ್ಯವಾಗಿದೆ. ಶಾಲೆಗಳಲ್ಲಿಯೂ ಸಾಹಿತ್ಯ ಅಧ್ಯಯನಕ್ಕೆ ಅವಕಾಶ ಸಿಗಬೇಕು.
ಗದಗ: ಕಾಲಕ್ಕೆ ತಕ್ಕಂತೆ ಕಲಿಕೆ ಬದಲಾಗುತ್ತಲೇ ಇರುತ್ತದೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ, ಸಾಹಿತ್ಯದಲ್ಲಿ ಮಕ್ಕಳ ಆಸಕ್ತಿ, ಆನಂದ, ಆಸ್ವಾದಿಸುವಿಕೆ ಪ್ರಮುಖವಾಗುತ್ತದೆ. ಮಕ್ಕಳ ಒಲವಿಗೆ ತಕ್ಕ ಸಾಹಿತ್ಯ ರಚನೆಯಾಗಬೇಕು. ಈ ಮೂಲಕ ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಬೆಳೆಸಲು ಸಾಧ್ಯವಾಗುತ್ತದೆ ಎಂದು ಸಾಹಿತಿ ವೀರೇಶ ಮೇಟಿ ತಿಳಿಸಿದರು.ವಿಜಯ ಲಲಿತಕಲಾ ಮಹಾವಿದ್ಯಾಲಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಎಂ.ಎಸ್. ಹುಲ್ಲೂರ ಹೈಟೆಕ್ ಕೋಚಿಂಗ್ ಸೆಂಟರ್ ಸಹಯೋಗದಲ್ಲಿ ಜರುಗಿದ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಮಕ್ಕಳ ಸಾಹಿತಿಗಳೊಂದಿಗೆ ಸಂವಾದ ಗೋಷ್ಠಿಯಲ್ಲಿ ಮಕ್ಕಳು ಮತ್ತು ಸಾಹಿತ್ಯಾಭಿರುಚಿ ಕುರಿತು ಮಾತನಾಡಿ, ಮಕ್ಕಳಿಗೆ ಕಲ್ಪನೆಯ ಲೋಕದ ವಿಸ್ತರಣೆಗೆ ಸಾಹಿತ್ಯದ ಅಭಿರುಚಿ ಅಗತ್ಯವಾಗಿದೆ. ಶಾಲೆಗಳಲ್ಲಿಯೂ ಸಾಹಿತ್ಯ ಅಧ್ಯಯನಕ್ಕೆ ಅವಕಾಶ ಸಿಗಬೇಕು ಎಂದರು.ಮಕ್ಕಳ ಸಾಹಿತ್ಯದ ಹೊಸ ಹೊಳಹುಗಳು ವಿಷಯವಾಗಿ ಡಾ. ವಿನಾಯಕ ಕಮತದ ಮಾತನಾಡಿ, ಮಕ್ಕಳ ಮಾತಿಗೆ ಧ್ವನಿಯಾಗದ ಹೊರತು, ಹೊಸತನ್ನು ಸೃಷ್ಟಿಸಲು ಸಾಧ್ಯವಿಲ್ಲ ಎಂದರು.ಸಾಹಿತಿ ಆರ್.ಬಿ. ಗುರಬಸವರಾಜ ಮಾತನಾಡಿ, ಮಕ್ಕಳಿಗೆ ಸಂಸ್ಕಾರ ನೀಡುವ ಮೊದಲು ಅವರೆದುರಿಗೆ ಕುಳಿತು ನೀವು ಪುಸ್ತಕ ಓದಲು ಆರಂಭಿಸಿ, ಮಕ್ಕಳೊಡನೆ ಆಡಲು ಪಾಲಕರಿಗೆ ಸಮಯವಿಲ್ಲ, ಮಕ್ಕಳ ಮಾತನ್ನು ಕೇಳುವವರಿಲ್ಲ. ಅವರ ಮಾತನ್ನು ಕೇಳಿಸಿಕೊಳ್ಳಿ. ಮಕ್ಕಳ ಸ್ವ ಅನುಭವಗಳನ್ನು ಬರೆಯಲು ಮೊದಲು ಪ್ರೇರಣೆ ನೀಡುವ ಕೆಲಸ ನಮ್ಮಿಂದಾಗಬೇಕು. ಅಂಕಾಸುರರು ಜೀವನದ ನಿರ್ವಹಣೆಯಲ್ಲಿ ಎಷ್ಟು ಜನ ಗೆದ್ದಿದ್ದಾರೆ ಎಂಬುದನ್ನು ಒಮ್ಮೆ ಅವಲೋಕನ ಮಾಡಿ ನೋಡಿ. ಮಕ್ಕಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಕೆಲಸ ನಡೆಯುತ್ತದೆ. ಒತ್ತಡರಹಿತ ಪಠ್ಯದಾಚೆಗಿನ ಕಲಿಕೆ ಜೀವನ ಕೌಶಲ್ಯವನ್ನು ಬೆಳೆಸುತ್ತದೆ ಎಂದರು.ಡಾ. ರಾಜೇಂದ್ರ ಗಡಾದ ಮಾತನಾಡಿದರು. ರವಿ ದೇವರಡ್ಡಿ ನಿರೂಪಿಸಿದರು. ಚಂದ್ರಕಲಾ ಇಟಗಿಮಠ ಸ್ವಾಗತಿಸಿದರು. ಶಿಲ್ಪಾ ಮ್ಯಾಗೇರಿ ವಂದಿಸಿದರು.