ನಿರಂತರ ರಂಗಚಟುವಟಿಕೆಗಳಿಂದಷ್ಟೇ ರಂಗಭೂಮಿ ವಿಸ್ತಾರಗೊಳ್ಳುತ್ತದೆ. ರಂಗಕರ್ಮಿಗಳು ಪರಸ್ಪರ ಬಾಂಧವ್ಯವನ್ನಿರಿಸಿಕೊಂಡು ಚಟುವಟಿಕೆಗಳನ್ನು ನಡೆಸಿದಾಗ ಹೊಸ ಸಾಧ್ಯತೆಗಳು ಸೃಷ್ಟಿಯಾಗುತ್ತದೆ ಎಂದು ಉಡುಪಿ ತುಳುಕೂಟದ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಉಡುಪಿ

ನಿರಂತರ ರಂಗಚಟುವಟಿಕೆಗಳಿಂದಷ್ಟೇ ರಂಗಭೂಮಿ ವಿಸ್ತಾರಗೊಳ್ಳುತ್ತದೆ. ರಂಗಕರ್ಮಿಗಳು ಪರಸ್ಪರ ಬಾಂಧವ್ಯವನ್ನಿರಿಸಿಕೊಂಡು ಚಟುವಟಿಕೆಗಳನ್ನು ನಡೆಸಿದಾಗ ಹೊಸ ಸಾಧ್ಯತೆಗಳು ಸೃಷ್ಟಿಯಾಗುತ್ತದೆ ಎಂದು ಉಡುಪಿ ತುಳುಕೂಟದ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ ಅಭಿಪ್ರಾಯಪಟ್ಟರು. ಅವರು ನಗರದ ಜಗನ್ನಾಥ ಸಭಾಭವನದಲ್ಲಿ ಸುಮನಸಾ ಕೊಡವೂರು ಸಂಸ್ಥೆಯ ರಜತ ಸಂಭ್ರಮ ಸಲುವಾಗಿ ವಿವಿಧ ರಂಗತಂಡಗಳ ಮತ್ತು ರಂಗ ಕಲಾವಿದರ ಸ್ನೇಹ ಸಮ್ಮಿಲನ - ರಂಗ ಸಾರೂಪ್ಯವನ್ನು ಉದ್ಘಾಟಿಸಿ ಮಾತನಾಡಿದರು. ಬೆರಳುಗಳು ಮುಷ್ಟಿಯಾಗಿ ಒಗ್ಗಟ್ಟು ಸೃಷ್ಟಿಯಾಗುತ್ತದೆ, ಅದರ ಜೊತೆ ಕೈಗಳು ಸೇರಿದರೇ ಸಮಷ್ಟಿಯಾಗುತ್ತದೆ ಎನ್ನುವ ಪರಿಕಲ್ಪನೆಯಡಿ, ಅತಿಥಿಗಳೆಲ್ಲಾ ಮುಷ್ಟಿ ಕೈ ಜೋಡಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ರಜತಸಂಭ್ರಮದ ಅಧ್ಯಕ್ಷ ಉದ್ಯಮಿ ಹರಿಪ್ರಸಾದ್ ರೈ ಸಮಾರಭದ ಅಧ್ಯಕ್ಷತೆ ವಹಿಸಿದ್ದು, ರಂಗಭೂಮಿ ನಿಂತ ನೀರಾಗಬಾರದೆನ್ನುವ ನಿಟ್ಟಿನಲ್ಲಿ ಹೊಸ ಅಲೋಚನೆಗಳೊಂದಿಗೆ ಭವಿಷ್ಯಕ್ಕೆ ಪೂರಕವಾದ ಕಾರ್ಯಕ್ರಮಗಳು ಸುಮನಸಾದ ಮೂಲಕ ಜರಗುತ್ತಿರುವುದು ಶ್ಲಾಘನೀಯ ಎಂದರು. ವೇದಿಕೆಯಲ್ಲಿ ರಜತಸಂಭ್ರಮದ ಉಪಾಧ್ಯಕ್ಷರಾದ ದಿವಾಕರ್ ಸನಿಲ್, ಮಹಮ್ಮದ್ ಮೌಲಾ, ಸಲಹೆಗಾರಾದ ಸುಕನ್ಯಾ ಮಾರ್ಟಿಸ್, ಡಾ.ಸುನಿತಾ ವಿ. ಹಾಗೂ ಸುಮನಸಾ ಸಂಚಾಲಕರ ಭಾಸ್ಕರ್ ಪಾಲನ್ ಬಾಚನಬೈಲು, ಗೌರವಾಧ್ಯಕ್ಷ ಎಂ.ಎಸ್.ಭಟ್, ಕಾರ್ಯಕ್ರಮ ಸಂಯೋಜಕ ದಿವಾಕರ್ ಕಟೀಲ್, ಯೋಗೀಶ್ ಕೊಳಲಗಿರಿ ಉಪಸ್ಥಿತರಿದ್ದರು. ಸುಮನಸಾ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು ಸ್ವಾಗತಿಸಿದರು, ದಯಾನಂದ ಕರ್ಕೇರ ಪ್ರಸ್ತಾವಿಕ ಮಾತನ್ನಾಡಿದರು, ಕಾರ್ಯದರ್ಶಿ ಚಂದ್ರಕಾಂತ್ ಕುಂದರ್ ವಂದಿಸಿದರು. ಯೋಗೀಶ್ ಕೊಳಲಗಿರಿ ಕಾರ್ಯಕ್ರಮ ನಿರೂಪಿಸಿದರು.