ಶೈಕ್ಷಣಿಕ ಅಭಿವೃದ್ಧಿಗೆ ಸೃಜನಶೀಲತೆ ಅಗತ್ಯ: ಪ್ರೊ.ಪಿ.ಎಲ್.ಧರ್ಮ

| Published : Jul 17 2025, 12:30 AM IST

ಸಾರಾಂಶ

ಮಂಗಳೂರು ವಿವಿಯ ರಾಣಿ ಅಬ್ಬಕ್ಕ ಸಭಾಂಗಣದಲ್ಲಿ ವಿವಿ ಕಾಲೇಜಿನ ಡಾ.ಭಾರತಿ ಪಿಲಾರ್ ಮತ್ತು ಕೇರಳ ಅಸ್ಸಾಂಷನ್ ಕಾಲೇಜಿನ ಡಾ. ವಿನ್ಸಿ ಅಬ್ರಹಾಂ ಬರೆದ ‘ಪೈಥಾನ್ ಬೇಸಿಕ್ಸ್ ಅಂಡ್ ಬಿಯೊಂಡ್’ ಹಾಗೂ ‘ಆರ್ ಫಾರ್ ಸ್ಟಾಟಿಸ್ಟಿಕಲ್ ಕಂಪ್ಯೂಟಿಂಗ್’ ಎನ್ನುವ ಎರಡು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಪ್ರಾಧ್ಯಾಪಕರು ಪುಸ್ತಕಗಳನ್ನು ಬರೆಯುವ ಹವ್ಯಾಸ ಬೆಳೆಸಿಕೊಳ್ಳಬೇಕು. ಶೈಕ್ಷಣಿಕ ಅಭಿವೃದ್ಧಿಗೆ ಸೃಜನಶೀಲತೆಯ ಅಗತ್ಯವಿದೆ. ಅಧ್ಯಯನದ ಜತೆಗೆ ಅಧ್ಯಾಪನೆ, ಅಧ್ಯಾಪನೆಯ ಜತೆಗೆ ಸೃಜನಶೀಲ ಬರವಣಿಗೆ ಇವೆಲ್ಲವೂ ಸೇರಿದಾಗ ಶೈಕ್ಷಣಿಕ ಬೆಳವಣಿಗೆ ಸಾಧ್ಯ ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್. ಧರ್ಮ ಹೇಳಿದ್ದಾರೆ.ಮಂಗಳೂರು ವಿವಿಯ ರಾಣಿ ಅಬ್ಬಕ್ಕ ಸಭಾಂಗಣದಲ್ಲಿ ವಿವಿ ಕಾಲೇಜಿನ ಡಾ.ಭಾರತಿ ಪಿಲಾರ್ ಮತ್ತು ಕೇರಳ ಅಸ್ಸಾಂಷನ್ ಕಾಲೇಜಿನ ಡಾ. ವಿನ್ಸಿ ಅಬ್ರಹಾಂ ಬರೆದ ‘ಪೈಥಾನ್ ಬೇಸಿಕ್ಸ್ ಅಂಡ್ ಬಿಯೊಂಡ್’ ಹಾಗೂ ‘ಆರ್ ಫಾರ್ ಸ್ಟಾಟಿಸ್ಟಿಕಲ್ ಕಂಪ್ಯೂಟಿಂಗ್’ ಎನ್ನುವ ಎರಡು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪೈಥಾನ್ ಬೇಸಿಕ್ಸ್ ಅಂಡ್ ಬಿಯೊಂಡ್’ ಪುಸ್ತಕವನ್ನು ಮಂಗಳೂರು ವಿವಿ ಕುಲಪತಿ ಪ್ರೊ ಪಿ.ಎಲ್ ಧರ್ಮ ಲೋಕಾರ್ಪಣೆ ಮಾಡಿದರು. ‘ಆರ್ ಫಾರ್ ಸ್ಟಾಟಿಸ್ಟಿಕಲ್ ಕಂಪ್ಯೂಟಿಂಗ್’ ಪುಸ್ತಕವನ್ನು ಮಂಗಳೂರು ವಿವಿ ಕುಲಸಚಿವ ರಾಜು ಮೊಗವೀರ ಬಿಡುಗಡೆಗೊಳಿಸಿದರು. ಪರೀಕ್ಷಾಂಗ ಕುಲಸಚಿವ ಪ್ರೊ. ದೇವೇಂದ್ರಪ್ಪ ಎಚ್. ಮತ್ತು ಹಣಕಾಸು ಅಧಿಕಾರಿ ಪ್ರೊ. ಸಂಗಪ್ಪ ವೈ. ಪುಸ್ತಕ ಬಿಡುಗಡೆಗೆ ಕೈಜೋಡಿಸಿದರು.

ಲೇಖಕಿ ಡಾ ಭಾರತಿ ಪಿಲಾರ್ ಮಾತನಾಡಿ, ನಮ್ಮ ಜ್ಞಾನವನ್ನು ಪುಸ್ತಕಗಳ ಮೂಲಕ ಮಾತ್ರ ಮುಂದಿನ ಪೀಳಿಗೆಗೆ ತಲುಪಿಸಬಹುದು. ವಿದ್ಯಾರ್ಥಿಗಳಿಗೆ ಸುಲಭದಲ್ಲಿ ಅರ್ಥವಾಗುವ ಹಾಗೆ ಇವೆರಡು ಪುಸ್ತಕಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದರು.

ಗಣಕ ವಿಜ್ಞಾನ ವಿಭಾಗ ಪ್ರಾಧ್ಯಾಪಕರಾದ ಪ್ರೊ.ಬಿ.ಎಚ್. ಶೇಖರ್, ಪ್ರೊ.ಎಚ್.ಎಲ್. ಶಶಿರೇಖಾ, ಭೂಗೋಳಶಾಸ್ತ್ರ ಪ್ರಾಧ್ಯಾಪಕ ಡಿ.ಪಿ. ಅಂಗಡಿ, ಎಲೆಕ್ಟ್ರಾನಿಕ್ಸ್ ವಿಭಾಗದ ಪ್ರಾಧ್ಯಾಪಕ ನವೀನ ಕುಮಾರ್, ಜೀವಶಾಸ್ತ್ರ ವಿಭಾಗದ ಪ್ರೊ. ಪ್ರಶಾಂತ್ ನಾಯ್ಕ್, ರಸಾಯನಶಾಸ್ತ್ರ ವಿಭಾಗದ ಭೋಜ ಪೂಜಾರಿ, ವಿಶ್ವವಿದ್ಯಾನಿಲಯ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಡಾ. ರತ್ನಾವತಿ ಟಿ., ಗಣಿತಶಾಸ್ತ್ರ ವಿಭಾಗದ ಸುಬ್ರಹ್ಮಣ್ಯ ಭಟ್ ಮತ್ತು ಗಣಕ ವಿಜ್ಞಾನ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳು ಇದ್ದರು.

ಭಾರತಿ ಪಿಲಾರ್ ಸ್ವಾಗತಿಸಿ, ನಿರೂಪಿಸಿದರು. ಡಾ. ವಿನ್ಸಿ ಅಬ್ರಹಾಂ ವಂದಿಸಿದರು. ಎರಡೂ ಪುಸ್ತಕಗಳು ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್‌ನಲ್ಲಿ ಲಭ್ಯ ಇವೆ.