ಕನ್ನಡಪ್ರಭ ವಾರ್ತೆ ಸಿದ್ದಾಪುರಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಿದರಷ್ಟೇ ಸಾಲದು, ಸಾರ್ವಜನಿಕರಿಗೆ ನಿಷ್ಠೆಯ ಹಾಗೂ ವಿಶ್ವಾಸಾರ್ಹ ಸೇವೆ ನೀಡುವ ಮನಸ್ಥಿತಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಬೆಳೆಸಿಕೊಳ್ಳಬೇಕು ಎಂದು ಮಡಿಕೇರಿ ಶಾಸಕ ಮಂತರ್ ಗೌಡ ಹೇಳಿದರು.ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ಕಚೇರಿಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ಕೆಲಸವನ್ನು ದೇವರ ಕೆಲಸ ಎಂದು ಭಾವಿಸಿ ಗ್ರಾಪಂ ಕಚೇರಿಯನ್ನು ದೇವಾಲಯದಂತೆ ಪವಿತ್ರ ಮನೋಭಾವದಿಂದ ಕಾರ್‍ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದ ಅವರು, ನೆಲ್ಯಹುದಿಕೇರಿ ಭಾಗದ ಸಮಗ್ರ ಅಭಿವೃದ್ಧಿಗೆ ತಾನು ಹೆಚ್ಚಿನ ಅನುದಾನ ಮಂಜೂರು ಮಾಡಿ ಗ್ರಾಮದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಹಾಗೂ ಉತ್ತಮ ಕಟ್ಟಡವಿರುವ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸುವ ಕ್ರಮ ಕೈಗೊಳ್ಳಬೇಕು ಹಾಗೂ ಕಾವೇರಿ ನದಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲುಷಿತ ನೀರು ಸೇರುತ್ತಿರುವುದನ್ನು ತಕ್ಷಣವೇ ನಿಯಂತ್ರಿಸಿ ನದಿಯ ಪಾವಿತ್ರ್ಯತೆ ಉಳಿಸಬೇಕು ಎಂದು ಪಿಡಿಓಗೆ ಸೂಚನೆ ನೀಡಿದರು.

ಪಂಚ ಗ್ಯಾರಂಟಿ ಸಮಿತಿಯ ಕುಶಾಲನಗರ ತಾಲೂಕು ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ಶಾಸಕರು ಜಿಲ್ಲೆಯ ಜನತೆ ಊಹಿಸಲಾರದಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಘಾಟನೆಗೊಂಡ ನೂತನ ಕಟ್ಟಡವು ಕೇವಲ ಕಟ್ಟಡವಾಗದೆ ಜನಸಾಮಾನ್ಯರಿಗೆ ಸೇವೆ ದೊರೆಯುವ ಸವಲತ್ತು ಕೇಂದ್ರವಾಗಿ ರೂಪುಗೊಳ್ಳಲಿ ಹಾಗೂ ಎಲ್ಲರೂ ನಿರೀಕ್ಷಿಸುವ ಕೆಲಸಗಳು ಇಲ್ಲಿ ನಡೆಯಲಿ ಎಂದರು.

ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ಶಾಸಕರು ಎಲ್ಲ ಕ್ಷೇತ್ರಗಳಿಗೂ ಸಮರ್ಪಕ ಅನುದಾನ ನೀಡುವ ಮೂಲಕ ಅಭಿವೃದ್ಧಿ ಕಾರ್‍ಯಗಳಿಗೆ ವೇಗ ನೀಡುತ್ತಿದ್ದಾರೆ. ನೆಲ್ಯಹುದಿಕೇರಿ ಭಾಗದ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ 2 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದ್ದು, ಇತರ ಅಭಿವೃದ್ಧಿ ಕಾರ್‍ಯಗಳಿಗೂ ಹಲವಾರು ಕೋಟಿ ರು. ಮಂಜೂರು ಮಾಡಲಾಗಿದೆ. ಈ ಮೂಲಕ ಹಂತ ಹಂತವಾಗಿ ಈ ಭಾಗದ ಎಲ್ಲ ಕ್ಷೇತ್ರಗಳ ಅಭಿವೃದ್ಧಿ ಕಾರ್‍ಯಗಳು ನಡೆಯಲಿವೆ ಎಂದ ಅವರು, ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಬಡ ಕುಟುಂಬಗಳ ಏಳಿಗೆಗೆ ಸಹಕಾರಿಯಾಗಿದೆ ಎಂದರು.ಗ್ರಾಪಂ ಮಾಜಿ ಅಧ್ಯಕ್ಷೆ ಧನಲಕ್ಷ್ಮಿ, ಮಾಜಿ ಉಪಾಧ್ಯಕ್ಷೆ ಪ್ರಮೀಳ, ಗ್ರಾಪಂ ಮಾಜಿ ಸದಸ್ಯರು, ಪಿಡಿಒ ನಜುಂಡ ಸ್ವಾಮಿ ಉಪಸ್ಥಿತರಿದ್ದರು.