ಬಪ್ಪನಾಡು ದೇವಸ್ಥಾನಕ್ಕೆ ಕ್ರಿಕೆಟರ್‌ ಕೆ.ಎಲ್. ರಾಹುಲ್ ದಂಪತಿ ಭೇಟಿ

| Published : Jul 15 2024, 01:46 AM IST

ಬಪ್ಪನಾಡು ದೇವಸ್ಥಾನಕ್ಕೆ ಕ್ರಿಕೆಟರ್‌ ಕೆ.ಎಲ್. ರಾಹುಲ್ ದಂಪತಿ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಅಭಿಮಾನಿಗಳ ಜೊತೆ ತುಳುವಿನಲ್ಲಿ ಮಾತನಾಡಿ ಮನ ಗೆದ್ದ ಕೆ.ಎಲ್. ರಾಹುಲ್ ಅವರಿಗೆ ಮುಂಬರುವ ಶ್ರೀಲಂಕಾ ಪ್ರವಾಸಕ್ಕೆ ಕ್ರಿಕೆಟ್ ಅಭಿಮಾನಿಗಳು ಈ ಸಂದರ್ಭದಲ್ಲಿ ಶುಭ ಹಾರೈಸಿದರು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಭಾರತೀಯ ಕ್ರಿಕೆಟ್ ತಂಡದ ಆಟಗಾರ ಕೆ.ಎಲ್. ರಾಹುಲ್ ಹಾಗೂ ಪತ್ನಿ ಅತಿಯಾ ಶೆಟ್ಟಿ ದಂಪತಿ ಮೂಲ್ಕಿ ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಅತಿಯಾ ಶೆಟ್ಟಿ ಬಾಲಿವುಡ್‌ ಖ್ಯಾತ ನಟ ಸುನೀಲ್‌ ಶೆಟ್ಟಿ ಅವರ ಪುತ್ರಿ.

ದೇವಸ್ಥಾನದ ಅರ್ಚಕ ಗೋಪಾಲಕೃಷ್ಣ ಉಪಾಧ್ಯಾಯರು ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ದಂಪತಿಗೆ ಪ್ರಸಾದ ನೀಡಿದರು.

ಬಳಿಕ ಕ್ರಿಕೆಟ್ ಆಟಗಾರ ರಾಹುಲ್ ದಂಪತಿ ಮೂಲ್ಕಿ ಸೀಮೆಯ ಶಿಮಂತೂರು ಶ್ರೀ ಆದಿ ಜನಾರ್ಧನ ದೇವಸ್ಥಾನಕ್ಕೆ ಹಾಗೂ ಕಕ್ವಗುತ್ತು ಮೂಲ ನಾಗನ ಕ್ಷೇತ್ರಕ್ಕೆ ಭೇಟಿ ನೀಡಿದರು. ಬಪ್ಪನಾಡು ಕ್ಷೇತ್ರದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ, ನಟ ಅಹನ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಸುನಿಲ್ ಆಳ್ವ,ಅಶ್ವಿನ್ ಆಳ್ವ ಕುಬೆವೂರು ಮತ್ತಿತರರು ಉಪಸ್ಥಿತರಿದ್ದರು.

ಖ್ಯಾತ ಕ್ರಿಕೆಟಿಗ ಕೆ.ಎಲ್. ರಾಹುಲ್ ಪತ್ನಿ ಅತಿಯಾ ಶೆಟ್ಟಿ ಅವರ ತಂದೆ, ಬಾಲಿವುಡ್ ನಟ ಸುನಿಲ್ ಶೆಟ್ಟಿ ಮೂಲತಃ ಮೂಲ್ಕಿಯ ಬಪ್ಪನಾಡಿನವರು. ಸುನಿಲ್ ಶೆಟ್ಟಿ ಅಳಿಯನಾಗಿ ರಾಹುಲ್‌ ಅವರದ್ದು ಮೂಲ್ಕಿಗೆ ಪ್ರಥಮ ಭೇಟಿಯಾಗಿದೆ.

ಕೆ.ಎಲ್. ರಾಹುಲ್ ಆಗಮಿಸುತ್ತಲೇ ಅಭಿಮಾನಿಗಳು ಅವರೊಂದಿಗೆ ಸೆಲ್ಫಿಗಾಗಿ ಮುಗಿಬಿದ್ದರು. ಶಿಮಂತೂರು ಕ್ಷೇತ್ರದಲ್ಲಿ ಸಣ್ಣ ಮಕ್ಕಳು ಬ್ಯಾಟ್‌ ಹಾಗೂ ಪುಸ್ತಕದಲ್ಲಿ ಅವರ ಹಸ್ತಾಕ್ಷರ ಬರೆಸಿಕೊಂಡು ಅವರೊಂದಿಗೆ ಫೋಟೋ ಕ್ಲಿಕ್ಕಿಸಿ ಸಂಭ್ರಮಿಸಿದರು.

ಅಭಿಮಾನಿಗಳ ಜೊತೆ ತುಳುವಿನಲ್ಲಿ ಮಾತನಾಡಿ ಮನ ಗೆದ್ದ ಕೆ.ಎಲ್. ರಾಹುಲ್ ಅವರಿಗೆ ಮುಂಬರುವ ಶ್ರೀಲಂಕಾ ಪ್ರವಾಸಕ್ಕೆ ಕ್ರಿಕೆಟ್ ಅಭಿಮಾನಿಗಳು ಈ ಸಂದರ್ಭದಲ್ಲಿ ಶುಭ ಹಾರೈಸಿದರು.