ವಿಶ್ವ ಮಾದಕ ವಿರೋಧಿ ದಿನ 2026-ಮಾದಕ ಮುಕ್ತ ಭಾರತ ನಿರ್ಮಾಣಕ್ಕೆ ಡಿವೈಎಸ್ಪಿ ಪ್ರಕಾಶ್ ಕರೆ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರಮಾದಕ ವಸ್ತುಗಳ ಸೇವನೆಯು ವ್ಯಕ್ತಿಯ ಆರೋಗ್ಯ, ಶಿಕ್ಷಣ, ಕುಟುಂಬ ಹಾಗೂ ಸಮಾಜದ ಮೇಲೆ ಗಂಭೀರ ದುಷ್ಪರಿಣಾಮಗಳನ್ನು ಉಂಟು ಮಾಡುವುದರ ಜೊತೆಗೆ ಅಪರಾಧ ಚಟುವಟಿಕೆಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ಚಿಕ್ಕಬಳ್ಳಾಪುರ ಉಪ ವಿಭಾಗದ ಪೋಲಿಸ್ ಅಧೀಕ್ಷಕ ಪ್ರಕಾಶ್ ತಿಳಿಸಿದರು.
ತಾಲೂಕಿನ ಪರೇಸಂದ್ರ ಗ್ರಾಮದಲ್ಲಿ ಶಾಂತ ಶಿಕ್ಷಣ ಸಂಸ್ಥೆಗಳು ಮತ್ತು ಪೋಲಿಸ್ ಇಲಾಖೆಯಿಂದ ಮಂಗಳವಾರ ವಿಶ್ವ ಮಾದಕ ವಿರೋಧಿ ದಿನ 2026ರ ಪ್ರಯುಕ್ತ ನಡೆದ ಜಾಥ, ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮಗಳ ಕುರಿತ ಬೀದಿ ನಾಟಕ ಗಳಿಗೆ ಚಾಲನೆ ನೀಡಿ ಮಾತನಾಡಿ, ಸಾರ್ವಜನಿಕರು ವಿಶೇಷವಾಗಿ ಯುವಜನತೆ ಮತ್ತು ವಿದ್ಯಾರ್ಥಿಗಳು ಮಾದಕ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಅರಿವು ಹೊಂದಿ, ಇಂತಹ ದುಷ್ಚಟಗಳಿಂದ ದೂರವಿದ್ದು ಆರೋಗ್ಯಕರ ಹಾಗೂ ಶಿಸ್ತುಬದ್ಧ ಜೀವನವನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದ್ದು ಮಾದಕ ವಸ್ತು ಮುಕ್ತ ಭಾರತ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಯುವಜನತೆ ಮತ್ತು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಮಾದಕ ವಸ್ತುಗಳ ಮಾರಾಟ, ಸಾಗಣೆ ಅಥವಾ ಬಳಕೆಯ ಬಗ್ಗೆ ಯಾವುದೇ ಮಾಹಿತಿ ಕಂಡುಬಂದಲ್ಲಿ ಸಾರ್ವಜನಿಕರು ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ಅಥವಾ ಪೊಲೀಸ್ ಸಹಾಯವಾಣಿ ಸಂಖ್ಯೆ 112ಗೆ ಮಾಹಿತಿ ನೀಡುವ ಮೂಲಕ “ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ” ಮತ್ತು “ಡ್ರಗ್ ಫ್ರೀ ಚಿಕ್ಕಬಳ್ಳಾಪುರ ಅಭಿಯಾನಕ್ಕೆ” ಸಹಕರಿಸುವಂತೆ ಕೋರಿದರು.
ಶಾಂತ ಸಂಸ್ಥೆಗಳ ನಿರ್ದೇಶಕ ಡಾ.ಕೋಡಿರಂಗಪ್ಪ ಮಾತನಾಡಿ, ಇಂದುನಮ್ಮ ದೇಶದ ಭವಿಷ್ಯ ಯುವಕರ ಕೈಯಲ್ಲಿದೆ. ಆದರೆ ಇತ್ತೀಚಿನ ದಿನಗಳಲ್ಲಿ, ವಿಶೇಷವಾಗಿ ಕರ್ನಾಟಕದಂತಹ ರಾಜ್ಯಗಳಲ್ಲಿ ಡ್ರಗ್ಸ್ ಹಾವಳಿ ಹೆಚ್ಚುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಯುವಕರು ತಾತ್ಕಾಲಿಕ ಖುಷಿಗಾಗಿ ಅಥವಾ ಒತ್ತಡಕ್ಕೆ ಮಣಿದು ಈ ಚಟಕ್ಕೆ ಬಲಿಯಾಗುತ್ತಿದ್ದಾರೆ. ಮಾದಕ ವಸ್ತುಗಳ ಸೇವನೆಯು ಕೇವಲ ಒಬ್ಬ ವ್ಯಕ್ತಿಯ ಆರೋಗ್ಯವನ್ನು ಹಾಳು ಮಾಡುವುದಿಲ್ಲ. ಇದು ಅವರ ಮಾನಸಿಕ ಸ್ಥಿತಿಯನ್ನು ಕುಂದಿಸಿ, ಇಡೀ ಕುಟುಂಬವನ್ನು ಬೀದಿಗೆ ತರುತ್ತದೆ ಎಂದರು.
ಇದೇ ವೇಳೆ ಶಾಂತ ಶಿಕ್ಷಣ ಸಂಸ್ಥೆಗಳ ನರ್ಸಿಂಗ್, ಫಾರ್ಮಸಿ, ಪ್ಯಾರಾಮೆಡಿಕಲ್, ಅಲೈಡ್ ಸೈನ್ಸ್, ಫಿಸಿಯೋ ಥೇರಫಿ ವಿದ್ಯಾರ್ಥಿಗಳು ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮಗಳ ಕುರಿತ ಬೀದಿ ನಾಟಕಗಳನ್ನು ಮಾಡಿ ನೆರೆದ ಜನತೆಗೆ ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮಗಳ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಪೆರೇಸಂದ್ರ ಪೋಲಿಸ್ ಠಾಣೆಯ ಪಿಎಸ್ಐ ಗುಣವತಿ, ಎಎಸ್ಐ ಮಂಜುನಾಥ್, ಶಾಂತ ಶಿಕ್ಷಣ ಸಂಸ್ಥೆಗಳ ಡೀನ್ ಹಾಗೂ ಪ್ರಾಂಶುಪಾಲ ಡಾ.ನವೀನ್ ಸೈಮನ್, ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ. ಗೋಪಿನಾಥ್, ಪ್ಯಾರಾ ಮೆಡಿಕಲ್ ಪ್ರಾಂಶುಪಾಲ ನರೇಶ್ ಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕರಾದ ಸಂದೇಶ ಮತ್ತು ರಾಜೇಶ್, ಶಶಿಧರ್, ವಿಜಯ, ಪೋಲಿಸ್ ಸಿಬ್ಬಂಧಿಗಳಾದ ಮಂಜುನಾಥ್, ಶ್ರೀನಿವಾಸ್, ಬಾಬಾಜಾನ್,ಅನುಸೂಯಮ್ಮ ,ಯಾಮಿನಿ, ವಿಶ್ವನಾಥ್, ರವಿ ಇದ್ದರು.ಸಿಕೆಬಿ-3 ತಾಲೂಕಿನ ಪರೇಸಂದ್ರ ಗ್ರಾಮದಲ್ಲಿ ಶಾಂತ ಶಿಕ್ಷಣ ಸಂಸ್ಥೆಗಳು ಮತ್ತು ಪೋಲಿಸ್ ಇಲಾಖೆಯಿಂದ ವಿಶ್ವ ಮಾದಕ ವಿರೋಧಿ ದಿನ 2026ರ ಪ್ರಯುಕ್ತ ನಡೆದ ಜಾಥ, ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮಗಳ ಕುರಿತ ಬೀದಿ ನಾಟಕ