ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿ

| Published : Jul 26 2024, 01:43 AM IST

ಸಾರಾಂಶ

ಸತತವಾಗಿ ಮಹಾರಾಷ್ಟ್ರದಲ್ಲಿ ಬಿಟ್ಟೂ ಬಿಡದೇ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಘಟಪ್ರಭಾ ನದಿಯ ನೀರು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದರಿಂದ ಸುತ್ತಲಿನ ನಂದಗಾಂವ, ಢಳವೇಶ್ವರ, ಮಿರ್ಜಿ ಸೇತುವೆಗಳು ತುಂಬಿ ರಸ್ತೆ ಸಂಚಾರ ಬಂದಾಗಿದೆ. ಅಷ್ಟೇ ಅಲ್ಲದೇ ರಭಸದಿಂದ ಬರುತ್ತಿರುವ ನೀರಿನ ಒತ್ತಡಕ್ಕೆ ನೀರು ನದಿ ತಟದಲ್ಲಿರುವ ರೈತರ ಜಮೀನುಗಳಿಗೆ ನುಗ್ಗಿ ಅಪಾರ ಬೆಳೆ ಹಾನಿಯುಂಟು ಮಾಡಿದೆ.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಸತತವಾಗಿ ಮಹಾರಾಷ್ಟ್ರದಲ್ಲಿ ಬಿಟ್ಟೂ ಬಿಡದೇ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಘಟಪ್ರಭಾ ನದಿಯ ನೀರು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದರಿಂದ ಸುತ್ತಲಿನ ನಂದಗಾಂವ, ಢಳವೇಶ್ವರ, ಮಿರ್ಜಿ ಸೇತುವೆಗಳು ತುಂಬಿ ರಸ್ತೆ ಸಂಚಾರ ಬಂದಾಗಿದೆ. ಅಷ್ಟೇ ಅಲ್ಲದೇ ರಭಸದಿಂದ ಬರುತ್ತಿರುವ ನೀರಿನ ಒತ್ತಡಕ್ಕೆ ನೀರು ನದಿ ತಟದಲ್ಲಿರುವ ರೈತರ ಜಮೀನುಗಳಿಗೆ ನುಗ್ಗಿ ಅಪಾರ ಬೆಳೆ ಹಾನಿಯುಂಟು ಮಾಡಿದೆ.

ಹೆಚ್ಚುತ್ತಿರುವ ಮಳೆಯಿಂದ ರೈತರಲ್ಲಿ ಆತಂಕ ಹೆಚ್ಚಿದೆ. ಎಲ್ಲಿ ಹಿಂದಿನ ತರಹ ಪ್ರವಾಹ ಹೆಚ್ಚಾಗಿ ಬೆಳೆ, ಮನೆ, ದನಕರುಗಳು ನೀರುಪಾಲಾಗುವ ಭಯದಿಂದ ರಾತ್ರಿಯಿಡಿ ನಿದ್ದೆಗೆಡುವ ಪರಿಸ್ಥಿತಿ ಬರುತ್ತದೆಯೋ ಎಂಬ ಆತಂಕ ಜನರನ್ನು ಕಾಡುತ್ತಿದೆ. ರೈತರು ವರ್ಷವಿಡೀ ಮಾಡಿದ ಕೃಷಿ ಕೆಲಸ ಇನ್ನೇನು ಬಾಯಿಗೆ ಬರುವ ಸಂದರ್ಭದಲ್ಲಿ ಇಂಥ ಮಳೆರಾಯನ ಆರ್ಭಟಕ್ಕೆ ಸಿಕ್ಕು ನಲುಗುವಂತಾಗಿದೆ. ನದಿ ನೀರಿನ ಹರಿವು ಗಮನಿಸಿದ ಕೆಲವು ರೈತರು ತಮ್ಮ ದನಕರು, ಮನೆಯಲ್ಲಿರುವ ಸಾಮಾನುಗಳನ್ನು ಬೇರೆ ಕಡೆಗಳಲ್ಲಿ ಸಾಗಿಸುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ಅಲ್ಲದೇ ಇತ್ತ ಬೆಳೆ ನೋಡಬೇಕೋ ಅಥವಾ ದನಕರು, ಮನೆಯ ಜನರು, ಮಕ್ಕಳನ್ನು ಬೇರೆ ಕಡೆಗೆ ಸಾಗಿಸುವತ್ತ ಗಮನಹರಿಸಬೇಕೋ? ಅಲ್ಲದೆ, ದನಕರಗಳನ್ನು ಎಲ್ಲಿಗೆ ಸಾಗಿಸಬೇಕು ಎನ್ನುವ ಚಿಂತೆಯೇ ಹೆಚ್ಚಾಗಿದೆ.

ಸಂಚಾರ ಸ್ಥಗಿತ:

ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಂದಗಾಂವ, ಢವಳೇಶ್ವರ, ಮಿರ್ಜಿ ಗ್ರಾಮಗಳ ಜನರಿಗೆ ಪ್ರತಿಸಲ ಮಳೆಯಾದಾಗಲೂ ಸಂಚಾರ ಮಾತ್ರ ಸ್ಥಗಿತವಾಗಿ ತೊಂದರೆ ಅನುಭವಿಸುವಂತಾಗಿದೆ. ಮಳೆಯಿಂದ ಸಂಚಾರ ಬಂದಾಗಿ ಸಣ್ಣ ಸಣ್ಣ ರೈತರು ದಿನಾಲು ತಾವು ಬೆಳೆದ ತರಕಾರಿಯನ್ನು ಅಲ್ಲೆ ಸಮೀಪವಿರುವ ಗ್ರಾಮಗಳಿಗೆ ಮಾರಾಟ ಮಾಡಿ ಹೊಟ್ಟೆ ತುಂಬಿಕೊಳ್ಳುತ್ತಿದ್ದರು. ಇದೀಗ ಈ ಸೇತುವೆಗಳು ಮುಳುಗಿ ಹೋಗಿದ್ದರಿಂದ ಅಲ್ಲಿಯ ರೈತರು ತರಕಾರಿ ಮಾರಾಟವಾಗದೇ ನಷ್ಟ ಅನುಭವಿಸುವಂತಾಗಿದೆ.

ಬುಧವಾರ ಮುಂಜಾನೆವರೆಗೆ ಘಟಪ್ರಭಾ ನದಿಗೆ ದುಪದಾಳ ಜಲಾಶಯದಿಂದ 15000 ಕ್ಯುಸೆಕ್‌, ಮಾರ್ಕಂಡಯ ಜಲಾಶಯದಿಂದ 4000 ಕ್ಯುಸೆಕ್ ಸೇರಿ ಒಟ್ಟು 21,000ಕ್ಕೂ ಅಧಿಕ ಕ್ಯುಸೆಕ್ ನೀರು ಹರಿದು ಬರುತ್ತಿರುವುದರಿಂದ ನದಿಯ ಅಕ್ಕ ಪಕ್ಕದ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿ ಉಂಟಾಗಿದೆ. ಪಶ್ಚಿಮ ಘಟ್ಟದ ಬೆಳಗಾವಿ ಹಾಗೂ ಮಹಾರಾಷ್ಟ್ರ ಭಾಗದಲ್ಲಿ ಮಳೆ ಮುಂದುವರೆದಿದ್ದು ಇನ್ನು ಹೆಚ್ಚುವ ಆತಂಕಜನರಲ್ಲಿ ಮನೆ ಮಾಡಿದೆ.