ಸಾರಾಂಶ
ವಿಜಯಪುರ: ವಿಜಯಪುರ ಜಿಲ್ಲೆಯಾದ್ಯಂತ ಶನಿವಾರ ರಾತ್ರಿ ಬೀಸಿದ ಭಾರೀ ಬಿರುಗಾಳಿ ಹಾಗೂ ಗುಡುಗು-ಸಿಡಿಲು ಸಹಿತ ಮಳೆಗೆ ಅಪಾರ ಹಾನಿ ಸಂಭವಿಸಿದೆ. ಬಿರುಗಾಳಿಗೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದ್ದು, ಬಾಳೆ, ಲಿಂಬೆ ಹಾಗೂ ದ್ರಾಕ್ಷಿ ಸೇರಿ ಲಕ್ಷಾಂತರ ರೂ. ಮೌಲ್ಯದ ತೋಟಗಾರಿಕಾ ಬೆಳೆಗಳು ಹಾನಿಗೊಳಗಾಗಿವೆ.
ತಾಲೂಕಿನ ಗುಣಕಿ ಗ್ರಾಮದಲ್ಲಿ ಎರಡು ಎತ್ತುಗಳು ಸಿಡಿಲಿಗೆ ಬಲಿಯಾಗಿವೆ. ತಾಲೂಕಿನ ನಾಗಠಾಣದಲ್ಲಿ ಸಿಡಿಲು ಬಡಿದು ಗುಡಿಸಲು ಹಾಗೂ ಜೋಳದ ತೆನೆಗಳನ್ನು ಸಂಗ್ರಹಿಸಿಟ್ಟಿದ್ದ ಬಣವಿ ಸುಟ್ಟು ಭಸ್ಮವಾಗಿದೆ.
ಅದೃಷ್ಟವಶಾತ್ ಮನೆಯವರೆಲ್ಲ ಹೊರಗೆ ಓಡಿ ಬಂದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬಿರುಗಾಳಿಗೆ ತಾಲೂಕಿನ ಬೊಮ್ಮನಳ್ಳಿ ಗ್ರಾಮದಲ್ಲಿ ಸುಮಾರು 1 ಎಕರೆಯಷ್ಟು ಬಾಳೆತೋಟ ಸಂಪೂರ್ಣ ಹಾಳಾಗಿದ್ದು, ₹2 ಲಕ್ಷಕ್ಕೂ ಅಧಿಕ ಮೌಲ್ಯದ ಬೆಳೆ ಹಾಳಾಗಿದೆ. ಇಂಡಿ ತಾಲೂಕಿನ ಹಳಗುಣಕಿ ಗ್ರಾಮದಲ್ಲಿ ದ್ರಾಕ್ಷಿ ಬೆಳೆ, ಹುಣಶ್ಯಾಳ ಗ್ರಾಮದಲ್ಲಿ ಲಿಂಬೆ ಗಿಡಗಳು ಹಾನಿಗೊಳಗಾಗಿದ್ದು, ಲಕ್ಷಾಂತರ ರೂ.ನಷ್ಟವಾಗಿದೆ. ಜಿಲ್ಲೆಯ ಕೆಲವೆಡೆ ಗಾಳಿ ಜೊತೆ ಮಳೆ ಕೂಡ ಸುರಿದಿದ್ದು, ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ.