ಸಿಎಸ್ ಆರ್ ಫಂಡ್ ಬಾಂಬೆ, ಡೆಲ್ಲೀಲಿ ಖರ್ಚು ಮಾಡಂಗಿಲ್ಲ

| Published : Jul 11 2024, 01:32 AM IST

ಸಾರಾಂಶ

csr fund: No spent in Bombaym delhi

-ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಸಂಸದ ಗೋವಿಂದ ಕಾರಜೋಳಸ ಸೂಚನೆ

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ಗಣಿ ಕಂಪನಿಗಳು ಸಿಎಸ್ ಆರ್ (ಸಾಮಾಜಿಕ ಹೊಣೆಗಾರಿಕೆ) ನಿಧಿಯನ್ನು ಬಾಂಬೆ, ಡೆಲ್ಲಿಯಲ್ಲಿ ವಿನಿಯೋಗಿಸುವಂತಿಲ್ಲ. ಬದಲಾಗಿ ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಬಳಕೆ ಮಾಡಬೇಕೆಂದು ಸಂಸದ ಗೋವಿಂದ ಎಂ.ಕಾರಜೋಳ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಡು ಮಾತನಾಡಿದ ಅವರು ಸಿಎಸ್ ಆರ್ ಫಂಡ್ ಸ್ಥಳೀಯ ಜನರು ಹಾಗೂ ಪ್ರದೇಶ ಅಭಿವೃದ್ಧಿ ಬಳಸಬೇಕು. ಕುಡಿವ ನೀರು, ಶಾಲೆ-ಕಾಲೇಜು, ರಸ್ತೆ, ಕೆರೆ ಕಟ್ಟೆಗಳ ನಿರ್ಮಾಣಕ್ಕೆ ಗಣಿ ಕಂಪನಿಗಳು ಕೊಡುಗೆ ನೀಡಬೇಕು. ಜಿಲ್ಲೆಯ ಗಣಿ ಸಂಪತ್ತು ಬಳಸಿ ವ್ಯಾಪಾರ ವಹಿವಾಟು ನಡೆಸುತ್ತಿರುವ ಖಾಸಗಿ ಗಣಿ ಕಂಪನಿಗಳು ಸಾಮಾಜಿಕ ಹೊಣೆಗಾರಿಕೆಯನ್ನು ಪ್ರದರ್ಶಿಸಬೇಕು. ಸ್ಥಳೀಯರಿಗೆ ಉದ್ಯೋಗ ಅವಕಾಶ ನೀಡಬೇಕೆಂದರು.

ಜಿಲ್ಲೆಯಲ್ಲಿ ಪ್ರಮುಖವಾಗಿ 8 ಖಾಸಗಿ ಗಣಿ ಕಂಪನಿಗಳಿಗೆ ಗುತ್ತಿಗೆ ನೀಡಲಾಗಿದೆ. ಇದರಲ್ಲಿ 5 ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಗಣಿ ಮತ್ತು ಅದಿರು ನಿಯಂತ್ರಣ ಅಭಿವೃದ್ಧಿ ನಿಯಮಗಳ ಕಾಯ್ದೆ ಅನುಸಾರ ಗಣಿ ಕಂಪನಿಗಳಿಗೆ ಗುತ್ತಿಗೆ ನೀಡುವ ಸಂದರ್ಭದಲ್ಲಿಯೇ ಸ್ಥಳೀಯ ಪ್ರದೇಶ ಹಾಗೂ ಜನರ ಅಭಿವೃದ್ಧಿ ಕಾರ್ಯನಿರ್ವಹಿಸುವ ನಿಬಂಧನೆ ವಿಧಿಸಲಾಗಿರುತ್ತದೆ. ಸ್ಥಳೀಯ ಭೂಮಿ, ವಿದ್ಯುತ್, ರಸ್ತೆ, ಸಂಪತ್ತು, ಮೂಲಭೂತ ಸೌಕರ್ಯಗಳನ್ನು ಬಳಸಿ ಗಣಿಗಾರಿಕೆ ನಡೆಸುವ ಕಂಪನಿಗಳು ಸ್ಥಳೀಯ ಜನರಿಗೆ ಉದ್ಯೋಗ ನೀಡದೇ ಹೋದರೆ ಹೇಗೆ? ಎಂದು ಪ್ರಶ್ನಿಸಿದರು. ಗಣಿ ಕಂಪನಿಗಳು ಕೇವಲ ರಾಜ್ಯದ ಬೊಕ್ಕಸಕ್ಕೆ ತೆರಿಗೆ ನೀಡಿದರೆ ಸಾಲದು. ಸ್ಥಳೀಯ ಜನರ ಅಭಿವೃದ್ಧಿಗೂ ಕೊಡುಗೆ ನೀಡಬೇಕು ಎಂದರು.

ಜಿಲ್ಲೆಗೆ ಕೆಎಂಇಆರ್‌ಸಿ ಅಡಿ ರು.3792 ಕೋಟಿ ಅನುದಾನ ಲಭ್ಯವಿದ್ದು, ಇದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಜಿಲ್ಲೆಯ ಗಣಿ ಭಾಧಿತ ಪ್ರದೇಶಗಳು ಹಾಗೂ ಇತರೆ ಸ್ಥಳಗಳಲ್ಲಿಯೂ ಅಭಿವೃದ್ಧಿ ಮಾಡಲು ಒತ್ತು ನೀಡಲಾಗುವುದು. ಕೆಎಂಇಆರ್‍ಸಿ ನಲ್ಲಿ ಪರಿಸರ ಪುನರ್ ಸ್ಥಾಪನೆಗೆ 555.64 ಕೋಟಿ ರು., ಕೃಷಿ ಆಧಾರಿತ ಚಟುವಟಿಕೆಗೆ 391.04 ಕೋಟಿ ರು., ಕುಡಿವ ನೀರು, ನೈರ್ಮಲ್ಯ, ಗ್ರಾಮೀಣ ರಸ್ತೆಗೆ - 978.68 ಕೋಟಿ, ಆರೋಗ್ಯ ಕ್ಷೇತ್ರಕ್ಕೆ 255.94 ಕೋಟಿ, ಶಿಕ್ಷಣ- 330.58 ಕೋಟಿ, ವಸತಿ- 106.88 ಕೋಟಿ, ರಸ್ತೆ ಹಾಗೂ ಸಂಪರ್ಕ ವ್ಯವಸ್ಥೆ- 620.2 ಕೋಟಿ, ನೀರಾವರಿ- 154.70 ಕೋಟಿ ರು. ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯ ಚಟುವಟಿಕೆಗಳಿಗಾಗಿ ಒಟ್ಟು 3792. 30 ಕೋಟಿ ರು. ನಿಧಿಯನ್ನು ಹಂಚಿಕೆ ಮಾಡಿ ವಿವಿಧ ಅಭಿವೃದ್ಧಿ ಕಾರ್ಯ ಕೈಗೊಳ್ಳಬಹುದು. ಈ ಕುರಿತು ರೂಪಿಸಲಾಗಿರುವ ಕ್ರಿಯಾ ಯೋಜನೆಯನ್ನು ಮುಂದಿನ ಸಭೆಯಲ್ಲಿ ಮಂಡಿಸಿ, ಅಗತ್ಯವಿದ್ದಲ್ಲಿ, ಕ್ರಿಯಾಯೋಜನೆಯಲ್ಲಿ ಬದಲಾವಣೆಗೆ ಕ್ರಮ ಕೈಗೊಳ್ಳಬೇಕು ಎಂದು ಗಣಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಬಳಿ ಜಿಲ್ಲೆಯ ಕುರಿತು ಚರ್ಚಿಸಿದ್ದೇನೆ. ಅವರ ಸಮ್ಮುಖದಲ್ಲಿಯೇ ಎಲ್ಲಾ ಗಣಿ ಕಂಪನಿಗಳ ಮುಖ್ಯಸ್ಥರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಪರಿಶೀಲನೆ ಸಭೆ ನಡೆಸಲಾಗುವುದು ಎಂದು ಸಂಸದ ಗೋವಿಂದ ಎಂ ಕಾರಜೋಳ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಗಣಿ ಇಲಾಖೆ ಉಪನಿರ್ದೇಶಕ ಡಾ.ಎಂ.ಜೆ.ಮಹೇಶ್, ಹಿರಿಯ ಭೂವಿಜ್ಞಾನಿ ನಾಗೇಂದ್ರಪ್ಪ ಸೇರಿಂದತೆ ಮತ್ತಿರರು ಇದ್ದರು.

----------------

ಪೋಟೋ: ಚಿತ್ರದುರ್ಗ ಡಿಸಿ ಕಚೇರಿಯಲ್ಲಿ ನಡೆದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಸಂಸದ ಗೋವಿಂದ ಕಾರಜೋಳ ಮಾತನಾಡಿದರು.

----ಫೋಟೋ: 10 ಸಿಟಿಡಿ5