ಕನ್ನಡಪ್ರಭ ವಾರ್ತೆ ಬೆಳಗಾವಿ ಸಿಎಸ್ಆರ್ ಅರ್ಥಪೂರ್ಣ ಸಹಭಾಗಿತ್ವಗಳು ಉನ್ನತ ಶಿಕ್ಷಣ ಬಲಪಡಿಸುವುದರ ಜೊತೆಗೆ ಸಾಮಾಜಿಕ ಜವಾಬ್ದಾರಿಯುತ ಅಭಿವೃದ್ಧಿಗೆ ದಾರಿ ಮಾಡಿಕೊಡುತ್ತವೆ ಎಂದು ವಿಟಿಯು ಕುಲಪತಿ ಪ್ರೊ.ವಿದ್ಯಾಶಂಕರ.ಎಸ್ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಸಿಎಸ್ಆರ್ ಅರ್ಥಪೂರ್ಣ ಸಹಭಾಗಿತ್ವಗಳು ಉನ್ನತ ಶಿಕ್ಷಣ ಬಲಪಡಿಸುವುದರ ಜೊತೆಗೆ ಸಾಮಾಜಿಕ ಜವಾಬ್ದಾರಿಯುತ ಅಭಿವೃದ್ಧಿಗೆ ದಾರಿ ಮಾಡಿಕೊಡುತ್ತವೆ ಎಂದು ವಿಟಿಯು ಕುಲಪತಿ ಪ್ರೊ.ವಿದ್ಯಾಶಂಕರ.ಎಸ್ ಹೇಳಿದರು.ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ಗೆ ಎಚ್ಡಿಎಫ್ಸಿ ಬ್ಯಾಂಕ್ ತನ್ನ ಪ್ರಮುಖ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ಯೋಜನೆಯಾದ ಪರಿವರ್ತನ್ (Parivartan) ಅಡಿಯಲ್ಲಿ ಕೊಡುಗೆಯಾಗಿ ನೀಡಲಾದ ಒಂದು ಬಸ್ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಚ್ಡಿಎಫ್ಸಿ ಬ್ಯಾಂಕ್ನಂತೆ ಎಸ್ಬಿಐ ಹಾಗೂ ಕೆನರಾ ಬ್ಯಾಂಕ್ ಕೂಡ ತಮ್ಮ ಸಿಎಸ್ಆರ್ ಯೋಜನೆಗಳಡಿ ವಿಟಿಯುಗೆ ಬಸ್ಗಳನ್ನು ನೀಡುವುದಾಗಿ ತಿಳಿಸಿದರು.ವಿಶ್ವವಿದ್ಯಾಲಯದ ಶೈಕ್ಷಣಿಕ ಮೂಲಸೌಕರ್ಯ ಬಲಪಡಿಸುವುದು ಹಾಗೂ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಸುರಕ್ಷಿತ, ವಿಶ್ವಾಸಾರ್ಹ ಮತ್ತು ಸುಲಭವಾದ ಸಾರಿಗೆ ವ್ಯವಸ್ಥೆ ಒದಗಿಸುವ ಉದ್ದೇಶದಿಂದ ಈ ಬಸ್ನ್ನು ನೀಡಲಾಗಿದೆ. ಈ ಕೊಡುಗೆ ಎಚ್ಡಿಎಫ್ಸಿ ಬ್ಯಾಂಕ್ನ ಸಿಎಸ್ಆರ್ ಪರಿವರ್ತನ್ ಕಾರ್ಯಕ್ರಮದ ಅಡಿಯಲ್ಲಿ ನೀಡಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿ ಕೃತಜ್ಞತೆಗಳನ್ನು ಸಲ್ಲಿಸಿದರು.ಎಚ್ಡಿಎಫ್ಸಿ ಬೆಳಗಾವಿ ಕ್ಲಸ್ಟರ್ ಮುಖ್ಯಸ್ಥ ರವಿಕುಮಾರ್ ಗೋನಾಳ ಮಾತನಾಡಿ, ಎಚ್ಡಿಎಫ್ಸಿ ಬ್ಯಾಂಕ್ನ ಪರಿವರ್ತನ್ ಸಿಎಸ್ಆರ್ ಯೋಜನೆಯ ಮೂಲಕ ನಾವು ಶಿಕ್ಷಣ, ಗ್ರಾಮೀಣ ಅಭಿವೃದ್ಧಿ ಮತ್ತು ಶಾಲಾ ಅಭಿವೃದ್ಧಿ ಕಾರ್ಯಕ್ರಮಗಳಿಗೆ ವಿಶೇಷ ಒತ್ತು ನೀಡುತ್ತಾ ಸಮಗ್ರ ಅಭಿವೃದ್ಧಿಗೆ ಬದ್ಧರಾಗಿದ್ದೇವೆ. ವಿಟಿಯುಗೆ ಈ ಬಸ್ನ್ನು ನೀಡುವುದರಿಂದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಅನುಕೂಲವಾಗಲಿದೆ ಎಂಬ ವಿಶ್ವಾಸವಿದೆ. ನಮ್ಮ ಸಿಎಸ್ಆರ್ ಚಟುವಟಿಕೆಗಳು ಗ್ರಾಮೀಣ ಸಮುದಾಯಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ದೀರ್ಘಕಾಲೀನ ಸಕಾರಾತ್ಮಕ ಪರಿಣಾಮವನ್ನುಂಟು ಮಾಡುವ ಗುರಿ ಹೊಂದಿದ್ದು, ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ವಿಟಿಯು ಜೊತೆ ನಮ್ಮ ಸಹಕಾರ ಮುಂದುವರೆಯಲಿದೆ ಎಂದು ಭರವಸೆ ನೀಡಿದರು.ಕೋಟ್....
ಪರಿವರ್ತನ್ ಸಿಎಸ್ಆರ್ ಯೋಜನೆಯಡಿ ವಿಟಿಯುಗೆ ಬೆಂಬಲ ನೀಡಿದ ಎಚ್ಡಿಎಫ್ಸಿ ಬ್ಯಾಂಕ್ಗೆ ನಾವು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇವೆ. ಈ ಬಸ್ನಿಂದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಸಂಚಾರ ಸುಗಮವಾಗುವುದರೊಂದಿಗೆ ಶೈಕ್ಷಣಿಕ ಹಾಗೂ ಸಮಾಜಮುಖಿ ಚಟುವಟಿಕೆಗಳಿಗೆ ಮಹತ್ತರ ನೆರವು ದೊರೆಯಲಿದೆ. ವಿದ್ಯಾರ್ಥಿ ಕೇಂದ್ರಿತ ಚಟುವಟಿಕೆಗಳಿಗೆ ಮಹತ್ತರ ಬೆಂಬಲ ದೊರೆಯುವುದರ ಜೊತೆಗೆ ಸಮಾಜದ ಹಿತಕ್ಕಾಗಿ ಶೈಕ್ಷಣಿಕ ಸಂಸ್ಥೆಗಳು ಮತ್ತು ಕೈಗಾರಿಕೆಗಳ ನಡುವಿನ ಸಹಕಾರ ಇನ್ನಷ್ಟು ಬಲಗೊಳ್ಳಲಿದೆ.-ಪ್ರೊ.ವಿದ್ಯಾಶಂಕರ.ಎಸ್, ವಿಟಿಯು ಕುಲಪತಿ.