ಆಡಳಿತಾರೂಢ ಸರ್ಕಾರಗಳು ಹೊಸ ತಾಲೂಕಿನ ಸಮಸ್ಯೆಗಳಿಗೆ ಸ್ಪಂದಿಸದೆ ಮಲತಾಯಿ ಧೋರಣೆ ಅನುಸರಿಸುತ್ತಿವೆ. ಕಾರಣ ಪಕ್ಷಾತೀತ, ಜಾತ್ಯಾತೀತವಾಗಿ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಶೀಘ್ರದಲ್ಲಿ ರಚಿಸಲಾಗುವುದು ಎಂದು ಹಿರಿಯ ವಕೀಲ ದಾನಪ್ಪಗೌಡ ಚನಗೊಂಡ ಹೇಳಿದರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ನೂತನ ತಾಲೂಕಾಗಿ ದಶಕ ಕಳೆದರೂ ಹಲವು ಇಲಾಖೆಗಳಿಗೆ ಸ್ವಂತ ಕಟ್ಟಡವಿಲ್ಲ. ಮೂಲ ಸೌಕರ್ಯಗಳ ಕೊರತೆ ಸಾಕಷ್ಟಿದೆ. ಹಲವು ಗ್ರಾಮಗಳ ಜನರು ಇಂದಿಗೂ ಸರ್ಕಾರದ ಕೆಲ ಕೆಲಸಗಳಿಗಾಗಿ ಮೂಲ ತಾಲೂಕಿಗೆ ಅಲೆದಾಡುತ್ತಿದ್ದಾರೆ. ಆಡಳಿತಾರೂಢ ಸರ್ಕಾರಗಳು ಹೊಸ ತಾಲೂಕಿನ ಸಮಸ್ಯೆಗಳಿಗೆ ಸ್ಪಂದಿಸದೆ ಮಲತಾಯಿ ಧೋರಣೆ ಅನುಸರಿಸುತ್ತಿವೆ. ಕಾರಣ ಪಕ್ಷಾತೀತ, ಜಾತ್ಯಾತೀತವಾಗಿ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಶೀಘ್ರದಲ್ಲಿ ರಚಿಸಲಾಗುವುದು ಎಂದು ಹಿರಿಯ ವಕೀಲ ದಾನಪ್ಪಗೌಡ ಚನಗೊಂಡ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ವಕೀಲರ ನೇತೃತ್ವದಲ್ಲಿ ಗುರುವಾರ ನಡೆದ ತಾಲೂಕು ಕಾನಿಪ ಪದಾಧಿಕಾರಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪಟ್ಟಣದಲ್ಲಿ ಉನ್ನತ ಮಟ್ಟದ ಶಿಕ್ಷಣ ಸಂಸ್ಥೆ, ಮೂಲಸೌಕರ್ಯದ‌ ಕೊರತೆಯಿದೆ. ಜನಸಂಖ್ಯೆಯೂ ಹೆಚ್ಚಿದೆ ತಾಲೂಕು ಕೇಂದ್ರಕ್ಕೆ ಬೇಕಾದ ಎಲ್ಲ ಕಚೇರಿಗಳು ಇನ್ನು ಆಗಿಲ್ಲ. ರಾಜಕೀಯ ನಾಯಕರನ್ನು ಒಳಗೊಂಡ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ರಚನೆ ಮಾಡಲಾಗುವುದು. ಈ ಕುರಿತು ತಾಲೂಕಿನ ಎಲ್ಲಾ ಸಂಘಟನೆಗಳು, ಪತ್ರಕರ್ತರು, ಜಾತ್ಯಾತೀತವಾಗಿ ಹಾಗೂ ಪಕ್ಷಾತೀತವಾಗಿ ಸ್ವಾರ್ಥ ರಹಿತ ಹೋರಾಟಕ್ಕೆ ಸ್ಪಂದಿಸುವ ನೂತನ ಸಮಿತಿಗೆ ಶೀಘ್ರದಲ್ಲಿ ಪೂರ್ವಭಾವಿ ಸಭೆ ಕರೆಯಲಾಗುವುದು ಎಂದರು.

ನಮ್ಮೆಲ್ಲರ ಹೋರಾಟಕ್ಕೆ ತಾಲೂಕಿನ ಪತ್ರಕರ್ತರು ಸ್ಪಂದಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಶಿಷ್ಟ ಸ್ಥಾನ ಹೊಂದಿದ ಪತ್ರಿಕಾರಂಗವು ಸಮಾಜದಲ್ಲಿ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಲು ನೂತನ ತಾಲೂಕು ಅಭಿವೃದ್ಧಿ ಹೊಂದಲು ತಮ್ಮೆಲ್ಲರ ಸಹಾಯ, ಸಹಕಾರ ಹಾಗೂ ಮಾರ್ಗದರ್ಶನ ಅತಿ ಮುಖ್ಯವಾಗಿದೆ ಎಂದು ಹೇಳಿದರು. ಕಾನಿಪ ನೂತನ ಪದಾಧಿಕಾರಿಗಳಿಗೆ ಹಿರಿಯ ವಕೀಲರು ಅಭಿನಂದಿಸಿ, ಸನ್ಮಾನಿಸಿದರು. ವಕೀಲರಾದ ಎಸ್.ಬಿ.ಪಾಟೀಲ ನಿರೂಪಿಸಿ, ಬಸವರಾಜ ಮಲ್ಲಾರಿ, ಎಸ್.ಕೆ. ಸಜ್ಜನ, ಮಲ್ಲು ಪಡಗಾನೂರ, ಕಾಶಿನಾಥ ಚವ್ಹಾಣ, ರವಿ ನಾಯಕ ಸೇರಿ ಇತರರಿದ್ದರು.