ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಚುನಾವಣೆ ಪೂರ್ವದಲ್ಲಿ ಕೊಟ್ಟಂತಹ ಐದು ಗ್ಯಾರಂಟಿಗಳು ಪ್ರಸ್ತುತದಲ್ಲಿ ಪಂಚರ್ ಆಗಿವೆ ಎಂದು ಎಂಎಲ್ಸಿ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.ಹಾಸನಾಂಬೆ ದರ್ಶನಕ್ಕಾಗಿ ಸಿ.ಟಿ. ರವಿ ಅವರು ಶುಕ್ರವಾರ ಬಂದಾಗ ಮಧ್ಯಾಹ್ನ ೨ ಗಂಟೆ ಆಗಿದ್ದರಿಂದ ನೈವೇದ್ಯಕ್ಕಾಗಿ ಒಂದು ಗಂಟೆಗಳ ಕಾಲ ಬಾಗಿಲು ಮುಚ್ಚಲಾಗಿತ್ತು. ದೇವಾಲಯದಲ್ಲಿ ಕಾದು ನಂತರ ಹಾಸನಾಂಬೆ ದೇವಿ ದರ್ಶನ ಪಡೆದರು. ನಂತರ ಮಾಧ್ಯಮದೊಂದಿಗೆ ಮಾತನಾಡಿ, ಮೂರು ಕ್ಷೇತ್ರಗಳ ಉಪ ಚುನಾವಣೆ ವಿಚಾರವಾಗಿ ಮಾತನಾಡುತ್ತಾ, ಜನಾಭಿಪ್ರಾಯ ಸಾರ್ವತ್ರಿಕವಾಗಿ ಈ ಕಾಂಗ್ರೆಸ್ ಸರ್ಕಾರದ ಪರ ಇರುವುದಿಲ್ಲ. ಪಂಚ ಗ್ಯಾರಂಟಿಗಳು ಪಂಚರ್ ಆಗಿ ಚುನಾವಣೆ ಪೂರ್ವದಲ್ಲಿ ಕೊಟ್ಟ ಪಂಚ ಗ್ಯಾರಂಟಿಗಳು ಜನರಿಗೆ ತಲುಪುತ್ತಿಲ್ಲ. ನಿರುದ್ಯೋಗಿ ಯುವಕರಿಗೆ ಮೂರು ಸಾವಿರ ಕೊಡುತ್ತೇವೆ ಎಂದು ಹೇಳಿ ಇವತ್ತಿನವರೆಗೂ ಮೂರು ಸಾವಿರ ಬರಲಿಲ್ಲ, ಮೂರು ನಾಮ ಹಾಕಿದ್ದಾರೆ. ಪ್ರತಿ ಬಿಪಿಎಲ್ ಕುಟುಂಬದ ಯಜಮಾನಿಗೆ 2 ಸಾವಿರ ಹಣ ಕೊಡುತ್ತೇವೆ ಎಂದು ಹೇಳಿದರು. ಆದರೆ ಈಗ್ಗೆ 3 ತಿಂಗಳಿನಿಂದ ಈ ಹಣವೂ ಬರುತ್ತಿಲ್ಲ. ಆ ನೆಪದಲ್ಲಿ ಬಿಪಿಎಲ್ ಕಾರ್ಡ್ ರದ್ದು ಪಡಿಸುವ ಕೆಲಸ ವ್ಯವಸ್ಥಿತ ರೂಪದಲ್ಲಿ ನಡೆದಿದ್ದು, ನನಗೆ ಇರುವ ಮಾಹಿತಿ ಪ್ರಕಾರ ೨೦ರಿಂದ ೨೫ ಲಕ್ಷ ಬಿಪಿಎಲ್ ಕಾರ್ಡ್ ರದ್ದುಪಡಿಸುವ ಯೋಜನೆ ಮಾಡಿದ್ದಾರೆ ಎಂದು ದೂರಿದರು.
ನಿದರ್ಶನ:೨೦೦ ಯೂನಿಟ್ವರೆಗೂ ವಿದ್ಯುತ್ ಫ್ರೀ ಎಂದು ಹೇಳಿ ಈಗ ೧೨ ಯೂನಿಟ್ ಬಳಕೆ ಮಾಡುತ್ತಿದ್ದವನು ೨೦ ಯೂನಿಟ್ ಬಳಕೆ ಮಾಡಿದ್ರೆ ಡಬಲ್ ಬಿಲ್ ಬರುತ್ತಿದೆ. ಫ್ರೀ ಎಲ್ಲಿ, ಎಲ್ಲಿ ಫ್ರೀ ಇದೆ. ಶಕ್ತಿ ಯೋಜನೆ ಬಗ್ಗೆ ಉಪಮುಖ್ಯಮಂತ್ರಿಗಳೇ ನಿಶ್ಯಕ್ತವಾಗಿದೆ ಅಂತ ವಾದವನ್ನು ಮುಂದಿಟ್ಟಿದ್ದಾರೆ. ಶಕ್ತಿ ಯೋಜನೆ ನೆಪದಲ್ಲಿ ಇದ್ದ ರೂಟ್ಗಳನ್ನು ಕಡಿತಗೊಳಿಸಿದ್ದಾರೆ. ೧೦ ಕೆ.ಜಿ ಅಕ್ಕಿ ಎಂದರು, ಎಲ್ಲೂ ಹತ್ತು ಕೆಜಿ ಅಕ್ಕಿ ಕೊಡಲಿಲ್ಲ. ಅಕ್ಕಿ ಬದಲಿಗೆ ಹಣ ಕೊಡ್ತೀವಿ ಅಂದ್ರು ಆ ಹಣವೂ ತಲುಪುತ್ತಿಲ್ಲ. ಇದು ಪಂಚ ಗ್ಯಾರಂಟಿಗಳು ಪಂಚರ್ ಆಗಿರುವುದಕ್ಕೆ ನಿದರ್ಶನ ಎಂದು ವ್ಯಂಗ್ಯವಾಡಿದರು. ಈ ಬಗ್ಗೆ ಅವರದ್ದೇ ಪಕ್ಷದ ಶಾಸಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಮಂತ್ರಿಗಳು ಅಸಹನೆಯನ್ನು ತೋಡಿಕೊಂಡಿದ್ದಾರೆ. ಜನಾಭಿಪ್ರಾಯ ವಿರುದ್ಧವಾಗಿದೆ. ವಿರುದ್ಧವಾಗಿರುವ ಜನಾಭಿಪ್ರಾಯ ಮತಗಳಾಗಿ ಪರಿವರ್ತನೆಗೊಂಡರೆ ಮೂರು ಕ್ಷೇತ್ರಗಳಲ್ಲಿ ಆಡಳಿತ ಪಕ್ಷ ಸೋಲಬೇಕು, ನೋಡೋಣ! ಹಣ ಬಲ, ಅಧಿಕಾರ ಬಲ, ಕಾಂಗ್ರೆಸ್ ಪಾರ್ಟಿ ಜೊತೆಗೆ ಇದೆ. ಎನ್ಡಿಎ ಜೊತೆ ಇರೋದು ಜನಬಲ ಮಾತ್ರ ಎಂದರು. ನನಗೆ ವಿಶ್ವಾಸವಿದೆ ಎಷ್ಟೋ ಸರಿ ಉಪಚುನಾವಣೆ ನಡೆದಾಗ ಹಣ, ಅಧಿಕಾರ ಬಲ ಸೋತಿದೆ. ಇಲ್ಲೂ ಅಧಿಕಾರ, ಹಣದ ಬಲ ಸೋಲಬೇಕು ಆಗೇ ಸೋಲುತ್ತೆ ಎನ್ನುವ ವಿಶ್ವಾಸವಿದೆ ನೋಡೋಣ ಎಂದು ವಿಶ್ವಾಸ ವ್ಯಕ್ತಪಡಿಸಿದರು. ವಕ್ಫ್ ವಿವಾದ ಕುರಿತಾಗಿ ಮಾತನಾಡುತ್ತಾ, ಬಿಜೆಪಿಯವರು ಉಪಚುನಾವಣೆಗಾಗಿ ವಿವಾದ ಮಾಡ್ತಿದ್ದಾರೆ ಅಂತ ಮುಖ್ಯಮಂತ್ರಿಗಳು ಈಗ ಹೇಳುತ್ತಿದ್ದಾರೆ. ಆದರೆ ಅವರ ಸಂಪುಟದ ಸಚಿವರು ಹೇಳಿಕೆ ಕೊಟ್ಟಿದ್ದಾರೆ. ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅವರ ಸೂಚನೆ ಮೇರೆಗೆ ಯಾವುದು ನೋಟಿಫಿಕೇಷನ್ ಆಗಿದೆ ಅವೆಲ್ಲವನ್ನೂ ಖಾತೆ ಮಾಡಿಸಲು ಮುಖ್ಯಮಂತ್ರಿಗಳೇ ಸೂಚನೆ ಕೊಟ್ಟಿದ್ದಾರೆ. ಎಲ್ಲಾ ಜಿಲ್ಲೆಗಳಲ್ಲಿ ಅಧಿಕೃತ ಸಭೆ ಮಾಡಿದ್ದಾರೆ. ಈ ಸರ್ಕಾರದ ಸಚಿವರಾದ ಜಮೀರ್ ಅಹಮದ್ ಅವರ ಬೆನ್ನೆಲುಬಾಗಿ ನಿಂತಿರುವುದು ಮುಖ್ಯಮಂತ್ರಿಗಳು. ಎಲ್ಲರಿಗೂ ಮುಖ್ಯಮಂತ್ರಿ ಆಗಿರಬೇಕು, ಕೆಲವರಿಗೆ ಮಾತ್ರ ಮುಖ್ಯಮಂತ್ರಿ ಆಗಬಾರದು.ಭೀತಿಯಲ್ಲಿದ್ದಾರೆ: ೧೯೧೩ರಲ್ಲಿ ವಕ್ಫ್ ಕಾಯ್ದೆ ತಂದರು. ೧೯೫೫ರಲ್ಲಿ ನೆಹರು ಅವರು ಓಲೈಕೆ ರಾಜಕಾರಣ ಮುಂದುವರಿದ ಭಾಗವಾಗಿ ಸ್ವಾತಂತ್ರ್ಯ ನಂತರ ಭಾರತದಲ್ಲಿ ಅವಕಾಶ ಮಾಡಿಕೊಟ್ಟರು. ಅದು ಕಾಂಗ್ರೆಸ್ ಮಾಡಿದ ಪ್ರಮಾದ. ೧೯೯೫ ರಲ್ಲಿ ಸಂವಿಧಾನಕ್ಕೆ ವಿರುದ್ಧವಾದ ಅವಕಾಶವನ್ನು ಕಾಂಗ್ರೆಸ್ ಸರ್ಕಾರ ಕೊಟ್ಟಿದೆ. ೨೦೧೩ರಲ್ಲಿ ಮನಮೋಹನ್ ಸಿಂಗ್ ಸರ್ಕಾರ ಮತ್ತೆ ಇನ್ನಷ್ಟು ಬಲ ತುಂಬುವ ಕೆಲಸ ಮಾಡಿದೆ. ಮತಗಳು ಸಿಗುತ್ತವೆ ಎಂದು ಮತಾಂಧತೆಯನ್ನು ಪ್ರೋತ್ಸಾಹಿಸುವ ಕೆಲಸವನ್ನು ಮಾಡಿದರು. ಅದರ ಪರಿಣಾಮ ದಲಿತರ ಮನೆಗೂ ಸಂಚಕಾರ ಬಂದಿದೆ. ಇನ್ನು ರೈತರು ಜಮೀನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ತಿದ್ದುಪಡಿ ಆಗಬೇಕು: ೧೩ ಶತಮಾನದ ವಿರಕ್ತ ಮಠವೂ ವಕ್ಫ್ ಆಸ್ತಿ ಎಂದು ಘೋಷಣೆ ಮಾಡಿದ್ದಾರೆ. ಕಲ್ಬುರ್ಗಿ ಅಳಂದದಲ್ಲಿ ಬೀರಲಿಂಗೇಶ್ವರ ದೇವಾಲಯವೂ ವಕ್ಫ್ ಆಸ್ತಿ ಆಗಿದೆ. ಯಾದಗಿರಿ ಹಿಂದೂ ಸ್ಮಶಾನವೂ ವಕ್ಫ್ ಆಸ್ತಿ ಆಗಿದೆ. ಈ ಎಲ್ಲಾ ವಿವಾದಕ್ಕೆ ಕಾರಣ ಆಗಿರುವುದು ಕಾಂಗ್ರೆಸ್ನ ಮತಾಂಧತೆಯನ್ನು ಪ್ರೋತ್ಸಾಹಿಸಿ ಮತ ಪಡೆಯುವಂತಹ ನೀತಿಯೇ ಕಾರಣ. ಹಾಗಾಗಿ ಇಡೀ ವಕ್ಫ್ ಕಾಯ್ದೆ ಸಮಗ್ರ ರೀತಿಯಲ್ಲಿ ತಿದ್ದುಪಡಿ ಆಗಬೇಕು ಎಂದರು.ಇದು ಅನ್ಯಾಯದ ಕಾನೂನು, ಇದು ಬದಲಾಗಬೇಕು. ಬದಲಾವಣೆ ಆಗುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ. ಜಮೀರ್ ಅಹಮದ್ ಅವರು ಕೋಮುಗಲಭೆ ಹುಟ್ಟುಹಾಕಲು ಕಾರಣರಾಗುತ್ತಿದ್ದಾರೆ. ಜಮೀರ್ ಅಹಮದ್ ಅಧಿಕಾರಿಗಳಿಗೆ ಧಮ್ಕಿ ಹಾಕುತ್ತಿದ್ದಾರೆ. ಇಡೀ ರಾಜ್ಯದಲ್ಲಿ ಒಂದು ಗೊಂದಲ ನಿರ್ಮಾಣವಾಗಿದೆ. ಹಾಗಾಗಿ ಜಮೀರ್ ಅಹಮದ್ ಅವರನ್ನು ಸಂಪುಟದಿಂದ ಕೈಬಿಡಬೇಕು. ಮುಖ್ಯಮಂತ್ರಿಗಳೇ ನೀವು ವಕೀಲರಿದ್ದೀರಿ ನೀವೇ ಹೇಳಿ, ಸಂವಿಧಾನಕ್ಕೆ ಮೀರಿದ ಕಾಯ್ದೆ ಇರುವುದನ್ನು ನೀವು ಸಮರ್ಥನೆ ಮಾಡ್ತೀರಾ.. ನಿಮಗೆ ಷರಿಯಾ ಮುಖ್ಯ ಆಗುತ್ತೋ, ಸಂವಿಧಾನ ಮುಖ್ಯ ಆಗುತ್ತೋ..ಷರಿಯಾ ಮುಖ್ಯ ಅಲ್ಲಾ, ಸಂವಿಧಾನವೇ ಮುಖ್ಯ ಎನ್ನುವುದಾದರೆ ಸಂವಿಧಾನದ ವಿರುದ್ಧ ನಿಮ್ಮ ಬದ್ದತೆ ಪ್ರಕಟಿಸಿ ಎಂದು ಆಗ್ರಹಿಸುತ್ತೇನೆ ಎಂದು ಹೇಳಿದರು. , ಇದೇ ವೇಳೆ ಶಾಸಕರಾದ ಹುಲ್ಲಳ್ಳಿ ಸುರೇಶ್, ಸಿಮೆಂಟ್ ಮಂಜು, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಇತರರು ಉಪಸ್ಥಿತರಿದ್ದರು.