ಸಾರಾಂಶ
ಸಾರ್ವಜನಿಕ ಗ್ರಂಥಾಲಯ ಇಲಾಖೆ, ಜಿಲ್ಲಾ ಹಾಗೂ ನಗರ ಕೇಂದ್ರ ಗ್ರಂಥಾಲಯ ಮಂಗಳೂರು ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ 2025ರ ಪ್ರಯುಕ್ತ ‘ಜ್ಞಾನ ಸಂಗಮ’ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಮಂಗಳೂರು
ಇಂದಿನ ಕಾಲಘಟ್ಟದ ಯುವ ಜನತೆ ಮೊಬೈಲ್, ಸಾಮಾಜಿಕ ಜಾಲತಾಣದತ್ತ ಅತಿಯಾದ ಒಲವು ತೋರಿಸುತ್ತಿದ್ದು, ಗ್ರಂಥಗಳನ್ನು ಓದುವ ಹವ್ಯಾಸದಿಂದ ಹೊರಗುಳಿಯುತ್ತಿದ್ದಾರೆ. ಯುವ ಜನರು ಮೊಬೈಲ್ ಬಳಕೆ ಕಡಿಮೆಗೊಳಿಸಿ ದಿನದ 2-3 ಗಂಟೆ ಗ್ರಂಥಾಲಯದಲ್ಲಿ ಪುಸ್ತಕ ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ಬೆಂಗಳೂರು ಸಾರ್ವಜನಿಕ ಗ್ರಂಥಾಲಯ ಇಲಾಖೆ ಆಯುಕ್ತ ಚಾಮರಾಜೇಂದ್ರ ಎಚ್. ಹೇಳಿದ್ದಾರೆ.ನಗರದ ಜಿಲ್ಲಾ ಪಂಚಾಯ್ತಿ ನೇತ್ರಾವತಿ ಸಭಾಂಗಣದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ, ಜಿಲ್ಲಾ ಹಾಗೂ ನಗರ ಕೇಂದ್ರ ಗ್ರಂಥಾಲಯ ಮಂಗಳೂರು ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ 2025ರ ಪ್ರಯುಕ್ತ ‘ಜ್ಞಾನ ಸಂಗಮ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಂಥಗಳನ್ನು ಓದಿ ವಿಭಿನ್ನ ವಿಷಯಗಳ ಬಗ್ಗೆ ಜ್ಞಾನ ಹೆಚ್ಚಿಸಿಕೊಳ್ಳಬೇಕು. ಜ್ಞಾನ ಮಾರ್ಗದಿಂದ ಮಾತ್ರ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು. ಗ್ರಂಥಗಳು ನಮ್ಮ ವ್ಯಕ್ತಿತ್ವ ರೂಪಿಸಲು ಸಹಕಾರಿಯಾಗುತ್ತದೆ ಎಂದರು.ಉಪನ್ಯಾಸ ನೀಡಿದ ಬಾರ್ಕೂರು ದಾಮೋದರ ಶರ್ಮ, ಗ್ರಂಥಗಳು ಯುವ ಜನತೆಯನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಣಿಗೊಳಿಸುವ ಸಾಧನವಾಗಿವೆ. ವಿದ್ಯಾರ್ಥಿಗಳು ಪಾಠ ಪುಸ್ತಕಗಳ ಜತೆಗೆ, ಸಾಧಕರ ಬದುಕಿನ ಕಥೆಗಳನ್ನು ಸಾರುವ, ಉತ್ತಮ ಸಂದೇಶಗಳನ್ನು ನೀಡುವ ಪುಸ್ತಕಗಳನ್ನು ಓದಿಕೊಂಡು, ಯೋಗ್ಯ ಯೋಚನೆಯೊಂದಿಗೆ ಬದುಕಿನಲ್ಲಿ ಹೆಜ್ಜೆಗಳನ್ನಿಡಬೇಕು ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಜಯಲಕ್ಷ್ಮಿ, ರಥಬೀದಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಜಯಕರ ಭಂಡಾರಿ, ನಗರ ಕೇಂದ್ರ ಗ್ರಂಥಾಲಯ ಉಪನಿರ್ದೇಶಕಿ ಗಾಯತ್ರಿ, ಉಡುಪಿ ಜಿಲ್ಲಾ ಕೇಂದ್ರದ ಗ್ರಂಥಾಲಯಾಧಿಕಾರಿ ಮಮತಾ ಮತ್ತಿತರರು ಇದ್ದರು.ಈ ಸಂದರ್ಭ ಸಿಬ್ಬಂದಿ ಸೇವಾ ಪುರಸ್ಕಾರ ಹಾಗೂ ಉತ್ತಮ ಓದುಗ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗ್ರಂಥಪಾಲಕಿ ಪ್ರಣಿತ ನಿರೂಪಿಸಿದರು. ಪಾರ್ವತಿ .ಎಂ ವಂದಿಸಿದರು.
;Resize=(128,128))
;Resize=(128,128))
;Resize=(128,128))