ಧಾರವಾಡ:

ವಿದ್ಯಾಭ್ಯಾಸವನ್ನು ತಪಸ್ಸು ಎಂದು ಭಾವಿಸಿ, ವಿದ್ಯಾರ್ಥಿಗಳು ಶ್ರಮಿಸಬೇಕು. ಓದಿನ ಜತೆಗೆ ನಿತ್ಯ ದೇವರ ಧ್ಯಾನದ ಮೂಲಕ ಮನಸ್ಸನ್ನು ಏಕಾಗ್ರಗೊಳಿಸಿದರೆ ಯಶಸ್ಸು ಖಚಿತ ಎಂದು ಐಎಫ್‌ಎಸ್‌ ಅಧಿಕಾರಿ ಡಾ. ಗಿರಧರ ಕಿನ್ನಾಳ ಹೇಳಿದರು.

ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಪ್ರತಿಭಾ ಪ್ರತಿಷ್ಠಾನ ಆಯೋಜಿಸಿದ್ದ ವಿದ್ಯಾರ್ಥಿ ವೇತನ ವಿತರಣೆಯಲ್ಲಿ ಮಾತನಾಡಿದ ಅವರು, ಉತ್ತಮ ಕಲಿಕೆ, ಉತ್ತಮ ಉದ್ಯೋಗ ಪಡೆದು ಸಮಾಜದ ಋಣ ತೀರಿಸುವ ಮನೋಭಾವನ್ನು ಈಗಿನ ಪೀಳಿಗೆ ಬೆಳೆಸಿಕೊಳ್ಳಬೇಕು ಎಂದರು.

ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಗುರುರಾಜ್ ಜಮಖಂಡಿ ಮಾತನಾಡಿ, ವಿದ್ಯಾರ್ಥಿ ವೇತನ ಪಡೆಯುವುದರಲ್ಲೇ ತಮ್ಮ ಜವಾಬ್ದಾರಿ ಮುಗಿಯುವುದಿಲ್ಲ. ಮುಂದಿನ ದಿನಗಳಲ್ಲಿ ತಾವು ದುಡಿಯುವ ಸಂದರ್ಭದಲ್ಲಿ ಸಮಾಜಕ್ಕೆ ತಮ್ಮ ಋಣ ತೀರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ನಿರಂತರವಾಗಿ ತಮ್ಮ ವಿದ್ಯಾಭ್ಯಾಸದ ಕಡೆಗೆ ಗಮನಹರಿಸಿ ಉತ್ತಮ ಸಾಧನೆ ಮಾಡಬೇಕು ಎಂದು ಹೇಳಿದರು.

ಕ್ರೀಡಾ ವೈದ್ಯ ಡಾ. ಕಿರಣ್ ಕುಲಕರ್ಣಿ ಮಾತನಾಡಿ, ನಮ್ಮ ದೇಹವೇ ಒಂದು ದೇವಾಲಯ. ವಿದ್ಯಾಭ್ಯಾಸದ ಜತೆಗೆ ದೇಹವನ್ನು ಸದೃಢವಾಗಿಟ್ಟುಕೊಳ್ಳುವುದು ಅಗತ್ಯ. ವಿದ್ಯಾರ್ಥಿಗಳು ಸಾಧ್ಯವಾದಷ್ಟು ಫಾಸ್ಟ್‌ಫುಡ್‌ ತ್ಯಜಿಸಿ, ಪ್ರತಿದಿನ ನಿಯಮಿತವಾಗಿ ವ್ಯಾಯಾಮ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದರು.


ಪ್ರತಿಭಾ ಪ್ರತಿಷ್ಠಾನದ ಅಧ್ಯಕ್ಷ ಪ್ರಹ್ಲಾದ ನರಸಾಪೂರ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. 85 ವಿದ್ಯಾರ್ಥಿಗಳಿಗೆ ₹ 5 ಲಕ್ಷದಷ್ಟು ವಿದ್ಯಾರ್ಥಿ ವೇತನ ವಿತರಿಸಲಾಯಿತು. ರಶ್ಮಿ ಖಾಕಂಡಿಕಿ ಪ್ರಾರ್ಥಿಸಿದರು. ವೆಂಕಟೇಶ ದೇಸಾಯಿ ಸ್ವಾಗತಿಸಿದರು. ಎಂ.ಎನ್. ಧಾರವಾಡ್ಕರ, ಅನಿಲ್ ಖಾಕಂಡಿಕಿ, ಗೋಪಾಲ ಕಮಲಾಪುರ ಸೇರಿದಂತೆ ಇತರರು ಇದ್ದರು.