ಕನ್ನಡಪ್ರಭ ವಾರ್ತೆ ಖಾನಾಪುರ

ಪ್ರತಿಯೊಬ್ಬರೂ ಜೀವನದಲ್ಲಿ ಶಿಸ್ತುಬದ್ಧವಾದ ಆರ್ಥಿಕತೆಯನ್ನು ರೂಢಿಸಿಕೊಳ್ಳಬೇಕು. ಸಮಾಜದಲ್ಲಿ ಉತ್ತಮ ವ್ಯಕ್ತಿ ಎಂದು ಕರೆಸಿಕೊಳ್ಳಲು ನಮ್ಮಲ್ಲಿ ಸಾಮಾಜಿಕ ಬದ್ಧತೆ, ಆರ್ಥಿಕ ಶಿಸ್ತು, ಒಳ್ಳೆಯ ನಡತೆ ಮತ್ತು ವಿನಯ-ವಿನಮ್ರತೆಗಳು ಇರಬೇಕು ಎಂದು ಖಾನಾಪುರ ಪೊಲೀಸ್ ಠಾಣೆಯ ಎಎಸ್‌ಐ ಬಸವರಾಜ ಅಭಿಪ್ರಾಯಪಟ್ಟರು.ಪಟ್ಟಣದ ಕೇದಾರ ಮಂಗಲ ಕಾರ್ಯಾಲಯದಲ್ಲಿ ಭಾನುವಾರ ನಡೆದ ಕ್ರೆಡಿಟ್ ಅಕ್ಸಿಸ್ ಗ್ರಾಮೀಣ ಲಿಮಿಟೆಡ್ ಖಾನಾಪುರ ಶಾಖೆಯಿಂದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿ ಎಸ್.ಎಸ್.ಕಿತ್ತೂರ ಮಾತನಾಡಿ, ವಾಣಿಜ್ಯ ಬ್ಯಾಂಕ್‌ಗಳು, ಸಹಕಾರಿ ಸಂಘಗಳು ಮತ್ತು ಲೇವಾದೇವಿ ಸಂಸ್ಥೆಗಳಿಂದ ಸಾಲ ಪಡೆಯುವ ಪ್ರತಿಯೊಬ್ಬರೂ ಸಕಾಲದಲ್ಲಿ ಪಡೆದ ಸಾಲವನ್ನು ತೀರಿಸಬೇಕು. ಪ್ರತಿ ತಿಂಗಳು ಸಾಲದ ಕಂತುಗಳನ್ನು ನಿಯಮಿತವಾಗಿ ಕಟ್ಟಬೇಕು, ಸಾಲ ಪಡೆದ ಉದ್ದೇಶಕ್ಕೆ ಮಾತ್ರ ಸಾಲದ ಹಣವನ್ನು ಬಳಸಬೇಕು. ಸಾಲಗಾರರಷ್ಟೇ ಜಾಮೀನುದಾರರೂ ಪಡೆದ ಸಾಲಕ್ಕೆ ಹೊಣೆಗಾರರಿದ್ದು, ತಾವು ಜಾಮೀನು ನೀಡಿದ ವ್ಯಕ್ತಿ ಸಾಲವನ್ನು ನಿಯಮಿತವಾಗಿ ತುಂಬುತ್ತಿರುವುದನ್ನು ಜಾಮೀನುದಾರರು ಖಾತ್ರಿಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಕ್ರೆಡಿಟ್ ಅಕ್ಸಿಸ್ ಗ್ರಾಮೀಣ ಸಂಸ್ಥೆಯ ಮ್ಯಾನೇಜರ್ ರವಿ ಸರ್ ಮಾತನಾಡಿ, ನಮ್ಮ ಸಂಸ್ಥೆಯ ಸರ್ವ ಸದಸ್ಯರಿಗೆ ಮತ್ತು ಗ್ರಾಹಕರಿಗೆ ಜವಾಬ್ದಾರಿಯುತ ಸಾಲ, ಕ್ರೆಡಿಟ್ ಶಿಸ್ತು ಮತ್ತು ಡಿಜಿಟಲ್ ವಂಚನೆಗಳ ತಡೆಗಟ್ಟುವಿಕೆ ಬಗ್ಗೆ ಮಾಹಿತಿ-ಮಾರ್ಗದರ್ಶನ ನೀಡಲು ಇಂದು ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಜ್ಞಾನದಿಂದ ಮಾತ್ರ ಉತ್ತಮ ಜೀವನ ನಿರ್ಮಾಣ ಸಾಧ್ಯವಿದ್ದು, ಹಣಕಾಸು ಸಾಕ್ಷರತೆಯ ಬಗ್ಗೆ ಪ್ರತಿಯೊಬ್ಬರೂ ಅರಿತುಕೊಂಡರೆ ಇಂದಿನ ಪರಿಶ್ರಮ ಸಾರ್ಥಕವಾಗಲಿದೆ ಎಂದು ವಿವರಿಸಿದರು.ಹಾಗೂ ಆರೋಗ್ಯ ಅಧಿಕಾರಿ ಎಂ ವಿ ಕಿವಡಸಾನ್ನವರ ಸಾಲ ಮತ್ತು ಆರೋಗ್ಯದ ಬಗ್ಗೆ ತಿಳಿಸಿದರು ಮತ್ತು ಶ್ರೀ ಚಂದ್ರಕಾಂತ ಮಾನೆ ಬ್ಯಾಂಕ್ ಮ್ಯಾನೇಜರ್ ಬ್ಯಾಂಕಿನ ಸೌಲಯಬದ ಬಗೆ ತಿಳಿಸಿದರು ಈ ಸಂದರ್ಭದಲ್ಲಿ ಮಾದೇಗೌಡ ಸಿ, ವೀರೇಶ.ಕೆ, ಶ್ರವಣ.ಕೆ, ರುದ್ರಪ್ಪ ,ಮಂಜುನಾಥ,ಸಂತೋಷ ,ಪ್ರಕಾಶ ಸೇರಿದಂತೆ ಕ್ರೆಡಿಟ್ ಅಕ್ಸಿಸ್ ಗ್ರಾಮೀಣ ಲಿಮಿಟೆಡ್ ಖಾನಾಪುರ ಶಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗು ಆಹ್ವಾನಿತರು ಉಪಸ್ಥಿತರಿದ್ದರು. ಚನ್ನಪ್ಪ ಯಲಿವಾಳ ಕಾರ್ಯಕ್ರಮ ನಿರೂಪಿಸಿದರು. ಹಣಮಂತ ವಡ್ಡರ ಸ್ವಾಗತಿಸಿದರು ಭೀಮಶಿ ವಂದಿಸಿದರು.