ಸಾರಾಂಶ
ಯಲಬುರ್ಗಾ: ಪ್ರತಿಯೊಬ್ಬರು ದಾನ-ಧರ್ಮ ಮಾಡುವ ಗುಣ ಬೆಳೆಸಿಕೊಳ್ಳುವ ಮೂಲಕ ಮಠ, ಮಾನ್ಯಗಳ ಏಳ್ಗಿಗೆಗೆ ಶ್ರಮಿಸಬೇಕು ಎಂದು ಪಪಂ ಮುಖ್ಯಾಧಿಕಾರಿ ನಾಗೇಶ ಹೇಳಿದರು.
ಪಟ್ಟಣದ ಶ್ರೀಮೊಗ್ಗಿಬಸವೇಶ್ವರ ದೇವಸ್ಥಾನ ಆವರಣದಲ್ಲಿ ಮಂಗಳವಾರ ರಾತ್ರಿ ಆಯೋಜಿಸಿದ್ದ ಶ್ರೀಧರ ಮುರಡಿ ಹಿರೇಮಠದಲ್ಲಿ ಮುರಡಿ ಹಿರೇಮಠದ ಪೀಠಾಧಿಪತಿ ಬಸಲಿಂಗೇಶ್ವರ ಸ್ವಾಮೀಜಿಗಳ ೨೨ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಮಾತನಾಡಿದರು.ಶ್ರೀಮಠದಿಂದ ಪರಂಪರೆಯಾಗಿ ಸಂಗೀತ,ಸಾಹಿತ್ಯ, ಅನ್ನ, ಶಿಕ್ಷಣ, ಜ್ಞಾನ ದಾಸೋಹದ ಮೂಲಕ ಹೆಚ್ಚು ಹೆಸರನ್ನು ಗಳಿಸಿಕೊಂಡಿದೆ. ನಾವು ದುಡಿದ ಹಣದಲ್ಲಿ ಬದುಕನ್ನು ಕಟ್ಟಿಕೊಂಡು ಸಮಾಜದಲ್ಲಿ ನೋಂದವರ ಕಲ್ಯಾಣಕ್ಕಾಗಿ ಒಂದಿಷ್ಟು ಸೇವೆ ಮಾಡುವ ಜತೆಗೆ ದಾನ ಧರ್ಮ ಗುಣ ಅಳವಡಿಸಿಕೊಂಡಾಗ ಜನ್ಮ ಸಾರ್ಥಕಗೊಳ್ಳುತ್ತದೆ ಎಂದರು.
ಬೇನಾಳ ಹಿರೇಮಠದ ಸದಾಶಿವ ಮಹಾಂತ ಸ್ವಾಮೀಜಿ ಮಾತನಾಡಿ, ಮನುಷ್ಯ ಅಧಿಕಾರ ಮತ್ತು ಹಣದಾಸೆಗಾಗಿ ಮಾನವೀಯ ಮೌಲ್ಯಗಳನ್ನು ಗಾಳಿಗೆ ತೂರುತ್ತಿದ್ದಾರೆ. ಇದು ನಾಗರಿಕ ಸಮಾಜಕ್ಕೆ ಗೌರವ ತರುವಂಥದ್ದಲ್ಲ. ಒಳ್ಳೆಯ ನಡೆ ನುಡಿ ಬೆಳೆಸಿಕೊಂಡು ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ಜೀವನ ರೂಪಿಸಿಕೊಳ್ಳಬೇಕು ಎಂದು ಹೇಳಿದರು.ಶ್ರೀಧರ ಮುರುಡಿ ಹಿರೇಮಠದ ಪೀಠಾಧಿಪತಿ ಬಸವಲಿಂಗೇಶ್ವರ ಸ್ವಾಮೀಜಿ ತುಲಾಭಾರ ಸ್ವೀಕರಿಸಿ ಮಾತನಾಡಿ, ಪ್ರತಿಯೊಬ್ಬರು ಶರಣರ ಸನ್ಮಾರ್ಗದಲ್ಲಿ ನಡೆದಾಗ ಜೀವನ ಪಾವನವಾಗುತ್ತದೆ ಎಂದರು.
ಜೀಗೇರಿ ಹಿರೇಮಠದ ಗುರುಸಿದ್ದೇಶ್ವರ ಸ್ವಾಮೀಜಿ ಹಾಗೂ ಗುಳೇದಗುಡ್ಡದ ಮುರುಘಾಮಠದ ಕಾಶಿನಾಥ ಸ್ವಾಮೀಜಿ ಮಾತನಾಡಿದರು. ಪಪಂ ಸದಸ್ಯ ಬಸವಲಿಂಗಪ್ಪ ಕೊತ್ತಲ ಮತ್ತಿತರರು ಇದ್ದರು.ದ್ಯಾಂಪೂರಿನ ದೊಡ್ಡನಗೌಡ ಕಳಕವ್ವನವರ ತುಲಾಭಾರ ಸೇವೆ ನೆರವೇರಿಸಿದರು. ಮಂಗಳೇಶ ಶ್ಯಾಗೋಟಿ, ಶರಣಕುಮಾರ ಬಂಡಿ ಸಂಗೀತ ಸೇವೆ ನಡೆಸಿಕೊಟ್ಟರು. ಶಿಕ್ಷಕ ಬಸವರಾಜ ಕೊಂಡಗುರಿ ನಿರೂಪಿಸಿದರು. ಗ್ರಾಮಲೆಕ್ಕಾಧಿಕಾರಿ ಬಸನಗೌಡ ರಾಮಶೆಟ್ಟಿ ಸ್ವಾಗತಿಸಿದರು. ಬಳಿಕ ಅನ್ನಸಂತರ್ಪಣೆ ನಡೆಯಿತು.