ವಿಜಯಪುರ: ವಿದ್ಯಾರ್ಥಿಗಳು ಇಂದು ಸಮಾಜದಿಂದ ಪಡೆಯುವ ಸಹಾಯ ಮತ್ತು ಸಹಕಾರವನ್ನು ಸ್ಮರಿಸಬೇಕು. ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಂಡಾಗ ತಾವು ಬೆಳೆದು ಬಂದ ಸಮಾಜಕ್ಕೆ ಮರಳಿ ಸಹಾಯ ಮಾಡುವಂತವರಾಗಬೇಕು ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ವಿ.ಎಂ. ಕಿಶೋರ್ ಕುಮಾರ್ ತಿಳಿಸಿದರು.

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಹಿರಿಯ ವಿದ್ಯಾರ್ಥಿಗಳ ಸಂಘ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಪರೀಕ್ಷಾ ಪರಿಕರ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.ಶಾಲೆಯ ಹಿರಿಯ ವಿದ್ಯಾರ್ಥಿಗಳಾದ ಭ್ರಮರಾಂಬ ಹಾಗೂ ಎಸ್.ಆರ್. ಚಂದ್ರಶೇಖರ್ ಅವರ ಸೌಜನ್ಯದೊಂದಿಗೆ ೮, ೯ ಮತ್ತು ೧೦ನೇ ತರಗತಿಯ ಸುಮಾರು ೩೦೦ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅನುಕೂಲವಾಗುವಂತೆ ಎಕ್ಸಾಮ್ ಪ್ಯಾಡ್ ಮತ್ತು ಪೆನ್ನುಗಳನ್ನು ವಿತರಿಸಲಾಯಿತು.

ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಹಾಗೂ ಸಂಘದ ಕಾರ್ಯದರ್ಶಿ ಡಾ. ಎಂ.ಶಿವಕುಮಾರ್ವಿ ಮಾತನಾಡಿ, ವಿದ್ಯಾರ್ಥಿಗಳಿಗೆ ಸಿಗುತ್ತಿರುವ ಇಂತಹ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಬೇಕು. ಆ ಮೂಲಕ ಶಾಲೆಗೆ ಹಾಗೂ ಪಟ್ಟಣಕ್ಕೆ ಕೀರ್ತಿ ತರಬೇಕು ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಸಂಘದ ಖಜಾಂಚಿ ವಿ.ವಿಶ್ವನಾಥ್, ಸದಸ್ಯರಾದ ಅನ್ನಪೂರ್ಣ, ಬೆಸ್ಕಾಂ ಎಇಇ ವಿಶ್ವಾಸ್, ದಾನಿಗಳ ಪರವಾಗಿ ಮಂಜುಳಾ ಚಂದ್ರಮೋಹನ, ಕುಮಾರಿ ನಿವೇದಿತಾ ಕಾಲೇಜಿನ ಉಪ ಪ್ರಾಂಶುಪಾಲರಾದ ಕೋಮಲಾ, ಶಿಕ್ಷಕ ನಾರಾಯಣ್ ಹಾಗೂ ಪ್ರೌಢಶಾಲಾ ವಿಭಾಗದ ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು.