ತಾಲೂಕಿನ ಗೇರುಸೊಪ್ಪಾದಲ್ಲಿರುವ ಶ್ರೀ ಕ್ಷೇತ್ರ ಬಂಗಾರಮಕ್ಕಿ ವೀರಾಂಜನೇಯ ದೇವಸ್ಥಾನದಲ್ಲಿ ಮಾ. 27ರಿಂದ ಏಪ್ರಿಲ್ 2ರ ವರೆಗೆ ನಡೆಯಲಿರುವ ಸಂಸ್ಕೃತಿ ಕುಂಭ - ಮಲೆನಾಡ ಉತ್ಸವ - 2026ರ ಕಾರ್ಯಕ್ರಮಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ.
ಬಂಗಾರಮಕ್ಕಿಯಲ್ಲಿ ಏಳು ದಿನ ವಿವಿಧ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಹೊನ್ನಾವರತಾಲೂಕಿನ ಗೇರುಸೊಪ್ಪಾದಲ್ಲಿರುವ ಶ್ರೀ ಕ್ಷೇತ್ರ ಬಂಗಾರಮಕ್ಕಿ ವೀರಾಂಜನೇಯ ದೇವಸ್ಥಾನದಲ್ಲಿ ಮಾ. 27ರಿಂದ ಏಪ್ರಿಲ್ 2ರ ವರೆಗೆ ನಡೆಯಲಿರುವ ಸಂಸ್ಕೃತಿ ಕುಂಭ - ಮಲೆನಾಡ ಉತ್ಸವ - 2026ರ ಕಾರ್ಯಕ್ರಮಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ.
ಏಳು ದಿನಗಳ ಕಾಲ ಶ್ರೀ ಕ್ಷೇತ್ರದಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳಲ್ಲಿ ವಿಜ್ಞಾನ, ತಂತ್ರಜ್ಞಾನ, ಸಾಹಿತ್ಯ, ಕಲೆ, ಸಂಗೀತ, ಧಾರ್ಮಿಕ, ರಾಜಕೀಯ, ಸಾಮಾಜಿಕ, ವೈದ್ಯಕೀಯ, ಪರಿಸರ ಸಹಿತ ವಿವಿಧ ಕ್ಷೇತ್ರಗಳ ತಜ್ಞರು, ಪರಿಣಿತರು ಸೇರಿ 70ಕ್ಕೂ ಅಧಿಕ ಗಣ್ಯರು ಭಾಗವಹಿಸಲಿದ್ದಾರೆ.ಮಾ. 27ರಂದು ಉತ್ಸವ ಉದ್ಘಾಟನೆಗೊಳ್ಳಲಿದ್ದು, ಮಾ. 28ರಂದು ಸಾಹಿತ್ಯೋತ್ಸವ, ಮಾ. 29ರಂದು ಪಶ್ಚಿಮ ಘಟ್ಟದ ರಕ್ಷಣೆಗಾಗಿ ಜನಾಂದೋಲನ, ಮಾ. 30ರಂದು ಉದ್ಯೋಗ ಮೇಳ, ಮಾ. 31ರಂದು ಮೀನುಗಾರರ ಸಮ್ಮೇಳನ, ಏ. 1ರಂದು ಪ್ರಾಚೀನ ಆರೋಗ್ಯ ಪರಂಪರಾ ವೈದ್ಯ ಸಂಗಮ ಹಾಗೂ ರೈತೋತ್ಸವ, ಏ. 2ರಂದು ಆರೋಗ್ಯ ತಪಾಸಣಾ ಶಿಬಿರ ಮತ್ತು ಸಮಾರೋಪ ಸಮಾರಂಭ ನಡೆಯಲಿದೆ.
ಮಾ. 27ರಂದು ಶ್ರೀರಾಮನವಮಿ, ಮಾ. 28ರಂದು ಶರಾವತಿ ಕುಂಭ ಮತ್ತು ಶರಾವತಿ ಆರತಿ, ಏ. 1ರಂದು ಪುಷ್ಪ ರಥೋತ್ಸವ, ಏ. 2ರಂದು ಸೀತಾ ಕಲ್ಯಾಣೋತ್ಸವ ಹಾಗೂ ಶ್ರೀರಾಮ ಪಟ್ಟಾಭಿಷೇಕ ಮತ್ತು ಬ್ರಹ್ಮರಥೋತ್ಸವ ಉತ್ಸವದ ಪ್ರಮುಖ ಆಚರಣೆಗಳಾಗಿವೆ.ಉತ್ಸವದ ವೇದಿಕೆಯ ನಿರ್ಮಾಣ, ಪೆಂಡಲ್ ಹಾಕುವುದು, ದೀಪಾಲಂಕಾರ, ಮಳಿಗೆಗಳ ನಿರ್ಮಾಣ, ಭೋಜನ ವ್ಯವಸ್ಥೆ, ವಾಹನಗಳ ನಿಲುಗಡೆ ಮೊದಲಾದ ಕೆಲಸ ಕಾರ್ಯಗಳು ಭರದಿಂದ ಸಾಗಿವೆ. ಉತ್ಸವದಲ್ಲಿ ಪ್ರತಿ ದಿನ ಐದು ಸಾವಿರಕ್ಕೂ ಹೆಚ್ಚು ಭಕ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. 50ಕ್ಕೂ ಹೆಚ್ಚು ವಿವಿಧ ಮಳಿಗೆಗಳನ್ನು ತೆರೆಯಲಾಗಿದೆ. ಕಾರ್ಯಕ್ರಮದ ಯಶಸ್ವಿಗೆ 100ಕ್ಕೂ ಹೆಚ್ಚು ಸ್ವಯಂ ಸೇವಕರು ತಮ್ಮ ಸೇವೆಯನ್ನು ಒದಗಿಸಲಿದ್ದಾರೆ.
ಪ್ರತಿ ದಿನ ಸಂಜೆಯ ಬಳಿಕ ಸಂಗೀತ, ನೃತ್ಯ, ಭರತನಾಟ್ಯ, ಯಕ್ಷಗಾನ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತಾಧಿಗಳು ಭಾಗವಹಿಸಲಿದ್ದಾರೆ ಎಂದು ಶ್ರೀ ಕ್ಷೇತ್ರ ಪ್ರಕಟಣೆಯಲ್ಲಿ ತಿಳಿಸಿದೆ.