ಸಾರಾಂಶ
ಚೇರ್ಕಾಡಿ ಗ್ರಾಮದ ಕೇಶವ ನಗರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ‘ವಿದ್ಯಾರಂಭ’ ಸಮಾರಂಭ ನಡೆಯಿತು. ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರಭಾರತೀ ಮಹಾಸ್ವಾಮಿ ಆಶೀರ್ವಚನ ನೀಡಿದರು.
ಕನ್ನಡಪ್ರಭ ವಾರ್ತೆ ಬ್ರಹ್ಮಾವರ
ಆಯುಧವನ್ನು ಪೋಲಿಸರು ಸಮಾಜದ ರಕ್ಷಣೆಗೆ ಯೋಧರು ದೇಶ ರಕ್ಷಣೆಗೆ ಬಳಸಿದರೆ, ಭಯೋತ್ಪಾದಕರು ಜನರನ್ನು ಕೊಲ್ಲುವುದಕ್ಕೆ ಬಳಸುತ್ತಾರೆ. ಆದ್ದರಿಂದ ಯಾವುದೇ ವಸ್ತುವಿನ ಸದ್ಬಳಕೆಯಾಗಬೇಕಾದರೆ ಬಳಸುವವರಲ್ಲಿ ಸಂಸ್ಕಾರ ಅತೀ ಮುಖ್ಯ. ಈ ಸಂಸ್ಕಾರಗಳನ್ನು ಶಾಲೆಗಳಲ್ಲಿ ಕಲಿಸಬೇಕು, ಅದಕ್ಕಾಗಿ ಭಾರತೀಯ ಸಂಸ್ಕೃತಿಯನ್ನು ಪಠ್ಯದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರಭಾರತೀ ಮಹಾಸ್ವಾಮಿ ಆಶಿಸಿದ್ದಾರೆ.ಶುಕ್ರವಾರ ಇಲ್ಲಿನ ಚೇರ್ಕಾಡಿ ಗ್ರಾಮದ ಕೇಶವ ನಗರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ‘ವಿದ್ಯಾರಂಭ’ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಜನ್ಮದಿಂದಲೇ ಆರಂಭವಾಗುವ ಜೀವನವನ್ನು ಶಿಸ್ತಿನೊಂದಿಗೆ ರೂಪಿಸಿಕೊಳ್ಳುವುದು ಎಲ್ಲರ ಜವಾಬ್ದಾರಿ. ಜೀವನದಲ್ಲಿ ವಿದ್ಯಾಭ್ಯಾಸ, ಸದೌಷಧಿ, ಸಂಪನ್ಮೂಲಗಳ ಸಂಪಾದನೆ ಮತ್ತು ವಿತರಣೆ ಮಾಡುವುದು ಮನುಷ್ಯರ ಕರ್ತವ್ಯ ಎಂದು ಜಗದ್ಗುರು ಶಂಕರಾಚಾರ್ಯರು 1200 ವರ್ಷಗಳ ಹಿಂದೆಯೇ ಹೇಳಿದ್ದಾರೆ. ಇದಕ್ಕೆ ಪೂರಕವಾಗಿ ಇಂದಿನ ಪೀಳಿಗೆಗೆ ಶಿಕ್ಷಣ ನೀಡುತ್ತಿರುವ ರಾಷ್ಟ್ರೋತ್ಥಾನ ಪರಿಷತ್ ಶ್ಲಾಘನೀಯ ಎಂದು ಶ್ರೀಗಳು ಹೇಳಿದರು.ಮಣಿಪಾಲ ಮಾಹೆಯ ಸಹಉಪಕುಲಪತಿ ಡಾ.ಶರತ್ ಕುಮಾರ್ ರಾವ್ ಮಾತನಾಡಿ, ನೌಕರಿ ಹುಡುಕುವ ವಿದ್ಯಾರ್ಥಿಗಳಾಗದೆ, ನೂರಾರು ಜನರಿಗೆ ಉದ್ಯೋಗ ನೀಡುವಂತಹ ಸಾಧಕರಾಗಬೇಕು. ಇಂದಿನ ವಿದ್ಯಾರ್ಥಿಗಳಿಗೆ ಅಂತಹ ಚಿಂತನೆ ನೀಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಶಾಲಾ ಸಂಚಾಲನ ಸಮಿತಿಯ ಅಧ್ಯಕ್ಷ ಸಾಧು ಸಾಲ್ಯಾನ್, ಕಾರ್ಯದರ್ಶಿ ಋಷಿರಾಜ್ ಇದ್ದರು.
ಚರಣ್ರಾಜ್ ಸ್ವಾಗತಿಸಿದರು. ಶಾಲೆಯ ಪ್ರಾಂಶುಪಾಲೆ ಪೂರ್ಣಿಮಾ ಎಸ್.ಡಿ. ಮತ್ತು ಕಾಲೇಜಿನ ಪ್ರಾಂಶುಪಾಲೆ ಭಾಗ್ಯಶ್ರೀ ಐತಾಳ್ ಇದ್ದರು. ರಾಷ್ಟ್ರೋತ್ಥಾನ ಪರಿಷತ್ ಪ್ರ.ಕಾರ್ಯದರ್ಶಿ ದಿನೇಶ್ ಹೆಗ್ಡೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಜ್ಞಾ ಕಾಮತ್ ವಂದಿಸಿದರು. ಪ್ರತಿಮಾ, ಮೇಘಾ, ಪ್ರಕಾಶ್ ಆಚಾರ್ಯ ನಿರೂಪಿಸಿದರು.