ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಪ್ರಸ್ತುತ ದಿನಗಳಲ್ಲಿ ನಾವು ಕಾಣುತ್ತಿರುವುದು ಅಡ್ಜಸ್ಟ್ ಮೆಂಟ್ ಪಾಲಿಟಿಕ್ಸ್. ಯಾರು, ಯಾವಾಗ, ಯಾರ ಜೊತೆ ಹೋಗುತ್ತಾರೆ ಎನ್ನುವುದೇ ಅರ್ಥವಾಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಸೂಚ್ಯವಾಗಿ ಹೇಳಿದರು.ನಗರದ ಪಿಇಎಸ್ ಕಾಲೇಜಿನ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಕರ್ನಾಟಕ ಸಂಘ, ಇಂಡುವಾಳು ಎಚ್.ಹೊನ್ನಯ್ಯ ಕುಟುಂಬ ವರ್ಗದ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಇಂಡುವಾಳು ಎಚ್.ಹೊನ್ನಪ್ಪ ಅವರನ್ನು ಕುರಿತ ‘ನೆಲದ ಕಣ್ಣು’ ಕೃತಿ ಬಿಡುಗಡೆ ಹಾಗೂ ಎಚ್.ಹೊನ್ನಪ್ಪ ಕ್ರೀಡಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಹೊಂದಾಣಿಕೆ ರಾಜಕಾರಣ ಒಮ್ಮೊಮ್ಮೆ ಸಾಕಷ್ಟು ಇಕ್ಕಟ್ಟಿಗೆ ಸಿಲುಕಿಸುವುದು ಸಹಜ. ಕೆಲವೊಮ್ಮೆ ಅನಿವಾರ್ಯವೂ ಆಗುತ್ತದೆ. ಅದರೊಂದಿಗೆ ಹೊಂದಿಕೊಂಡು ರಾಜಕಾರಣ ಮುನ್ನಡೆಸುವುದು ಸುಲಭವೂ ಅಲ್ಲ ಎಂದು ಹೇಳಿದರು.ರಾಜಕಾರಣಿಗಳಿಗೆ ಪ್ರಶಂಸೆಯನ್ನು ಜೀರ್ಣಿಸಿಕೊಳ್ಳುವ ಶಕ್ತಿ ಇರಬೇಕು. ಪ್ರಶಂಸೆಯನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದಿದ್ದರೆ ಅಹಂಕಾರ ಹೆಚ್ಚಾಗುತ್ತದೆ. ಇದರಿಂದ ಮುಂದೆ ಯಾವ ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ. ಪ್ರಶಂಸೆ, ಟೀಕೆಗಳನ್ನು ಜೀರ್ಣಿಸಿಕೊಂಡಾಗ ಆ ವ್ಯಕ್ತಿ ಸಮಾಜಕ್ಕೆ ಶಕ್ತಿಯಾಗುತ್ತಾನೆ, ಜನರ ಗೌರವಕ್ಕೆ ಪಾತ್ರರಾಗಿ ಆದರ್ಶ ವ್ಯಕ್ತಿಯಾಗಿಯೂ ರೂಪುಗೊಳ್ಳುತ್ತಾನೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಅವಕಾಶವಾದಿ ರಾಜಕಾರಣಿಗಳ ಸಂಖ್ಯೆ ಹೆಚ್ಚಾಗಿರುವುದನ್ನು ನಾನು ನೋಡಿದ್ದೇನೆ. ಹಲವಾರು ನಿಗಮ ಮಂಡಳಿ, ವಿಧಾನ ಪರಿಷತ್ ಸ್ಥಾನ, ಹೌಸಿಂಗ್ ಬೋರ್ಡ್ ನಂತಹ ಹುದ್ದೆಗಳನ್ನು ಕೊಟ್ಟರೂ ತೃಪ್ತರಾಗದೆ ಪುಷ್ಪಕ ವಿಮಾನವನ್ನೇರಿ ಹೊರಟು ಹೋಗುತ್ತಾರೆ. ಹಾಗಾಗಿ ನಿಷ್ಠಾವಂತ, ಬದ್ಧತೆಯುಳ್ಳ ರಾಜಕಾರಣಿಗಳ ಅವಶ್ಯಕತೆ ಇಂದು ಹೆಚ್ಚಾಗಿದೆ ಎಂದು ಅಭಿಪ್ರಾಯಪಟ್ಟರು.ಎಚ್.ಹೊನ್ನಪ್ಪ ಅವರಿಗೆ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸ್ಥಾನವನ್ನು ನೀಡಿದ್ದು, ನಂತರದಲ್ಲಿ ಮೈಶುಗರ್ ಅಧ್ಯಕ್ಷರ ಸ್ಥಾನದ ಆಫರ್ ನೀಡಲಾಗಿತ್ತು. ಆದರೆ, ಅದನ್ನು ನಯವಾಗಿಯೇ ತಿರಸ್ಕರಿಸಿದ್ದ ಅವರು, ಆ ಹುದ್ದೆಯನ್ನು ನಾನು ಈಗಾಗಲೇ ನಿರ್ವಹಿಸಿದ್ದೇನೆ. ಅದನ್ನು ಬೇರೆಯವರಿಗೆ ನೀಡುವಂತೆ ತಿಳಿಸಿದ್ದರು. ಇಂತಹ ಉದಾರ ಮನಸ್ಸಿನ ರಾಜಕಾರಣಿಗಳನ್ನು ಇಂದು ಕಾಣುವುದು ಕಷ್ಟ ಎಂದು ಹೇಳಿದರು.