ಶಾಪಗ್ರಸ್ತ ಗ್ರಾಮೀಣ ರಸ್ತೆ: ದುರಸ್ತಿಗೆ ಮಾನವ ಹಕ್ಕು ಆಯೋಗಕ್ಕೆ ಮೊರೆ!

| Published : Aug 12 2024, 01:09 AM IST

ಶಾಪಗ್ರಸ್ತ ಗ್ರಾಮೀಣ ರಸ್ತೆ: ದುರಸ್ತಿಗೆ ಮಾನವ ಹಕ್ಕು ಆಯೋಗಕ್ಕೆ ಮೊರೆ!
Share this Article
  • FB
  • TW
  • Linkdin
  • Email

ಸಾರಾಂಶ

ಯಕ್ಷಗಾನದ ಹಿಮ್ಮೇಳದಲ್ಲಿ ಸಕ್ರಿಯರಾಗಿರುವ ಹನುಮಗಿರಿ ಮೇಳದ ಕಲಾವಿದ ಚೈತನ್ಯ ಕೃಷ್ಣ ಪದ್ಯಾಣ ದೂರು ನೀಡಿದ್ದಾರೆ,

ಮೌನೇಶ ವಿಶ್ವಕರ್ಮ

ಕನ್ನಡಪ್ರಭ ವಾರ್ತೆ ಬಂಟ್ವಾಳ

ಕಳೆದ 25 ವರ್ಷಗಳಿಂದ ಶೋಚನೀಯ ಸ್ಥಿತಿಯಲ್ಲಿರುವ ತನ್ನೂರಿನ ಶಾಪಗ್ರಸ್ತ ರಸ್ತೆಗೆ ಮುಕ್ತಿ ಕೊಡಿಸಿ ಎಂದು ಯಕ್ಷಗಾನ ಹಿಮ್ಮೇಳ ಕಲಾವಿದರೊಬ್ಬರು ಮಾನವಹಕ್ಕು ಆಯೋಗದ ಮೊರೆ ಹೋದ ಘಟನೆ ತಾಲೂಕಿನ ಗಡಿಗ್ರಾಮವಾದ ಕರೋಪಾಡಿಯಲ್ಲಿ ನಡೆದಿದೆ.

ಯಕ್ಷಗಾನದ ಹಿಮ್ಮೇಳದಲ್ಲಿ ಸಕ್ರಿಯರಾಗಿರುವ ಹನುಮಗಿರಿ ಮೇಳದ ಕಲಾವಿದ ಚೈತನ್ಯ ಕೃಷ್ಣ ಪದ್ಯಾಣ ದೂರುದಾರ. ರಸ್ತೆ ದುರಸ್ತಿಗೆ ಹಲವು ವರ್ಷಗಳಿಂದ ಶಾಸಕರಾದಿಯಾಗಿ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿ ಬೇಸತ್ತಿರುವ ಇವರು, ಇದು ತನ್ನ ಕೊನೇ ಪ್ರಯತ್ನ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಏನಿದು ಸಮಸ್ಯೆ?: ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಸುಮಾರು 1.5 ಕಿ.ಮೀ. ದೂರದಲ್ಲಿರುವ ಮುಗುಳಿ - ಪದ್ಯಾಣ (ರೆಂಜೆಡಿ) ರಸ್ತೆಯು ಈ ಹಿಂದೆ 1999ರಲ್ಲಿ ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನೆಯಲ್ಲಿ ನಿರ್ಮಾಣಗೊಂಡಿದೆ. ಆದರೆ ಬಳಿಕದ ವರ್ಷಗಳಲ್ಲಿ ಹಂತ ಹಂತವಾಗಿ ಇದ್ದ ಡಾಂಬರು‌ ಕಿತ್ತುಹೋಯಿತೇ, ವಿನಃ ಅದರ ಜೀರ್ಣೋದ್ಧಾರದ ಕೆಲಸ ನಡೆಯಲೇ ಇಲ್ಲ. ಹೀಗಾಗಿ ಪ್ರಸ್ತುತ ಈ ರಸ್ತೆಯ ಸ್ಥಿತಿ ತೀವ್ರ ಶೋಚನೀಯವಾಗಿದೆ.

ರಸ್ತೆಯ ವಾಸ್ತವ ಸ್ಥಿತಿಯನ್ನು ಪತ್ರದಲ್ಲಿ ಉಲ್ಲೇಖಿಸಿರುವ ಅವರು, ಒಮ್ಮೆ ನಿರ್ಮಾಣಗೊಂಡ ಬಳಿಕ ಯಾವುದೇ ನಿರ್ವಹಣೆಯನ್ನೂ ಕಾಣದ ಹಿನ್ನೆಲೆಯಲ್ಲಿ ಈ ರಸ್ತೆಯ ಪ್ರಯಾಣ ಅಪಾಯಕಾರಿ ಎಂಬಂತಿದೆ. 25 ವರ್ಷಗಳ ಹಿಂದೆ ರಸ್ತೆ ನಿರ್ಮಿಸಿದ್ದರಿಂದ ಚರಂಡಿಗಳನ್ನು ಮಾಡಿಲ್ಲ, ಮಳೆ ನೀರು ರಸ್ತೆಯಲ್ಲಿದ್ದರೂ ನೀರು ಹರಿಯುತ್ತಿದೆ. ಇದರಿಂದ ರಸ್ತೆ ದಿನದಿಂದ ದಿನಕ್ಕೆ ಹದಗೆಟ್ಟಿದೆ. ಇದರಿಂದ ಈ ರಸ್ತೆಯ ಮುಖೇನ ಸಂಪರ್ಕ‌ಕಲ್ಪಿಸುವ ಸುಮಾರು 25ಕ್ಕೂ ಅಧಿಕ ಮನೆಗಳ ನಿವಾಸಿಗಳು ನಿತ್ಯ ಸಂಕಷ್ಟ ಎದುರಿಸುವಂತಾಗಿದೆ ಎಂದು ಉಲ್ಲೇಖಿಸಿದ್ದಾರೆ.

ಇದೇ ರಸ್ತೆಯಲ್ಲಿ ಪ್ರತಿನಿತ್ಯ ಶಾಲಾಮಕ್ಕಳು ಸಂಚರಿಸುತ್ತಿದ್ದು, ದ್ವಿಚಕ್ರವಾಹನಗಳು ಇಲ್ಲಿ ಅವಘಡಕ್ಕೆ ಒಳಗಾದ ಘಟನೆಯೂ‌ ನಡೆದಿದೆ. ಈ ರಸ್ತೆಯಿಂದಾಗಿ ದುರದೃಷ್ಟವಶಾತ್ ಸುಮಾರು 10-15 ಮನೆಗಳ ಜನರು ತಮ್ಮ ಮನೆಗಳಿಗೆ ರಸ್ತೆ ಸಂಪರ್ಕವಿಲ್ಲದೇ ತಮ್ಮ ಜೀವವನ್ನು ಪಣಕ್ಕಿಟ್ಟು ಎಲ್ಲ ಕೆಲಸಗಳಿಗೆ ಈ ರಸ್ತೆಯ ಮೂಲಕ ಪ್ರತಿದಿನ ಸಂಚರಿಸಬೇಕಾಗಿದೆ. ಈಗಾಗಲೇ. ಹಲವು ದ್ವಿಚಕ್ರ ವಾಹನಗಳು ಮುಗ್ಗರಿಸಿ ಕೆಳಗೆ ಬಿದ್ದಿದ್ದು, ಸವಾರರು ಮತ್ತು ಪ್ರಯಾಣಿಕರು ಗಾಯಗೊಂಡಿದ್ದಾರೆ. ಇಲ್ಲಿನ ಮನೆಗಳಿಗೆ ಮೂಲಭೂತ ಅಗತ್ಯಗಳನ್ನು ತಂದುಕೊಡುವುದಕ್ಕೂ ಕೆಲವರು ಹಿಂದೇಟು ಹಾಕುತ್ತಿದ್ದಾರೆ ಎನ್ನುವುದನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಇದು ಕೊನೆಯ ಪ್ರಯತ್ನ..!

ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆಯುತ್ತಿರುವುದು ಸಾಮಾನ್ಯ ವ್ಯಕ್ತಿಗಳ ಕೊನೆಯ ಪ್ರಯತ್ನವಾಗಿದ್ದು, ಅದರಂತೆ ಪತ್ರ ಬರೆದಿದ್ದೇನೆ, ರಸ್ತೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ‌ಪಡೆದುಕೊಂಡು ರಸ್ತೆ ಸುರಕ್ಷತೆಯ ಹಕ್ಕು ನಮ್ಮ ಗ್ರಾಮದ ನಿವಾಸಿಗಳಿಗೆ ದೊರಕುವಂತೆ ಮಾಡುವಿರಿ ಎಂಬ ನಂಬಿಕೆಯಲ್ಲಿ ನಾವಿದ್ದೇವೆ ಎಂದು ಉಲ್ಲೇಖಿಸಿದ್ದಾರೆ.

ಶಾಸಕರಿಂದ ಸ್ಪಂದನೆ ಇಲ್ಲ...ರಸ್ತೆಯ ದುಃಸ್ಥಿತಿಯ ಬಗ್ಗೆ ‘ಕನ್ನಡಪ್ರಭ’ದ ಜೊತೆ ಮಾತನಾಡಿದ ಸ್ಥಳೀಯರಾದ ಶಿವರಾಮ ಭಟ್ ಪದ್ಯಾಣ ಅವರು, ರಸ್ತೆಯನ್ನು ಸರಿ ಮಾಡಿಕೊಡಿ ಎಂದು ಶಾಸಕರಿಗೆ ಮತ್ತು ಗ್ರಾಮ ಪಂಚಾಯಿತಿಗೆ ಅಧಿಕೃತವಾಗಿ ಅರ್ಜಿ ಪತ್ರಗಳನ್ನು ನೀಡಲಾಗಿದೆ. ಹಲವಾರು ಬಾರಿ ಅನಧಿಕೃತವಾಗಿ ಮೌಖಿಕವಾಗಿ ಹಲವಾರು ಮನವಿಗಳನ್ನು ಮಾಡಿದ್ದರೂ ಶಾಸಕರಿಂದ ಯಾವ ಸ್ಪಂದನೆ ಬಂದಿಲ್ಲ, ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಆಯೋಗದಿಂದ ಸ್ಪಂದನೆ

ಚೈತನ್ಯ ಕೃಷ್ಣ ಪದ್ಯಾಣ ಅವರು, ಜೂ.11ರಂದು ಪತ್ರ ಬರೆದಿದ್ದು, ಇದಕ್ಕೆ ಆಯೋಗದಿಂದ ಸಕಾರಾತ್ಮಕ‌ ಪ್ರತಿಕ್ರಿಯೆ ಬಂದಿದೆ. ಶೋಚನೀಯ ಸ್ಥಿತಿಯಲ್ಲಿರುವ ಮುಗುಳಿ- ಪದ್ಯಾಣ ರಸ್ತೆಯ ಬಗ್ಗೆ ಜೂ.21ರಂದು ಆಯೋಗದ ಸಭೆಯಲ್ಲಿ ಮಂಡಿಸಲಾಗಿದೆ, ದೂರು ಅರ್ಜಿಯ ಕುರಿತು ವಿಚಾರಣೆ ನಡೆಸಿ, ಸೂಕ್ತ ಕ್ರಮ ಕೈಗೊಂಡು ಸೆ.10ರ ಒಳಗೆ ವರದಿ ಒಪ್ಪಿಸಲು ಆದೇಶಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಪತ್ರದಲ್ಲಿ ಹೇಳಲಾಗಿದೆ.