ಸಾರಾಂಶ
ಜಿಲ್ಲೆಯಲ್ಲಿ ಪಟಾಕಿ ಅವಘಡಗಳ ತಡೆಗೆ ಮುನ್ನೆಚ್ಚರಿಕೆ ವಹಿಸಿ । ತಪಾಸಣೆ ನಡೆಸಿ ವರದಿ ನೀಡುವಂತೆ ತಹಸೀಲ್ದಾರಗಳಿಗೆ ಜಿಲ್ಲಾಧಿಕಾರಿ ಸೂಚನೆ
ಕನ್ನಡಪ್ರಭ ವಾರ್ತೆ ಹಾವೇರಿಜಿಲ್ಲೆಯಲ್ಲಿ ಪರವಾನಗಿ ಇಲ್ಲದೆ ಅನಧಿಕೃತವಾಗಿ ಪಟಾಕಿಗಳ ಸಂಗ್ರಹ, ಸಾಗಾಣಿಕೆ, ತಯಾರಿಕೆ ಹಾಗೂ ಮಾರಾಟ ಮಾಡುವ ಚಟುವಟಿಕೆಗಳಿಗೆ ಸಂಪೂರ್ಣ ಕಡಿವಾಣ ಹಾಕಬೇಕು. ಇಂತಹ ಚಟುವಟಿಕೆಗಳ ಪತ್ತೆಗಾಗಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ತಪಾಸಣೆ ನಡೆಸಿ ವರದಿ ನೀಡುವಂತೆ ತಹಸೀಲ್ದಾರಗಳಿಗೆ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಸಂಭವನೀಯ ಪಟಾಕಿ ಅವಘಡಗಳನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಕುರಿತಂತೆ ಅಧಿಕಾರಿಗಳ ಸಭೆ ನಡೆಸಿದ ಅವರು, ಉಪವಿಭಾಗಾಧಿಕಾರಿಗಳ ಹಂತದಲ್ಲಿ ತಾಲೂಕು ಮಟ್ಟದಲ್ಲಿ ಸಭೆ ನಡೆಸಿ, ತಹಸೀಲ್ದಾರ ನೇತೃತ್ವದಲ್ಲಿ ಕಂದಾಯ, ಪೊಲೀಸ್, ಆರ್ಡಿಪಿಆರ್, ಸ್ಥಳೀಯ ನಗರ ಸಂಸ್ಥೆಗಳು, ಪರಿಸರ ಇಲಾಖೆ ಹಾಗೂ ಅಗ್ನಿಶಾಮಕ ಇಲಾಖೆಗಳ ಪ್ರತಿನಿಧಿಗಳನ್ನೊಳಗೊಂಡ ತಂಡವು ಅಂಗಡಿವಾರು, ಗೋದಾಮುವಾರು ತಪಾಸಣೆ ನಡೆಸಿ, ಶುಕ್ರವಾರದೊಳಗಾಗಿ ವರದಿ ಸಲ್ಲಿಸುವಂತೆ ಸೂಚಿಸಿದರು.ಪರವಾನಗಿ ಪಡೆಯದೇ ಪಟಾಕಿ ಉತ್ಪಾದನೆ, ದಾಸ್ತಾನು, ಮಾರಾಟ ಕಂಡುಬಂದಲ್ಲಿ ಅಂತಹವರ ವಿರುದ್ಧ ಎಫ್.ಐ.ಆರ್. ದಾಖಲಿಸಬೇಕು. ಈಗಾಗಲೇ ಅನಧಿಕೃತವಾಗಿ ಗೋಡೌನ್ಗಳಲ್ಲಿ ಪಟಾಕಿಗಳನ್ನು ದಾಸ್ತಾನು ಮಾಡಿದ್ದು ಕಂಡುಬಂದರೆ ಅಂತಹವರ ವಿರುದ್ಧ ನೋಟಿಸ್ ಜಾರಿಗೊಳಿಸಿ ಪಟಾಕಿಗಳನ್ನು ತೆರವುಗೊಳಿಸಬೇಕು. ಒಂದೊಮ್ಮೆ ನೋಟಿಸ್ ನೀಡಿದರೂ ಪಟಾಕಿ ತೆರವುಗೊಳಿಸಲು ತಡಮಾಡಿದರೆ ಅಂತಹವರ ವಿರುದ್ಧ ಎಫ್ಐಆರ್ ದಾಖಲಿಸಿ ಪಟಾಕಿಗಳನ್ನು ನಿಷ್ಕ್ರಿಯಗೊಳಿಸುವಂತೆ ತಿಳಿಸಿದರು.
ಗಣೇಶ ಹಬ್ಬದ ಸಂದರ್ಭದಲ್ಲಿ ಪಟಾಕಿ ಮಾರಾಟ-ದಾಸ್ತಾನಿಗೆ ತಾತ್ಕಾಲಿಕ ಪರವಾನಿಗೆ ಪಡೆದುಕೊಂಡು ಮಾರಾಟ ಮಾಡಿದವರು, ಉಳಿಕೆ ಪಟಾಕಿಯನ್ನು ಯಾವುದೇ ಕಾರಣಕ್ಕೂ ಜಿಲ್ಲೆಯ ಗಡಿಯೊಳಗೆ ದಾಸ್ತಾನು ಮಾಡಿಕೊಳ್ಳುವಂತಿಲ್ಲ. ಈ ಪಟಾಕಿಗಳನ್ನು ಖರೀದಿಸಿದ ಫ್ಯಾಕ್ಟರಿಗಳಿಗೆ ಅಥವಾ ಡೀಲರ್ಗಳಿಗೆ ಹಿಂದಿರುಗಿಸಬೇಕು. ಮುಂದಿನ ದಿನಗಳಲ್ಲಿ ಶಾಶ್ವತ ಹಾಗೂ ತಾತ್ಕಾಲಿಕ ಪರವಾನಿಗೆ ಪಡೆದು ಪಟಾಕಿ ದಾಸ್ತಾನು ಮಾಡುವ ಸಂದರ್ಭದಲ್ಲಿ ಕಡ್ಡಾಯವಾಗಿ ತಹಸೀಲ್ದಾರಗಳಿಗೆ ಮಾಹಿತಿ ನೀಡಬೇಕು. ನಿಗದಿತ ಪ್ರಮಾಣದಲ್ಲೇ ದಾಸ್ತಾನು ಮಾಡಿಕೊಳ್ಳಬೇಕು. ನಿಯೋಜಿತ ಸರ್ಕಾರಿ ಅಧಿಕಾರಿಗಳ ಸಮ್ಮುಖದಲ್ಲೇ ಗೋಡೌನ್ನಲ್ಲಿ ಪಟಾಕಿ ದಾಸ್ತಾನು ಮಾಡಿಕೊಳ್ಳುವಂತೆ ಲೈಸೆನ್ಸ್ದಾರರಿಗೆ ಸೂಚನೆ ನೀಡಿ ಎಂದು ತಿಳಿಸಿದರು.ದಸರಾ-ದೀಪಾವಳಿ ಇತರ ವಿಶೇಷ ಸಂದರ್ಭದಲ್ಲಿ ಸಣ್ಣ-ಪುಟ್ಟ ಚಿಲ್ಲರೆ ಅಂಗಡಿಗಳಲ್ಲೂ ಪಟಾಕಿ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಇಂತಹವುಗಳಿಗೆ ಕಡಿವಾಣ ಹಾಕಬೇಕು. ಈ ಕುರಿತಂತೆ ಸ್ಥಳೀಯವಾಗಿ ತಂಡಗಳನ್ನು ರಚಿಸಿಕೊಂಡು ಪ್ರತಿ ಅಂಗಡಿಗಳನ್ನು ತಪಾಸಣೆ ನಡೆಸಬೇಕು. ಸಂಭವನೀಯ ಪಟಾಕಿ ಅವಘಡಗಳನ್ನು ತನ್ಮೂಲಕ ಜೀವಹಾನಿ ಸಂಭವಿಸದಂತೆ ಗರಿಷ್ಠ ಎಚ್ಚರಿಕೆ ವಹಿಸಲು ಸೂಚನೆ ನೀಡಿದರು.
ಸಿಲಿಂಡರ್ ರೀಫಿಲಿಂಗ್ ತಡೆಯಿರಿ:ಪಟಾಕಿ ಮಾತ್ರವಲ್ಲದೇ ಅನಧಿಕೃತವಾಗಿ ಸಿಲೆಂಡರ್ಗಳನ್ನು ರೀಫಿಲ್ಲಿಂಗ್ ಮಾಡುವ ಚಟುವಟಿಕೆಗಳು, ಜನ್ಮದಿನಗಳಲ್ಲಿ ಹಚ್ಚುವ ಸ್ಪಾರ್ಕಲ್ಸ್ ಒಳಗೊಂಡಂತೆ ಕಲ್ಲುಕೋರೆಗಳಲ್ಲಿ ಬಳಕೆ ಮಾಡುವ ಜಿಲೆಟಿನ್ ದಾಸ್ತಾನು ಬಳಕೆ ಪರವಾನಗಿ, ಸುರಕ್ಷತಾ ಕ್ರಮಗಳ ಕುರಿತಂತೆ ತಪಾಸಣೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದರು.
ನಿರ್ಲಕ್ಷ್ಯಕ್ಕೆ ಕ್ರಮ:ನಿಯೋಜಿತ ಅಧಿಕಾರಿಗಳ ತಂಡ ಖುದ್ದಾಗಿ ಪರಿಶೀಲನೆ ನಡೆಸಬೇಕು. ವರದಿಯ ನಂತರವೂ ವ್ಯತಿರಿಕ್ತವಾಗಿ ಪಟಾಕಿ, ರಾಸಾಯನಿಕ ಅಗ್ನಿ ಅವಘಡಗಳು ಸಂಭವಿಸಿದರೆ ಆಯಾ ವ್ಯಾಪ್ತಿಯ ತಹಸೀಲ್ದಾರ್, ಪೊಲೀಸ್, ಆರ್ಡಿಪಿಆರ್, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪರಿಸರ, ಅಗ್ನಿಶಾಮಕ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ್, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಹಾವೇರಿ ಉಪವಿಭಾಗಾಧಿಕಾರಿ ಡಾ. ಚನ್ನಪ್ಪ, ಸವಣೂರ ಉಪವಿಭಾಗಾಧಿಕಾರಿ ಮಹ್ಮದ ಖಿಜರ್, ಡಿವೈಎಸ್ಪಿ ಎಂ.ಎಸ್. ಪಾಟೀಲ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಮಮತಾ, ಎಲ್ಲ ತಾಲೂಕುಗಳ ತಹಸೀಲ್ದಾರಗಳು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.