ಬಳ್ಳಾರಿ: ಯುವಕರಲ್ಲಿ ಮಾನವೀಯ ಮೌಲ್ಯಗಳ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಸಿದ್ಧಲಿಂಗ ಪ್ರಭು ತಿಳಿಸಿದರು.
ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ 17ನೇ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ಕೃತಕ ಬುದ್ಧಿಮತ್ತೆ ಅಥವಾ ಇನ್ಯಾವುದೇ ತಂತ್ರಜ್ಞಾನಗಳು ವಿದ್ಯಾರ್ಥಿಗಳಲ್ಲಿ ಪ್ರಾಮಾಣಿಕತೆ, ನೈತಿಕತೆ ಮತ್ತು ಸಹಾನುಭೂತಿಯ ಶಿಕ್ಷಣ ಒದಗಿಸುವುದಿಲ್ಲ. ಈ ಕೆಲಸವನ್ನು ವಿಶ್ವವಿದ್ಯಾಲಯಗಳು ಇತರೆ ಶಿಕ್ಷಣ ಸಂಸ್ಥೆಗಳೇ ಮಾಡಬೇಕು. ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುವುದರ ಜೊತೆಗೆ ಮಾನವೀಯ ಮೌಲ್ಯಗಳ ಪರಂಪರೆಯ ಜ್ಞಾನ ಒದಗಿಸಬೇಕು. ಸದಾಕಾಲ ಕಲಿಕಾಸಕ್ತಿ ಹೊಂದಿರಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗುಲಬರ್ಗಾ ವಿವಿಯ ವಿಶ್ರಾಂತ ಕುಲಪತಿ ಪ್ರೊ ಎಂ. ಮುನಿಯಮ್ಮ ಮಾತನಾಡಿ, ಸಂಶೋಧನಾ ವಿದ್ಯಾರ್ಥಿಗಳು ಯಾವುದೇ ಫೆಲೊಶೀಪ್ಗಾಗಿ ಕಾಯದೆ ಸಂಶೋಧನಾ ಲೇಖನಗಳನ್ನು ಅಂತಾರಾಷ್ಟ್ರೀಯ ಮಟ್ಟದ ಜರ್ನಲ್ಗಳಲ್ಲಿ ಪ್ರಕಟಿಸಲು ಒತ್ತು ನೀಡಿ. ಯಶಸ್ಸಿಗೆ ಸುಲಭ ಮಾರ್ಗ ಹುಡುಕದೆ ಶ್ರಮವಹಿಸಿ ಉತ್ತಮ ಸಂಶೋಧನೆಯಲ್ಲಿ ತೊಡಗಿಕೊಳ್ಳಿ ಎಂದು ಕಿವಿಮಾತು ಹೇಳಿದರು.ಸಮಾಜದಲ್ಲಿ ಸಮಾನತೆ ಶಿಕ್ಷಣ ಕ್ಷೇತ್ರ ದೇಶದ ಆರ್ಥಿಕ ಪ್ರಗತಿಗಿಂತ ಶೇ 13.8 ಏರಿಕೆ ಕಂಡಿದೆ. ಉನ್ನತ ಶಿಕ್ಷಣದಲ್ಲಿ ಮಹಿಳಾ ಶಿಕ್ಷಣ ಶೇ. 27.9 ಪ್ರಗತಿ ಕಂಡಿದೆ. ಇಷ್ಟಾದರೂ ವಿಶ್ವದ ಒಟ್ಟು ಶಿಕ್ಷಿತರ 30 ಪ್ರತಿಶತ ಭಾಗದಷ್ಟು ನಮ್ಮ ದೇಶ ತಲುಪಿಲ್ಲ.
1289 ವಿಶ್ವವಿದ್ಯಾಲಯಗಳು 48 ಸಾವಿರಕ್ಕೂ ಹೆಚ್ಚು ಕಾಲೇಜುಗಳಲ್ಲಿ 4 ಕೋಟಿಗೂ ಅಧಿಕ ವಿದ್ಯಾರ್ಥಿಗಳಿಗೆ 17.3 ಲಕ್ಷ ಶಿಕ್ಷಕರಿದ್ದರೂ ನಿಗದಿತ ಶೈಕ್ಷಣಿಕ ಸಾಧನೆ ಆಗಿಲ್ಲ ಎಂದು ವಿವರಿಸಿದ ಬೆಂಗಳೂರು ವಿವಿಯ ಮಾಜಿ ಕುಲಸಚಿವೆ ಪ್ರೊ. ಕೆ. ಸೀತಮ್ಮ ಅವರು ಶಿಕ್ಷಣದಿಂದ ಮಾತ್ರವೇ ಸಾಮಾಜಿಕ ಹಾಗೂ ಸಾರ್ವಜನಿಕ ಸಮಾನತೆ ಹೆಚ್ಚಾಗಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ. ಮುನಿರಾಜು ಮಾತನಾಡಿದರು.
17ನೇ ಸಂಸ್ಥಾಪನೆ ದಿನಾಚರಣೆಯ ಅಂಗವಾಗಿ ವಿವಿಯ ಆವರಣದಲ್ಲಿ 100ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು. ಎಂಸಿಎ ಎಂಕಾಂ, ಎಂಬಿಎ ವಿದ್ಯಾರ್ಥಿಗಳಿಗಾಗಿ ಕಂಪ್ಯೂಟರ್ ಪ್ರಯೋಗಾಲಯಗಳನ್ನು ಉದ್ಘಾಟಿಸಲಾಯಿತು. ವಿವಿಯ ನವಿಕೃತ ವೆಬ್ಸೈಟ್ಗೆ ಚಾಲನೆ ನೀಡಲಾಯಿತು. ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಶಿಷ್ಯವೇತನದ ಚೆಕ್ಗಳನ್ನು ವಿತರಿಸಲಾಯಿತು.ಅಂಧ ವಿದ್ಯಾರ್ಥಿಗೆ ಲ್ಯಾಪ್ಟ್ಯಾಪ್ ನೀಡಲಾಯಿತು. ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಸ್ಫೂರ್ತಿ ಕೆ.ಜಿ., ಸಂಸ್ಥಾಪನಾ ದಿನಾಚರಣೆಯ ಸಂಯೋಜಕ ಪ್ರೊ. ಕೆ.ಎಸ್. ಲೋಕೇಶ್, ಸಿಂಡಿಕೇಟ್ ಮತ್ತು ವಿದ್ಯಾವಿಷಯಕ ಪರಿಷತ್ತಿನ ಸದಸ್ಯರು ಉಪಸ್ಥಿತರಿದ್ದರು.ಡಾ. ಸುಷ್ಮಾ ಎನ್. ಜೋಗನ್ ಹಾಗೂ ಮೌಲ್ಯಮಾಪನ ಕುಲಸಚಿವ ಪ್ರೊ. ಎನ್.ಎಂ. ಸಾಲಿ ಕಾರ್ಯಕ್ರಮ ನಿರ್ವಹಿಸಿದರು. ಕೊನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.