ಸಾರಾಂಶ
ಕನ್ನಡಪ್ರಭವಾರ್ತೆ ಚಿತ್ರದುರ್ಗ
ದಾವಣಗೆರೆಯ ನಂಜಪ್ಪ ಆಸ್ಪತ್ರೆಯ ಕ್ಯಾನ್ಸರ್ ಚಿಕಿತ್ಸಾ (ಆಂಕಾಲಜಿ) ವಿಭಾಗವು ಅಂಡಾಶಯದ ಕ್ಯಾನ್ಸರ್ ಮತ್ತು ಸ್ತನದ ಕ್ಯಾನ್ಸರ್ ಎರಡರಿಂದಲೂ ಬಳಲುತ್ತಿದ್ದ 51 ವರ್ಷದ ಮಹಿಳೆಗೆ ಸ್ತನದ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯ ಜೊತೆಗೆ, ಸಿಆರ್ಎಸ್ ಮತ್ತು ಹೈಪೆಕ್ ಎಂಬ ಸಂಕೀರ್ಣ ಶಸ್ತ್ರಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಚಿಕಿತ್ಸೆ ನೀಡಿದೆ ಎಂದು ಮುಂಬೈನ ಟಾಟಾ ಮೆಮೋರಿಯಲ್ ಆಸ್ಪತ್ರೆ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ತಜ್ಞ ಡಾ.ಎನ್.ನಿಶ್ಚಲ್ ತಿಳಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ತಿಂಗಳ ಹಿಂದೆ ಮಹಿಳೆಗೆ ಈ ಸಂಕೀರ್ಣ ಆಪರೇಷನ್ ಸುಮಾರು 10 ಗಂಟೆ ನಡೆಸಲಾಗಿದೆ. ಪ್ರಸ್ತುತ ರೋಗಿಯ ಆರೋಗ್ಯ ಸ್ಥಿರವಾಗಿದ್ದು, ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ ಎಂದರು.
ಹೈಪರ್ಥೆಮಿಕ್ಮಿರಕ್ ಇಂಟ್ರಾಪೆರಿಟೋನಿಯಲ್ ಕೆಮೋಥೆರಪಿಯು ಅನೇಕ ಆಕ್ರಮಣಕಾರಿ ಕಿಬ್ಬೊಟ್ಟೆಯ ಕ್ಯಾನ್ಸರ್ಗಳಿಗೆ, ಅಪೆಂಡಿಕ್ಯುಲರ್ ಕ್ಯಾನ್ಸರ್ ನಂತಹ ಗೆಡ್ಡೆಗಳಿಗೆ ತುಲನಾತ್ಮಕವಾಗಿ ಹೊಸ ಚಿಕಿತ್ಸೆಯು ಆಯ್ಕೆಯಾಗಿದೆ. ಕಿಬ್ಬೊಟ್ಟೆಯ ಕುಳಿಯೊಳಗೆ ಹರಡಿರುವ ಕೊಲೊರೆಕ್ಟಲ್ ಕ್ಯಾನ್ಸರ್, ಅಂಡಾಶಯದ ಕ್ಯಾನ್ಸರ್, ಹೊಟ್ಟೆ ಕ್ಯಾನ್ಸರ್ ಮತ್ತು ಮಸೊಥೆಲಿಯೋಮಾ ದೇಹದ ಬಹುತೇಕ ಆಂತರಿಕ ಅಂಗಾಂಗಗಳಲ್ಲಿ ವ್ಯಾಪಿಸಿರುವ ತೆಳುವಾದ ಅಂಗಾಂಶ ಪದರದಲ್ಲಿ ಕಂಡುಬರುವ ಒಂದು ಬಗೆ ಕ್ಯಾನ್ಸರ್ ಅನ್ನು ಈ ಚಿಕಿತ್ಸೆಯಿಂದ ನಿಯಂತ್ರಿಸಬಹುದು ಮತ್ತು ಕೆಲವೊಮ್ಮೆ ಗುಣಪಡಿಸಬಹುದು ಎಂದರು.ನಂಜಪ್ಪ ಆಸ್ಪತ್ರೆಯಲ್ಲಿ ನಮ್ಮ ತಂಡವು ಕ್ಯಾನ್ಸರ್ ಶಸ್ತ್ರಚಿಕಿತ್ಸಕರು (ಸರ್ಜಿಕಲ್ ಆಂಕಾಲಜಿಸ್ಟ್), ವೈದ್ಯಕೀಯ ಕ್ಯಾನ್ಸರ್ ತಜ್ಞರು (ಮೆಡಿಕಲ್ ಆಂಕಾಲಜಿಸ್ಟ್) ವಿಕಿರಣ ಕ್ಯಾನ್ಸರ್ ತಜ್ಞರು (ರೇಡಿಯೇಷನ್ ಅಂಕಾಲಜಿಸ್ಟ್) ಮತ್ತು ಕ್ಯಾನ್ಸರ್ ರೋಗಶಾಸ್ತ್ರಜ್ಞರು (ಆಂಕೋ ಪ್ಯಾಥಾಲಜಿಸ್ಟ್) ಒಳಗೊಂಡ ಸಮಗ್ರ ಟ್ಯೂಮರ್ ಬೋರ್ಡ್ ಕಾರ್ಯ ವಿಧಾನದ ಮೂಲಕ ಪ್ರತಿಯೊಬ್ಬ ರೋಗಿಗೆ ಸಾಧ್ಯವಾದಷ್ಟು ಅತ್ಯುತ್ತಮ ಚಿಕಿತ್ಸೆ ದೊರೆಯುವಂತೆ ಖಾತರಿ ವಹಿಸಲು ಶ್ರಮಿಸುತ್ತಿದೆ ಎಂದರು.
ಆಸ್ಪತ್ರೆಯು ಅತ್ಯಾಧುನಿಕ ಆಪರೇಷನ್ ಥಿಯೇಟರ್, ಉಪಕರಣಗಳು, ಐಸಿಯು ಹೊಂದಿದೆ. ಪೆರಿಟೋನಿಯಲ್ ಕ್ಯಾನ್ಸರ್ ಹೊಂದಿರುವ ರೋಗಿಗಳಿಗೆ ಹತಾಶ ಸಂದರ್ಭಗಳಲ್ಲಿ ಸಂಪೂರ್ಣ ಸೈಟೋರೆಡಕ್ಟಿವ್ ಶಸ್ತ್ರಚಿಕಿತ್ಸೆಯ ಮೂಲಕ ಭರವಸೆ ಒದಗಿಸುತ್ತೇವೆ ಎಂದು ಮಾಹಿತಿ ನೀಡಿದರು.ಅನೇಕ ಗೆಡ್ಡೆಗಳಿಗೆ, ಗೆಡ್ಡೆಯ ಬಹುಭಾಗವನ್ನು ಕಡಿಮೆ ಮಾಡಲು ಮತ್ತು ಚಿಕಿತ್ಸೆಯ ಪ್ರತಿಕ್ರಿಯೆಯನ್ನು ಅರಿಯಲು ಮೊದಲು ರಕ್ತದ ಹರಿವಿನ ಮೂಲಕ ಕೆಮೋಥೆರಪಿಯನ್ನು ನೀಡಲಾಗುತ್ತದೆ. ಹೈಪೆಕ್ ಕುರಿತು ಜಾಗತಿಕ ಜಾಗೃತಿ ಹೆಚ್ಚುತ್ತಿದೆ. ರೋಗಿಗಳು ಇದರಿಂದ ಪ್ರಯೋಜನ ಪಡೆಯುತ್ತಿದ್ದಾರೆ. ಭಾರತದಲ್ಲಿ ನಾವು ಎಚ್ಐಪಿಇಸಿ ಫಲಿತಾಂಶಗಳ ಬಗ್ಗೆ ಧೃಡವಾದ ಪುರಾವೆಗಳನ್ನು ನೀಡುತ್ತಿದ್ದೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮೆಡಿಕಲ್ ಅಂಕಾಲಜಿಸ್ಟ್ ಡಾ. ಪ್ರಸಾದ್ ಪಿ.ಗುಣಾರಿ, ಅರಿವಳಿಕೆ ತಜ್ಞರಾದ ಡಾ.ವಿಜಯ ಚಂದ್ರಪ್ಪ, ಪ್ರಶಾಂತ್, ತ್ರಿವೇಣಿ ಶೆಟ್ಟಿ ಮುಂತಾದವರಿದ್ದರು.