ಮೈಷುಗರ್ ಕಾರ್ಖಾನೆಯಲ್ಲಿ ಮೂಲಭೂತ ವ್ಯವಸ್ಥೆ ಕಲ್ಪಿಸಲು ಡೀಸಿ ಡಾ.ಕುಮಾರ್ ಸೂಚನೆ

| Published : Aug 23 2025, 02:00 AM IST

ಸಾರಾಂಶ

ಕಬ್ಬು ಅರಿಯುವಿಕೆಯ ವೇಗ ಕಡಿಮೆ ಇದ್ದು, ಪ್ರತಿ ದಿನ 2400 ರಿಂದ 2500 ಟನ್ ಕಬ್ಬು ಅರಿಯುವ ರೀತಿ ವೇಗ ಹೆಚ್ಚಿಸಿ ಕೊಳ್ಳಲು ಕ್ರಮ ವಹಿಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಮೈಷುಗರ್ ಸಕ್ಕರೆ ಕಾರ್ಖಾನೆಯಲ್ಲಿ ರೈತರಿಗೆ‌ ಕುಡಿಯುವ ನೀರಿನ ಆರ್.ಒ ಅಳವಡಿಕೆ ಸೇರಿ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಜಿಲ್ಲಾಧಿಕಾರಿ ಡಾ.ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮೈಷುಗರ್ ಸಕ್ಕರೆ ಕಾರ್ಖಾನೆ ಸಮಸ್ಯೆಗಳ ಕುರಿತಂತೆ ರೈತ ಮುಖಂಡರೊಂದಿಗೆ ಸಭೆಯಲ್ಲಿ, ಕಾರ್ಖಾನೆಯಲ್ಲಿನ ಬಾಯ್ಲರ್ ತೊಂದರೆಯಿಂದ ಕಬ್ಬು ಅರಿಯುವ ಕೆಲಸ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ರೈತರು ದೂರಿದರು.

ಎತ್ತಿನ ಗಾಡಿ ಹಾಗೂ ಕಬ್ಬಿನೊಂದಿಗೆ ಮೈಷುಗರ್ ಹೊರ ಆವರಣದಲ್ಲಿ ಕಾಯುವ ಪರಿಸ್ಥಿತಿ ಎದುರಾಗಿದೆ. ಕಬ್ಬು ಅರಿಯುವಿಕೆ ಕುರಿತು ಸರಿಯಾದ ಮಾಹಿತಿ ದೊರೆಯುತ್ತಿಲ್ಲ ಎಂಬ ಹಲವು ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿದರು.

ಜಿಲ್ಲಾಧಿಕಾರಿ ಡಾ.ಕುಮಾರ್ ಮಾತನಾಡಿ, ಷುಗರ್ ಹೊರಾವರಣದಲ್ಲಿ ಪ್ರತಿ ದಿನ ಕಬ್ಬು ಅರಿಯುವಿಕೆ ಮಾಹಿತಿಯನ್ನು ಅನಾವರಣಗೊಳಿಸಬೇಕು ಹಾಗೂ ಒಬ್ಬರು ಗಾರ್ಡ್, ಸೂಪರ್ ವೈಸರ್ ರನ್ನು ಮಾಹಿತಿ ನೀಡಲು ನೇಮಕ ಮಾಡಬೇಕು ಎಂದರು.

ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ, ಕ್ಯಾಂಟೀನ್ ತೆರೆಯಲು ಸ್ಥಳದ ವ್ಯವಸ್ಥೆ ‌ಮಾಡಿ ಆಸಕ್ತರು ಇಚ್ಛಿಸಿದಲ್ಲಿ ತೆರೆಯಲು ಅವಕಾಶ ಮಾಡಿಕೊಡಬೇಕು. ಇದರಿಂದ ರೈತರು ಆಹಾರ ಖರೀದಿಸಲು ದೂರದ ಸ್ಥಳಕ್ಕೆ ತೆರಳುವುದು ತಪ್ಪುತ್ತದೆ ಎಂದು ಹೇಳಿದರು.

ಕಬ್ಬು ಅರಿಯುವಿಕೆಯ ವೇಗ ಕಡಿಮೆ ಇದ್ದು, ಪ್ರತಿ ದಿನ 2400 ರಿಂದ 2500 ಟನ್ ಕಬ್ಬು ಅರಿಯುವ ರೀತಿ ವೇಗ ಹೆಚ್ಚಿಸಿ ಕೊಳ್ಳಲು ಕ್ರಮ ವಹಿಸಬೇಕು. ಸುತ್ತ ಮುತ್ತಲಿನ ಸಕ್ಕರೆ ಕಾರ್ಖಾನೆಯಲ್ಲಿ ಸಕ್ಕರೆ ರಿಕವರಿ 9.6 ರಿಂದ 9.7 ಇದ್ದು, ಮೈಷುಗರ್ ನಲ್ಲಿ ಕಡಿಮೆ ಇದೆ. ಈ ಕುರಿತಂತೆ ಅಧಿಕಾರಿಗಳು ಪರಿಶೀಲನೆ ನಡೆಸಿ ವರದಿ ನೀಡಬೇಕು ಎಂದರು.

ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ್, ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ಹಾಗೂ ಇನ್ನಿತರೆ ವಿಷಯಗಳ ಬಗ್ಗೆ ವಿವರಿಸಿದರು.

ಸಭೆಯಲ್ಲಿ ಮೈಷುಗರ್ ವ್ಯವಸ್ಥಾಪಕ ನಿರ್ದೇಶಕ ಮಂಗಲ್ ದಾಸ್, ಜನರಲ್ ಮ್ಯಾನೇಜರ್ (ತಾಂತ್ರಿಕ) ಅಪ್ಪ‌ ಸಾಹೇಬ್ ಪಾಟೀಲ್, ಆಹಾರ ಇಲಾಖೆ ಜಂಟಿ ನಿರ್ದೇಶಕ ಪ್ರತೀಕ್ ಸೇರಿ ರೈತ ಮುಖಂಡರು ಉಪಸ್ಥಿತರಿದ್ದರು.