ಡಿ. 29, 30 ರಂದು ವೈಜ್ಞಾನಿಕ ಪರಿಷತ್ತಿನ ರಾಜ್ಯ ಸಮ್ಮೇಳನ

| Published : Jun 20 2025, 12:35 AM IST

ಸಾರಾಂಶ

D. State Conference of Scientific Council on 29th, 30th

-ಸತ್ಯದ ಅನ್ವೇಷಣೆ

-ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ಸಮ್ಮೇಳನ ಪೂರ್ವಭಾವಿ ಸಭೆ

--------

ಕನ್ನಡಪ್ರಭ ವಾರ್ತೆ ಯದಗಿರಿ

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ 5ನೇ ರಾಜ್ಯ ಸಮ್ಮೇಳನವನ್ನು ಯಾದಗಿರಿಯಲ್ಲಿ ಇದೇ ವರ್ಷದ ಡಿ.29 ಮತ್ತು 30 ರಂದು ಎರಡು ದಿನಗಳ ಕಾಲ ನಿಗದಿಪಡಿಸಲಾಗಿದ್ದು, ಯಶಸ್ವಿಗೆ ಸಹಯೋಗ ನೀಡುವಂತೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಹುಲಕಲ್ ನಟರಾಜ ಮನವಿ ಮಾಡಿದರು.

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ಸಮ್ಮೇಳನ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ವಿಜ್ಞಾನ ಎಂದರೇ ಧರ್ಮ, ಧರ್ಮವೆಂದರೆ ಸತ್ಯ. ಸತ್ಯವೇ ಧರ್ಮವಾಗಿದ್ದು, ಸತ್ಯದ ಅನ್ವೇಷಣೆ ಅನಾವರಣದ ಉದ್ದೇಶ ಹೊಂದಿರುವ ಸಮ್ಮೇಳನ ಯಶಸ್ವಿಗೆ ಜಿಲ್ಲೆಯ ಜನತೆಯ ಸಂಘ ಸಂಸ್ಥೆಗಳ ಸಹಯೋಗ ಸಹಕಾರ ಅಗತ್ಯವಾಗಿದೆ ಎಂದರು. ಸಮ್ಮೇಳನಾಧ್ಯಕ್ಷರ ಆಯ್ಕೆ, ಕಾರ್ಯಕ್ರಮಗಳ ಗೋಷ್ಠಿಗಳು ಸೇರಿದಂತೆ ಪ್ರತಿಯೊಂದರ ಬಗ್ಗೆಯೂ ಮಾಹಿತಿ ನೀಡಬೇಕು ಎಂದೂ ಅವರು ತಿಳಿಸಿದರು.

ಸಮ್ಮೇಳನ ಯಶಸ್ವಿಗೆ ಕಾರ್ಯಕ್ರಮದ ರೂಪುರೇಷೆಗಳನ್ನು ಸಿದ್ಧಪಡಿಸಲು ಸಲಹೆ ಸೂಚನೆ ನೀಡುವಂತೆ ಕೋರಿದ ಅವರು ಜಿಲ್ಲೆಯಲ್ಲಿ ಸಮ್ಮೇಳನ ನಡೆಯುತ್ತಿರುವುದರಿಂದ ಜಿಲ್ಲೆಗೆ ಆದ್ಯತೆ ಸಿಗುವಂತೆ ರೂಪುರೇಷೆ ಸಿದ್ಧಪಡಿಸಬೇಕಿದೆ ಎಂದರು.

ಸಮ್ಮೇಳನಕ್ಕೆ ರಾಜ್ಯ ಸರ್ಕಾರದ ವಿಜ್ಞಾನ ಅಕಾಡೆಮಿ ಸೇರಿದಂತೆ ಸರ್ಕಾರ ಆರ್ಥಿಕ ನೆರವು ನೀಡಲಿದೆ. ಅಲ್ಲದೇ ಇಸ್ರೋ, ಬಿಇಎಲ್, ಬಿಎಚ್‌ಇಎಲ್ ಸೇರಿದಂತೆ ಅನೇಕ ವಿಜ್ಞಾನ ತಂತ್ರಜ್ಞಾನ ಇಲಾಖೆಯ ಸಹಯೋಗ ಸಿಗದಲಿದೆ ಇವೆಲ್ಲವುಗಳ ತಂಡಗಳು ಜಿಲ್ಲೆಗೆ ಆಗಮಿಸಿ ಎರಡು ದಿನಗಳ ಕಾಲ ಜಿಲ್ಲೆಯನ್ನು ವಿಜ್ಞಾನಮಯವಾಗಿಸಲಿವೆ ಎಂದು ತಿಳಿಸಿದರು.

ಸಾನಿಧ್ಯವಹಿಸಿದ್ದ ಗುರುಮಠಕಲ್ ಖಾಸಾಮಠದ ಗುರುಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಬಸವಣ್ಣನವರ ವಚನಗಳನ್ನು ಕೇವಲ ಕಂಠಪಾಠ ಮಾಡದೇ ಅವುಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಂಡರೆ ಸಾಕು, ಯಾವುದೇ ಅಜ್ಞಾನ, ಸುಳ್ಳು, ಮೌಢ್ಯಗಳು ಇರುವುದಿಲ್ಲ. ಆದರೆ, ವಚನ ಪಠಣಕ್ಕೆ ಕೊಟ್ಟಷ್ಟು ಮಹತ್ವ ಆಚರಣೆಗೆ ಕೊಟ್ಟಿಲ್ಲದಿರುವುದೇ ಸಮಸ್ಯೆಗೆ ಮೌಢ್ಯ ಹೆಚ್ಚಳಕ್ಕೆ ಕಾರಣವಾಗಿದೆ ಎಂದರು.

ಸಭೆಯಲ್ಲಿ ಬೀದರ್ ಜಿಲ್ಲೆಯ ಬೌದ್ಧ ಬಿಕ್ಕು ಧಮ್ಮ ನಾಗ ಭಾಂತೇಜಿ, ಯಾದಗಿರಿಯ ಮೌಲಾನಾ ಹಫೀಜ್, ಡಾನ್ ಬಾಸ್ಕೋದ ಫಾದರ್ ವಿವೇಕ, ಸಂಶೋಧನಾ ಪರಿಷತ್ತಿನ ರಾಜ್ಯ ಮುಖಂಡರಾದ ಓಂಕಾರ್ ನಾಯಕ್, ಹಾಸನದ ಕಮಲ್ ಕುಮಾರ್, ಭಾರತ ಸೇವಾದಲ್ ವಿಭಾಗೀಯ ಉಪಾಧ್ಯಕ್ಷ ಚೆನ್ನಾರೆಡ್ಡಿ ಬಿಳ್ಹಾರ, ಶ್ರವಣಕುಮಾರ, ವೀರಶೈವ ಮಹಾಸಭೆ ಜಿಲ್ಲಾಧ್ಯಕ್ಷ ಚನ್ನಪ್ಪಗೌಡ ಮೋಸಂಬಿ, ಶರಣ ಸಾಹಿತಿ, ಪತ್ರಕರ್ತ ವಿಶ್ವಾರಾಧ್ಯ ಸತ್ಯಂಪೇಟೆ, ಮಹಾಸಭಾ ಮಾಜಿ ಅಧ್ಯಕ್ಷ ಸೋಮಶೇಖರ್ ಮಣ್ಣೂರ, ಜಿಲ್ಲೆಯ ಮುಖಂಡರಾದ ಬಸವರಾಜ್ ಜೈನ್, ಬಿಜೆಪಿ ನಾಯಕಿ ನಾಗರತ್ನಾ ಕುಪ್ಪಿ, ಯುವ ಮುಖಂಡ ಮಹೇಶ್ ರೆಡ್ಡಿ ಮುದ್ನಾಳ, ಕಾಂಗ್ರೆಸ್ ರಾಜ್ಯ ಪ್ರಚಾರ ಸಮಿತಿ ಉಪಾಧ್ಯಕ್ಷ, ಡಾ. ಭೀಮಣ್ಣ ಮೇಟಿ ಸೇರಿದಂತೆ ಇನ್ನಿತರ ಮುಖಂಡರು ಸಲಹೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಹುಲಕಲ್ ನಟರಾಜ್ ಅವರಿಗೆ ಜಿಲ್ಲಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

ಶರಣು ನಾಟೇಕರ್ ಕ್ರಾಂತಿಗೀತೆ ಮೂಲಕ ಪ್ರಾರ್ಥನೆ ಮಾಡಿದರು. ವೈಜ್ಞಾನಿಕ ಪರಿಷತ್ತಿನ ಜಿಲ್ಲಾಧ್ಯಕ್ಷ ಗುಂಡಪ್ಪ ಕಲಬುರ್ಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರೈತ ಸಂಘದ ರಾಜ್ಯ ನಾಯಕಿ ನಾಗರತ್ನ ಯಕ್ಷಿಂತಿ ಸಂವಿಧಾನ ಪೀಠಿಕೆ ಬೋಧಿಸಿದರು. ಜಗದೀಶ್ ನೂಲಿನವರ್ ನಿರೂಪಿಸಿದರು.

-----

19ವೈಡಿಆರ್3 : ಯಾದಗಿರಿ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಸಮ್ಮೇಳನ ಪೂರ್ವಭಾವಿ ಸಭೆ ಜರುಗಿತು.