ಕನ್ನಡಪ್ರಭ ವಾರ್ತೆ ಬಾಗಲಕೋಟೆ
ವೈದ್ಯಕೀಯ ಕ್ಷೇತ್ರದಲ್ಲಿ ವಿಶ್ವಾಸರ್ಹ ಸೇವೆ ಮೂಲಕ ಮನ್ನಣೆಗಳಿಸಿರುವ ನಗರದ ದಡ್ಡೇನವರ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಿಂದ ನಿರ್ಮಾಣಗೊಂಡಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಬಾಗಲಕೋಟೆ ಹೃದಯ ಕೇಂದ್ರವು ಏ.12 ರಂದು ಬೆಳಗ್ಗೆ 10.30ಕ್ಕೆ ಲೋಕಾರ್ಪಣೆಗೊಳ್ಳಲಿದೆ ಎಂದು ಆಸ್ಪತ್ರೆಯ ಮುಖ್ಯಸ್ಥ, ಹಿರಿಯ ತಜ್ಞ ಡಾ.ಎಂ.ಎಸ್.ದಡ್ಡೇನವರ ಹೇಳಿದರು.ನಗರದ ಆಸ್ಪತ್ರೆಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ಆಸ್ಪತ್ರೆಯೂ ಉತ್ತರ ಕರ್ನಾಕದಲ್ಲೇ ಹಲವು ಪ್ರಥಮಗಳಿಗೆ ಸಾಕ್ಷಿಯಾಗುತ್ತಿದ್ದು, ಅಂತಾರಾಷ್ಟ್ರೀಯ ಗುಣಮಟ್ಟದ ಚಿಕಿತ್ಸೆಯನ್ನು ಒದಗಿಸುವ ನಿಟ್ಟಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತೆರೆಯಲಾಗುತ್ತಿದೆ. ಹೃದ್ರೋಗ ಶಸ್ತ್ರಚಿಕಿತ್ಸೆಗಾಗಿಯೇ ವಿಶೇಷ ಶಸ್ತ್ರಚಿಕಿತ್ಸಾ ಕೊಠಡಿಯಿದ್ದು, ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿದೆ ಎಂದು ವಿವರಿಸಿದರು. ಐದು ದಶಕಗಳ ಸೇವೆಯ ಅನುಭವವನ್ನು ಆಧರಿಸಿ ಬಾಗಲಕೋಟೆಗೆ ಅಗತ್ಯವಿರುವ ರೀತಿಯಲ್ಲಿ ಆಸ್ಪತ್ರೆ ನಿರ್ಮಿಸಿದ್ದೇವೆ. ಹಿಂದಿನಿಂದಲೂ ಅಲ್ಪಲಾಭ ಅಧಿಕ ಸೇವೆ ಎಂಬುವುದು ನಮ್ಮ ಆಸ್ಪತ್ರೆಯ ಧ್ಯೇಯ. ರೋಗಿಗಳಿಗೆ ಎಲ್ಲ ಬಗೆಯ ಆಧುನಿಕ ಸೇವೆಗಳ ಜತೆಗೆ ಸಿಬ್ಬಂದಿಯಿಂದ ಮಾತೃ ವಾತ್ಸಲ್ಯದ ಸೇವೆ ಲಭಿಸಲಿದೆ ಎಂದು ತಿಳಿಸಿದರು.ಹೃದ್ರೋಗ ತಜ್ಞ ಡಾ.ಸಂತೋಷ ಚಿಕ್ಕೋಡಿ ಮಾತನಾಡಿ, ಹೃದ್ರೋಗಕ್ಕೆ ಸಂಬಂಧಿಸಿದಂತೆ ತಕ್ಷಣ ಚಿಕಿತ್ಸೆ ಸಿಗುವ ಎಲ್ಲ ವ್ಯವಸ್ಥೆ ನಮ್ಮಲ್ಲಿದೆ. ಈ ಭಾಗದಲ್ಲಿ ಮೊದಲ ಬಾರಿಗೆ ಎನ್ನುವಂತೆ ಅನೇಕ ತಂತ್ರಜ್ಞಾನಗಳನ್ನು ನಾವು ನಮ್ಮ ಆಸ್ಪತ್ರೆ ಮೂಲಕ ಒದಗಿಸುತ್ತಿದ್ದೇವೆ. 24/7 ರೋಗಿ ಬಂದಾಗ ವಿಶೇಷ ಪರಿಣಿತ ತಜ್ಞರೇ ರೋಗಿಗಳನ್ನು ಉಪಚರಿಸಲಿದ್ದಾರೆ. ನಮ್ಮ ಐಸಿಯುಗಳು ಸಹ ಅತ್ಯಂತ ನೈರ್ಮಲ್ಯದಿಂದ ಕೂಡಿರುತ್ತವೆ. ರೋಗಗಳು ಹರಡದಂತೆ ಪ್ರತ್ಯೇಕ ವಿಭಾಗಗಳಲ್ಲೇ ರೂಪಿಸಲಾಗಿದೆ. ಸರ್ಕಾರದ ಎಲ್ಲ ಸೌಲಭ್ಯಗಳನ್ನು ಅಳವಡಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ ಎಂದರು. ಆಸ್ಪತ್ರೆಯ ಇನ್ನೋರ್ವ ಮುಖ್ಯಸ್ಥ ಡಾ.ವಿಜಯ ದಡ್ಡೇನವರ ಮಾತನಾಡಿ, ಮೊಣಕಾಲು ಚಿಪ್ಪು ಜೋಡಣೆಯೂ ಸೇರಿದಂತೆ ಎಲವು, ಮೂಳೆಗಳಿಗೆ ಸಂಬಂಧಿಸಿದ ಚಿಕಿತ್ಸೆಗೂ ಅತ್ಯಾಧುನಿಕ ವ್ಯವಸ್ಥೆ ನಮ್ಮಲ್ಲಿದೆ. ಡಿಲಕ್ಸ್, ಅಲ್ಟ್ರಾ ಡಿಲಕ್ಸ್ ರೂಮುಗಳ ವ್ಯವಸ್ಥೆಯಿದ್ದು, ಆಸ್ಪತ್ರೆಯ ವಾತಾವರಣದಿಂದ ರೋಗಿಗಳನ್ನು ಹೊರಗೆ ತಂದು ಅವರಿಗೆ ನೆಮ್ಮದಿ ಸಿಗುವ ರೀತಿಯಲ್ಲಿ ಆಸ್ಪತ್ರೆ ರೂಪಗೊಂಡಿದೆ. ನಮ್ಮ ಬಹುದಿನಗಳ ಕನಸು ಈ ಮೂಲಕ ಸಾಕಾರಗೊಂಡಿದೆ. ಸೂಕ್ತ ಸಮಯದಲ್ಲಿ ಜನ ಬಂದು ಚಿಕಿತ್ಸೆ ಪಡೆದರೆ ಭವಿಷ್ಯದಲ್ಲಿನ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ದಡ್ಡೇನವರ ಆಸ್ಪತ್ರೆ ಹಿಂದಿನಿಂದಲೂ ತನ್ನ ಬದ್ಧತೆ ಮೂಲಕವೇ ಜನರಿಗೆ ಹತ್ತಿರವಾಗಿದೆ. ನೂತನ ಆಸ್ಪತ್ರೆಯೂ ಏ.20ರಿಂದ ರೋಗಿಗಳ ಸೇವೆಗೆ ಮುಕ್ತಗೊಳ್ಳಲಿದೆ ಎಂದು ಮಾಹಿತಿ ನೀಡಿದರು. ಡಾ.ನೇಹಾ ದಡ್ಡೇನವರ ಮಾತನಾಡಿ, ಬಂಜೆತನ ನಿವಾರಣೆಯಲ್ಲಿ ನಮ್ಮ ಆಸ್ಪತ್ರೆ ಶೇ.70 ಮೀರಿದ ಸಾಧನೆ ಮಾಡಿದೆ. ನಾನು ಡಾ.ಕಾಮಿನಿರಾವ್ ಅವರ ಅಡಿಯಲ್ಲಿ ಕೆಲಸ ಮಾಡಿ ಬಂದು, ಅದೇ ಶಿಸ್ತು ಅಳವಡಿಸಿಕೊಂಡಿದ್ದೇನೆ. ನಮ್ಮ ಬಳಿ ಬಂದವರು ಗರ್ಭಧರಿಸುವುಷ್ಟೇ ಅಲ್ಲ ಮಗುವಿನೊಂದಿಗೆ ಖುಷಿಯ ಜೀವನ ಸಾಗಿಸಬೇಕೆಂಬುವುದು ನಮ್ಮ ಗುರಿ ಅದಕ್ಕಾಗಿ ಕಾಳಜಿ ಪೂರ್ವಕವಾಗಿ ನಾವು ಸೇವೆ ಸಲ್ಲಿಸುತ್ತ ಬಂದಿದ್ದೇವೆ. ಇನ್ನು ಮುಂದೆ ಅತ್ಯಾಧುನಿಕ ಸೇವೆಗಳೊಂದಿಗೆ ಅದು ಮುಂದವರಿಯಲಿದೆ ಎಂದರು. ವಿರ್ಯಾಣು ಬ್ಯಾಂಕ್, ಬಾಡಿಗೆ ತಾಯಿಯಂಥ ಸೇವೆಗಳಿಗೆ ಸರ್ಕಾರದ ಅಧಿಕೃತ ಪರವಾನಿಗೆ ಹೊಂದಿದ್ದೇವೆ. ಚಿಕ್ಕ ವಯಸ್ಸಿನಲ್ಲಿ ಕ್ಯಾನ್ಸರ್ಗೆ ಗುರಿಯಾಗಿ ಚಿಕಿತ್ಸೆಗೆ ಒಳಗಾಗುವವರು ಅದರ ಚಿಕಿತ್ಸೆ ನಂತರ ವೀರ್ಯಾಣು ಕಳೆದುಕೊಳ್ಳುವ ಸಂಭವವಿರುತ್ತದೆ ಅಂಥವರು ಮೊದಲೇ ವಿರ್ಯಾಣು ಸಂಗ್ರಹಿಸಿಟ್ಟರೆ ಮುಂದೆ ಅವರಿಗೆ ಮಕ್ಕಳು ಪಡೆಯಲು ಅನುಕೂಲವಾಗುತ್ತದೆ. ಆದರೆ, ಅದರ ಸಂಗ್ರಹ ವೈಜ್ಞಾನಿಕವಾಗಿರಬೇಕು. ಅಂಥ ಸೇವೆಗಳು ದಡ್ಡೇನವರ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಲಭ್ಯವಿವೆ ಎಂದರು. ಡಾ.ಸುಮಂಗಲಾ ದಡ್ಡೇನವರ, ಡಾ.ಆನಂದ ದಡ್ಡೇನವರ, ಡಾ.ಬಸವರಾಜ ದಡ್ಡೇನವರ, ಡಾ.ಶಶಿಧರ ಖಾನಾಪುರ ಮತ್ತಿತರರು ಇದ್ದರು.ಕೊಪ್ಪಳ ಗವಿಸಿದ್ದೇಶ್ವರ ಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ, ಬಾಗಲಕೋಟೆ ಚರಂತಿಮಠದ ಪ್ರಭುಸ್ವಾಮೀಜಿ ಅವರಿಂದ ನೂತನ ಆಸ್ಪತ್ರೆ ಲೋಕಾರ್ಪಣೆಗೊಳ್ಳಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಬವಿವ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಲೋಕಾರ್ಪಣೆಗೊಳಿಸುವರು. ಜಿಲ್ಲೆಯ ಸಚಿವರು, ಶಾಸಕರು, ಮಾಜಿ ಶಾಸಕರು ಸಮಾರಂಭದಲ್ಲಿ ಪಾಲ್ಗೊಳ್ಳುವರು.
-ಡಾ.ಎಂ.ಎಸ್.ದಡ್ಡೇನವರ, ಆಸ್ಪತ್ರೆಯ ಮುಖ್ಯಸ್ಥ, ಹಿರಿಯ ತಜ್ಞರು.